ಚಂಡೀಗಢ: ಸಾಮಾಜಿಕ ಜಾಲತಾಣದ ಖ್ಯಾತ ಇನ್ಫುಯೆನ್ಸರ್ ಮಂಜೀತ್ ಕೌರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ತಿರುವು ಸಿಕ್ಕಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಗ ಆಸ್ಪತ್ರೆಯಲ್ಲಿ ಅವರು ನೀಡಿದ್ದ ಕೊನೆಯ ಹೇಳಿಕೆಯ ವೀಡಿಯೋ ಈಗ ಬಹಿರಂಗವಾಗಿದೆ.
ವೀಡಿಯೋದಲ್ಲಿ ಮಂಜೀತ್ ಕೌರ್ ತಮ್ಮ ಮೇಲಿನ ಭೀಕರ ದಾಳಿಯನ್ನು ವಿವರಿಸುತ್ತಾ, “ಸುರ್ಜಿತ್, ಶುಭಿ, ನೇಹಾ ಮತ್ತು ಇಬ್ಬರು ವ್ಯಕ್ತಿಗಳು ಸೇರಿ ನನಗೆ ಬೆಂಕಿ ಹಚ್ಚಿದರು. ನನಗೆ ಈ ಸ್ಥಿತಿ ತಂದೊಡ್ಡಿದ ಆರೋಪಿಗಳಿಗೆ ಶೀಘ್ರವೇ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಆಡಳಿತಕ್ಕೆ ಮನವಿ ಮಾಡಿದ್ದಾರೆ.
ಜುಲೈನಲ್ಲಿ ತೀವ್ರ ಸುಟ್ಟ ಗಾಯಗಳಿಂದ ಮೊಹಾಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಂಜೀತ್ ಅವರನ್ನು ನಂತರ ಚಂಡೀಗಢದ PGIMER ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಸುಮಾರು ಮೂರು ತಿಂಗಳ ಕಾಲ ಮೃತ್ಯುವಿನೊಡನೆ ಹೋರಾಡಿದ ಅವರು ಆಗಸ್ಟ್ ಕೊನೆಯ ವಾರದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ಪೊಲೀಸ್ ತನಿಖೆ ಮತ್ತು ಬಂಧನ:
ಘಟನೆಗೆ ಸಂಬಂಧಿಸಿದಂತೆ ಚಂಡೀಗಢ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಪ್ರಮುಖ ಆರೋಪಿ ರಿಂಕು ಎಂಬಾತನ ಸಹಚರ ಪರ್ಮಿಂದರ್ ಸಿಂಗ್ ಅಲಿಯಾಸ್ ಪಿಂಡಾನನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಮುಖ್ಯ ಆರೋಪಿ ರಿಂಕುಗಾಗಿ ಶೋಧ ಕಾರ್ಯ ಮುಂದುವರಿದಿದೆ. ಹೊಸದಾಗಿ ಸಿಕ್ಕಿರುವ ವೀಡಿಯೋದ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.





Leave a comment