SUDDIKSHANA KANNADA NEWS/ DAVANAGERE/ DATE:11-04-2025
ದಾವಣಗೆರೆ: ವಕ್ಫ್ ಮಸೂದೆ ತಿದ್ದುಪಡಿ ಮಂಡನೆ ಕುರಿತಂತೆ ರೈಲು, ಬಸ್ಸಿಗೆ ಬೆಂಕಿ ಹಚ್ಚಬೇಕು, ಒಂದಷ್ಟು ಬಲಿದಾನ ಆಗಬೇಕು ಎಂಬ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದ ಮಹಾನಗರ ಪಾಲಿಕೆ ಮಾಜಿ ಸದಸ್ಯ ಕಬೀರ್ ಖಾನ್ ಬಾಯಿ ತಪ್ಪು ಮಾತನಾಡಿದ್ದಾನೆ. ಉದ್ವೇಗಕ್ಕೊಳಗಾಗಿ ಈ ರೀತಿ ಮಾತನಾಡಿದ್ದು, ವಿಡಿಯೋ ಮಾಡಿ ಕ್ಷಮೆ ಕೇಳಿದ್ದಾನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಷಮೆ ಕೇಳಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾನೆ. ಆದರೆ ಆತ ಬಾಯಿ ತಪ್ಪಿ ಆಡಿದ ಮಾತು ಪ್ರಸಾರ ಆಗುತ್ತಿದೆಯೇ ವಿನಾಃ ಆತ ಕ್ಷಮೆ ಕೇಳಿದ್ದು ಪ್ರಸಾರ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಚೋದನಕಾರಿ ಹೇಳಿಕೆ ಕುರಿತಂತೆ ಎಫ್ ಐಆರ್ ಆಗಿದೆ. ಎಸ್ಪಿ ಅವರ ಜೊತೆ ಮಾತನಾಡಿದ್ದೇನೆ. ಒತ್ತಡಕ್ಕೆ ಸಿಲುಕಿ ಆ ರೀತಿ ಮಾತನಾಡಿದ್ದು ತಪ್ಪು ಎಂದು ನನ್ನಲ್ಲಿಯೂ ಕ್ಷಮೆ ಕೇಳಿದ್ದೇನೆ ಎಂದು ತಿಳಿಸಿದ್ದಾನೆ. ಭಾವನಾತ್ಮಕವಾಗಿ ಮಾತನಾಡಿದ್ದಾನೆ.
ಮತ್ತೊಂದು ಹೇಳಿಕೆ ನೀಡಿದ್ದೇನೆ ಎಂದು ತಿಳಿಸಿದ್ದ ಎಂದರು.
ಕಳೆದ ಕೆಲ ದಿನಗಳ ಹಿಂದೆ ದಾವಣಗೆರೆಯಲ್ಲಿ ವಕ್ಫ್ ಮಸೂದೆ ತಿದ್ದುಪಡಿ ವಿರೋಧಿಸಿ ಮುಸ್ಲಿಂ ಬಾಂಧವರು ಪ್ರತಿಭಟನೆ ನಡೆಸಿದ್ದರು. ಬ್ಯಾನರ್ ಬಂಟಿಂಗ್ಸ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದರು. ಡಿಸಿ ಅಥವಾ ಸಿಎಂಗೆ ಕೊಟ್ಟರೆ ಪ್ರಯೋಜನವಿಲ್ಲ. ರೈಲು, ಬಸ್ಸಿಗೆ ಬೆಂಕಿ ಹಚ್ಚಿ, ಒಂದಷ್ಟು ಪ್ರಾಣ ಬಲಿದಾನ ಆಗಬೇಕು ಎಂಬ ಹೇಳಿಕೆಯನ್ನು ಕಬೀರ್ ಖಾನ್ ನೀಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದರು. ಇದು ರಾಜ್ಯಾದ್ಯಂತ ಆಕ್ರೋಶಕ್ಕೂ ಕಾರಣವಾಗಿತ್ತು.