SUDDIKSHANA KANNADA NEWS/ DAVANAGERE/ DATE-01-05-2025
ದಾವಣಗೆರೆ: ತಾಲೂಕಿನ ಮೆಳ್ಳೇಕಟ್ಟೆ ಗ್ರಾಮದ ಬಳಿ ರಸ್ತೆ ಅಪಘಾತದಿಂದ ಅಸ್ವಸ್ಥಗೊಂಡಿದ್ದ ಗಾಯಾಳುಗಳಿಗೆ ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ಸೇರಿಸಲು ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಪುತ್ರ ಎಂ.ಡಿ ಕೀರ್ತಿ ಕುಮಾರ್ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ದಾವಣಗೆರೆಯಿಂದ ಜಗಳೂರು ಪಟ್ಟಣಕ್ಕೆ ಕಾರಿನಲ್ಲಿ ಎಂ.ಡಿ ಕೀರ್ತಿ ಕುಮಾರ್ ತೆರಳುತ್ತಿದ್ದ ವೇಳೆ ಮೆಳ್ಳೇಕಟ್ಟೆ ಗ್ರಾಮದ ಬಳಿ ರಸ್ತೆ ಅಪಘಾತ ಸಂಭವಿಸಿದೆ. ಈ ವೇಳೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಕೀರ್ತಿ ಕುಮಾರ್ ತಕ್ಷಣ ವಾಹನ ನಿಲ್ಲಿಸಿ ಅಪಘಾತದಿಂದ ಗಾಯಗೊಂಡವರನ್ನು ತಮ್ಮ ಕಾರಿನಲ್ಲಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲು ಕರೆದುಕೊಂಡು ಹೋಗಿದ್ದಾರೆ.
ಬಳಿಕ ಅಂಬ್ಯುಲೆನ್ಸ್ ಬಂದ ಹಿನ್ನೆಲೆ ಗಾಯಾಳುಗಳನ್ನು ಅಂಬ್ಯುಲೆನ್ಸ್ ಮೂಲಕ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಇದಕ್ಕೂ ಮೊದಲು ಆಸ್ಪತ್ರೆ ಅಧೀಕ್ಷಕರಿಗೆ ಕೀರ್ತಿ ಕುಮಾರ್ ಕರೆ ಮಾಡಿ ಮಾಹಿತಿ ನೀಡಿ ತಕ್ಷಣ ಚಿಕಿತ್ಸೆ ನೀಡುವಂತೆ ಮನವಿ ಮಾಡಿದ್ದು, ಪ್ರಾಣ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದ ಗಾಯಾಳುಗಳ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಾಸಕರ ಪುತ್ರ ಕೀರ್ತಿ ಕುಮಾರ್ ಮಾಡಿರುವ ಕಾರ್ಯಕ್ಕೆ ಸಾರ್ವಜನಿಕರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.