SUDDIKSHANA KANNADA NEWS/ DAVANAGERE/ DATE-03-05-2025
ದಾವಣಗೆರೆ: ಮೇ. 9ರಂದು ಮತ್ತೆ ಸಚಿವ ಸಂಪುಟ ಸಭೆಯಲ್ಲಿ ನನ್ನ ನಿಲುವು ವ್ಯಕ್ತಪಡಿಸುವೆ ಎಂದು ಹೇಳುವ ಮೂಲಕ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೀರಶೈವ ಲಿಂಗಾಯತ ಜಾತಿಯ ಉಪ ಪಂಗಡಗಳ ವಿಚಾರ ಕುರಿತಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದೇವೆ. 90ರಿಂದ ನೂರರಷ್ಟು ಉಪಜಾತಿ ಇವೆ, ಕೆಲವೊಂದು ಬಿಟ್ಟು ಹೋಗಿವೆ. ಎಲ್ಲವನ್ನೂ ಕ್ರೋಢೀಕರಿಸಿ ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದರು.
ಸಚಿವ ಸಂಪುಟ ಸಭೆ ಆಗಿದೆ, ವರದಿ ಬಹಿರಂಗ ಆಗಿದೆ. ವೀರಶೈವ ಲಿಂಗಾಯತ ಸಮಾಜಕ್ಕೆ ಯಾವುದೇ ರೀತಿಯ ತೊಂದರೆ ಆಗದೇ ವರದಿ ಬಿಡುಗಡೆಯಾಗಲಿದ್ದು, ಆತಂಕಕ್ಕೆ ಯಾರೂ ಒಳಗಾಗಬಾರದು ಎಂದು ಹೇಳಿದರಲ್ಲದೇ, ಕೇಂದ್ರ ಸರ್ಕಾರವು ಜನಗಣತಿ ಜೊತೆ ಜಾತಿಗಣತಿ ವಿಚಾರ ಈ ವಿಚಾರವನ್ನು ಸ್ವಾಗತ ಮಾಡುತ್ತೇವೆ ಎಂದು ತಿಳಿಸಿದರು.
ಕುರ್ಚಿ ಉಳಿಸಿಕೊಳ್ಳುವ ವಿಚಾರ ಅಲ್ಲ, ನಮ್ಮದು ಬಸತತ್ವದ ಅಡಿಯಲ್ಲಿ ರಾಜ್ಯ ಸರ್ಕಾರವು ಮುನ್ನಡೆಯುತ್ತಿದೆ. ಎಲ್ಲರಿಗೂ ಸಮಾಜಿಕ ನ್ಯಾಯ ಕೊಡಿಸುವ ಕೆಲಸ ನಾವು ಮಾಡುತ್ತೇವೆ. ಪಂಚಪೀಠಗಳ ಸ್ವಾಮೀಜಿಗಳ ಒಗ್ಗೂಡಿಸುವ ಕೆಲಸವನ್ನು ಶಾಮನೂರು ಶಿವಶಂಕರಪ್ಪ ಮಾಡಲಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ದುಷ್ಕರ್ಮಿಗಳಿಗೆ, ಭಯೋತ್ಪಾದಕರಿಗೆ, ಕೊಲೆಗಡುಕರಿಗೆ ಸಮಾಜಘಾತುಕ ಶಕ್ತಿಗಳಿಗೆ ರಕ್ಷಣೆ ನೀಡಲ್ಲ. ಇಂಥ ಸಮಾಜದ್ರೋಹಿಗಳಿಗೆ ಯಾವುದೇ ಜಾತಿ ಇಲ್ಲ. ಯಾರು ತಪ್ಪು ಮಾಡಿದ್ದಾರೆ, ಕ್ರಿಮಿನಲ್ ಯಾರಿದ್ದಾರೆ ಅವರಿಗೆ ಉಗ್ರ ಶಿಕ್ಷೆ ಕೊಡದೆ ಬಿಡುವುದಿಲ್ಲ. ಮಂಗಳೂರು ಘಟನೆ ತೀವ್ರವಾಗಿ ಖಂಡಿಸಿ ಪೋಲಿಸ್ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.