ಹರ್ದೋಯ್: ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಸಾಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಂಪತಿಗಳ ನಡುವಿನ ದಾಂಪತ್ಯ ಕಲಹವು ತೀವ್ರ ಹಿಂಸಾಚಾರಕ್ಕೆ ತಿರುಗಿದ್ದು, ಪರಸ್ಪರ ಗಂಭೀರ ಗಾಯಗೊಳಿಸಿಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 27 ವರ್ಷದ ಸಾಧನಾ ಎಂಬ ಮಹಿಳೆ ತನ್ನ ಗಂಡನ ಸ್ನೇಹಿತನಾಗಿದ್ದ ಪ್ರೇಮಿಯೊಂದಿಗೆ ಓಡಿಹೋಗಿ, ಸುಮಾರು ಎರಡೂವರೆ ತಿಂಗಳ ನಂತರ ಮನೆಗೆ ಹಿಂತಿರುಗಿದಾಗ ಈ ರಕ್ತಸಿಕ್ತ ಗಲಾಟೆ ಸಂಭವಿಸಿದೆ.
ಹೆಂಡತಿ ಸಾಧನಾ ನೀಡಿದ ಆರೋಪ:
ಬಾಧಿತ ಮಹಿಳೆ ಸಾಧನಾ ಆರೋಪಿಸಿರುವಂತೆ, ಆಕೆ ಗುರುವಾರ ತನ್ನ ಪತಿಯ ಮನೆಗೆ ಬಂದಾಗ ಗಂಡ ದೀಪಕ್, ಮಾವ ಹಾಗೂ ಅತ್ತೆ ಸೇರಿ ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಅತ್ತೆ-ಮಾವಂದಿರು ತನ್ನ ಕೈಗಳನ್ನು ಹಿಡಿದುಕೊಂಡರೆ, ಪತಿ ದೀಪಕ್ ತಲೆಗೆ ಹೊಡೆದು, ಕೋಪದಲ್ಲಿ ಆಕೆಯ ಮೂಗನ್ನು ಕಡಿದು ಚರಂಡಿಗೆ ಎಸೆದಿದ್ದಾನೆ ಎಂದು ಆರೋಪಿಸಿದ್ದಾಳೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಸಾಧನಾಳನ್ನು ಮೊದಲು ಸಾಂಡಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹರ್ದೋಯ್ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ.
ಪತಿ ಹಾಗೂ ಮನೆ ಮಂದಿಯ ಗಂಭೀರ ಪ್ರತ ಆರೋಪ:
ಮತ್ತೊಂದೆಡೆ, ಪತಿ ದೀಪಕ್ ಕುಟುಂಬದವರು ಸಾಧನಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ದೀಪಕ್ ಅವರ ತಾಯಿ ಹೇಳುವಂತೆ, ಸಾಧನಾ ಪಕ್ಕದ ಮನೆಯ ಮೇಲ್ಛಾವಣಿಯಿಂದ ಜಿಗಿದು ಅನಿರೀಕ್ಷಿತವಾಗಿ ಮನೆಗೆ ಅತಿಕ್ರಮಣ ಮಾಡಿದ್ದಳು. ಮನೆಗೆ ಬಂದವಳೇ ತನ್ನ ಮೂವರು ಸಣ್ಣ ಹೆಣ್ಣುಮಕ್ಕಳನ್ನು (8, 6 ಮತ್ತು 3 ವರ್ಷದ ