ಇತ್ತೀಚೆಗೆ ತೆರೆಕಂಡ ಕೆಜಿಎಫ್ ಹಾಗೂ ಕಾಂತಾರ ಸಿನಿಮಾಗಳು ಇಡೀ ಭಾರತೀಯ ಚಿತ್ರರಂಗ ಮಾತ್ರವಲ್ಲದೆ, ಜಾಗತಿಕವಾಗಿಯೂ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿವೆ. ಈ ಸಿನಿಮಾಗಳು ತೆರೆಕಂಡ ನಂತರ ಒಂದು ಬೇರೆ ರೀತಿಯ ಕ್ರೆಜ್ ಸೃಷ್ಟಿ ಮಾಡಿದೆ ಎಂತಲೇ ಹೇಳಬಹುದು. ಇದರಿಂದ ಸ್ಯಾಂಡಲ್ವುಡ್ನ ಹಿರಿಮೆ ಕೂಡ ಹೆಚ್ಚಾಗಿದೆ ಎನ್ನುವ ಮಾತೂ ಇದೆ.
ಆದರೆ, ಇದೀಗ ಆಂಕರ್ ಸೌಮ್ಯಾ ರಾವ್ ಅವರು ನೀಡಿರುವ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. ಅದರಲ್ಲೂ ಅವರು ಕನ್ನಡ ಚಿತ್ರರಂಗದ ಬಗ್ಗೆ ಆಡಿರುವ ಮಾತುಗಳು ಕನ್ನಡಿಗರನ್ನು ಕೆರಳುವಂತೆ ಮಾಡಿವೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಸೌಮ್ಯಾ ರಾವ್ ಅವರು, ‘ನನಗೆ ಕನ್ನಡ ಚಿತ್ರರಂಗದ ಬಗ್ಗೆ ಹೆಚ್ಚಿನ ಅಭಿಮಾನವೇನಿಲ್ಲ. ಏಕೆಂದರೆ ಅವರು ಒಳ್ಳೆಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದಿಲ್ಲ. ಈ ಕಾರಣದಿಂದಲೇ ಸ್ಯಾಂಡಲ್ವುಡ್ ಚಿಕ್ಕ ಇಂಡಸ್ಟ್ರಿಯಾಗಿ ಉಳಿದಿದೆ’ ಎಂದು ಹೇಳಿದ್ದಾರೆ
ಭವಿಷ್ಯದಲ್ಲಿ ಸ್ಯಾಂಡಲ್ವುಡ್ ಮತ್ತಷ್ಟು ಚಿಕ್ಕ ಇಂಡಸ್ಟ್ರಿಯಾಗುತ್ತೆ, ನೋಡ್ತಾ ಇರಿ ಎಂದು ಸೌಮ್ಯಾರಾವ್ ಹೇಳಿದ್ದಾರೆ. ಆದರೆ ತೆಲುಗು ಇಂಡಸ್ಟ್ರಿ ತುಂಬಾ ದೊಡ್ಡದು, ಏಕೆಂದರೆ ಅವರು ಎಲ್ಲರನ್ನೂ ಬರಮಾಡಿಕೊಳ್ಳುತ್ತಾರೆ. ಹೆಚ್ಚು ಪ್ರೀತಿ ಕೊಡುತ್ತಾರೆ. ತೆಲುಗಿನವರು ವಿಶಾಲ ಹೃದಯ ಹೊಂದಿದ್ದಾರೆ. ಈ ಕಾರಣದಿಂದಲೇ ಅವರಿಗೆ ವಿಶಾಲವಾದ ಇಂಡಸ್ಟ್ರಿ ಕೂಡ ಸಿಕ್ಕಿದೆ, ಇನ್ನೂ ವಿಶಾಲವಾಗಿ ಇಂಡಸ್ಟ್ರಿ ಬೆಳೆಯುತ್ತೆ’ ಎಂದು ಗುಣಗಾನ ಮಾಡಿದ್ದಾರೆ.
