ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರ್ ನಗರದಲ್ಲಿ ನಡೆದಿದ್ದ ಕೋಟ್ಯಧಿಪತಿ ದವಾ ವ್ಯಾಪಾರಿ ವಿನೀತ್ ಮಿನೋಚಾ (63) ಅವರ ಭೀಕರ ಕೊಲೆ ಪ್ರಕರಣದಲ್ಲಿ ರೋಚಕ ತಿರುವು ಸಿಕ್ಕಿದೆ. ಸಿಸಿಟಿವಿ ಕಣ್ಗಾವಲು ಹಾಗೂ ಖರ್ಚು-ವೆಚ್ಚಗಳ ಮೇಲಿನ ಕಠಿಣ ನಿಯಂತ್ರಣಕ್ಕೆ ಬೇಸತ್ತು, ಸ್ವತಃ ಮೃತರ ಸೊಸೆಯೇ ಹಳೆ ನೌಕರನಿಗೆ ಸುಫಾರಿ ನೀಡಿ ಈ ಹತ್ಯೆಯನ್ನು ಮಾಡಿಸಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಘಟನೆಯ ವಿವರ:
ಕಲ್ಯಾಣಪುರದ ಪ್ರತಿಷ್ಠಿತ ‘ರತನ್ ಆರ್ಬಿಟ್’ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ಪ್ರಮುಖ ಔಷಧ ವ್ಯಾಪಾರಿ ವಿನೀತ್ ಮಿನೋಚಾ ಅವರು ಶನಿವಾರ ರಾತ್ರಿ ತಮ್ಮ ಫ್ಲಾಟ್ನಲ್ಲಿ ರಕ್ತಸಿಕ್ತ ಮೃತದೇಹವಾಗಿ ಪತ್ತೆಯಾಗಿದ್ದರು. ಆರಂಭದಲ್ಲಿ ದರೋಡೆ ಅಥವಾ ಅಜ್ಞಾತ ದುಷ್ಕರ್ಮಿಗಳ ಕೃತ್ಯವೆಂದು ಶಂಕಿಸಲಾಗಿದ್ದರೂ, ಅಪಾರ್ಟ್ಮೆಂಟ್ನ ಸಿಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಸಲಿ ರಹಸ್ಯ ಹೊರಬಂತು. ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಮುಖ ಆರೋಪಿಗಳಾದ ವಿಶಾಲ್ ಹಾಗೂ ರಾಜಕಿಶೋರ್ ಎನ್ಕೌಂಟರ್ ಬಳಿಕ ಬಂಧಿಸಲ್ಪಟ್ಟರು.
ಹತ್ಯೆಗೆ ಕಾರಣವೇನು?
ಸಿಸಿಟಿವಿ ಕಣ್ಗಾವಲು: ಮನೆಯೊಳಗೆ ಸಿಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿ ಸೊಸೆ ಶಾಲೂ ಅವರ ಪ್ರತಿ ಚಲನವಲನಗಳ ಮೇಲೆ ಮಾವ ವಿನೀತ್ ಮಿನೋಚಾ ತೀವ್ರ ಕಣ್ಣಿಟ್ಟಿದ್ದರು. ರಾತ್ರಿ ಪಾರ್ಟಿಗಳಿಗೆ ತೆರಳುವುದನ್ನು ಹಾಗೂ ತಡವಾಗಿ ಮನೆಗೆ ಬರುವುದನ್ನು ಅವರು ತೀವ್ರವಾಗಿ ವಿರೋಧಿಸುತ್ತಿದ್ದರು.
ಹಣಕಾಸು ನಿರ್ಬಂಧ: ಕುಟುಂಬವು ಕೋಟ್ಯಧಿಪತಿಯಾಗಿದ್ದರೂ ಸಹ, ಸಣ್ಣಪುಟ್ಟ ಖರ್ಚುಗಳಿಗೂ ಕೂಡ ಮಾವನ ಬಳಿ ಕೈಯೊಡ್ಡುವ ಪರಿಸ್ಥಿತಿ ಇತ್ತು ಎಂದು ಶಾಲೂ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಜುಲೈ 28 ರಂದು ತಡರಾತ್ರಿ ಪಾರ್ಟಿಯಿಂದ ಬಂದಾಗ ನಡೆದ ಭಾರಿ ಜಗಳವೇ ಈ ಕೊಲೆಗೆ ಪ್ರಮುಖ ತಿರುವಾಯಿತು.
ಸುಫಾರಿ ಹಾಗೂ ಕೃತ್ಯದ ಹಾದಿ:
ಮಾವನ ಕಾಟ ತಾಳಲಾರದೆ ಶಾಲೂ, ಮನೆಯ ಮಾಜಿ ನೌಕರ ವಿಶಾಲ್ ಜೊತೆ ಸೇರಿ 6 ಲಕ್ಷ ರೂ.ಗಳಿಗೆ ಸುಫಾರಿ ಒಪ್ಪಂದ ಮಾಡಿಕೊಂಡಿದ್ದಳು. ಸೆಪ್ಟೆಂಬರ್ 4ರಂದು ಜನ್ಮಾಷ್ಟಮಿ ಹಬ್ಬದ ದಿನದಂದು ನೌಕರನಿಗೆ ಫ್ಲಾಟ್ನ ಡೂಪ್ಲಿಕೇಟ್ ಕೀ ನೀಡಲಾಗಿತ್ತು. ಶನಿವಾರ ರಾತ್ರಿ ಶಾಲೂ ತನ್ನ ಪತಿ ಮತ್ತು ಮಗುವಿನೊಂದಿಗೆ ಪಾರ್ಟಿಗೆ ತೆರಳಿದ ತಕ್ಷಣ, ಹಂತಕರು ಒಳನುಗ್ಗಿ ವಿನೀತ್ ಮಿನೋಚಾ ಅವರನ್ನು ಬಾಣೆಯಿಂದ 26 ಬಾರಿ ಇರಿದು ಬರ್ಬರವಾಗಿ ಹತ್ಯೆಗೈದಿದ್ದಾರೆ.
ನಂತರ ರಾತ್ರಿ 3 ಗಂಟೆಗೆ ವಾಪಸ್ ಬಂದ ಸೊಸೆ ಮತ್ತು ಮಗ ನಾಟಕೀಯವಾಗಿ ಜೋರಾಗಿ ಅಳುವ ಮೂಲಕ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದರು. ಸದ್ಯ ಪೊಲೀಸರು ಶಾಲೂಳನ್ನು ಬಂಧಿಸಿ ಜೈಲಿಗಟ್ಟಿದ್ದು, ಆಕೆಯ ಪತಿ ಸುಬ್ರತ್ನ ಪಾತ್ರದ ಬಗ್ಗೆಯೂ ಸಿಡಿಆರ್ (CDR) ಆಧರಿಸಿ ತೀವ್ರ ತನಿಖೆ ಮುಂದುವರೆಸಿದ್ದಾರೆ.





Leave a comment