ಈಗ ಪುಷ್ಪ ಸಿನಿಮಾ ನೋಡಿ..ಎಂತಾ ಕ್ರೇಜ್ ಹುಟ್ಟಿಸಿದೆ. ಇದಕ್ಕಿಂತಲೂ ಇನ್ನೂ ಹೆಚ್ಚಿಗೆ ತೆಲುಗು ಇಂಡಸ್ಟ್ರಿ ಬೆಳೆಯುತ್ತೆ. ಆದರೆ, ಕನ್ನಡ ಚಿತ್ರರಂಗ ಪ್ರಸ್ತುತ ತುಂಬಾ ಚಿಕ್ಕದಾಗುತ್ತಿದೆ. ಅಲ್ಲಿ ನಿಜವಾದ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗುತ್ತಿಲ್ಲ. ಕೆಜಿಎಫ್ ಯಾವಾಗ ಬಂತು? ಕಾಂತಾರ ಯಾವಾಗ ಬಂತು? ಎರಡು ಮೂರು ವರ್ಷಗಳಿಂದ ಬೇರೆ ಏನೂ ಬಂದಿಲ್ಲವಲ್ಲ?’ ಎಂದು ಸೌಮ್ಯಾ ರಾವ್ ಹೇಳಿದ್ದಾರೆ.ಕನ್ನಡದಲ್ಲಿ ಕೆಜಿಎಫ್, ಕಾಂತಾರ ಬಳಿ ಯಾವ ದೊಡ್ಡ ಸಿನಿಮಾ ಬಂತು? ನಾನು ಕನ್ನಡ ಕಲಾವಿದರ ಬಗ್ಗೆ ದೂಷಿಸುತ್ತಿಲ್ಲ, ಕನ್ನಡ ಇಂಡಸ್ಟ್ರಿ ಹೇಗಿದೆ ಎಂದು ಹೇಳುತ್ತಿದ್ದೇನೆ. ಅಲ್ಲಿ ಪ್ರತಿಭೆಗಳನ್ನು ಪ್ರೋತ್ಸಾಹಿಸುವವರು ಬಹಳ ಕಡಿಮೆ. ಈ ವಿಚಾರದಲ್ಲಿ ನನಗೂ ಬಹಳ ಕೆಟ್ಟ ಅನುಭವಗಳಾಗಿವೆ’ ಎಂದಿದ್ದಾರೆ.ಈ ಹಿಂದೆಯೂ ಸೌಮ್ಯಾ ರಾವ್ ಅವರು ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿ ವಿವಾದಕ್ಕೆ ಗುರಿಯಾಗಿದ್ದರು. ‘ಕನ್ನಡದಲ್ಲಿ ಕೆಲವರು ಲೈಂಗಿಕ ಕಿರುಕುಳ ನೀಡಿದ್ರು. ಅಲ್ಲಿ ನಿರ್ದೇಶಕರು, ನಿರ್ಮಾಪಕರು ಕಮಿಟ್ಮೆಂಟ್ ಕೇಳ್ತಾರೆ, ತೆಲುಗಿನಲ್ಲೂ ಕಾಸ್ಟಿಂಗ್ ಕೌಚ್ ಇರಬಹುದು, ಆದರೆ ನನಗೆ ಅನುಭವ ಆಗಿಲ್ಲ’ ಎಂದು ಹೇಳಿದ್ರು. ಕರ್ನಾಟಕದವರೇ ಆದ ಸೌಮ್ಯಾರಾವ್ ಅವರು ತೆಲುಗು ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಸದ್ಯ ತೆಲುಗು ನಾಡಿನಲ್ಲಿ ಕನ್ನಡ ಚಿತ್ರರಂಗವನ್ನು ಕೀಳುಮಟ್ಟದಲ್ಲಿ ತೋರುವ ಮೂಲಕ ಕನ್ನಡಿಗರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಸೌಮ್ಯಾರಾವ್ ಅವರ ವಿಡಿಯೋ ಸದ್ಯ ವೈರಲ್ ಆಗಿದೆ.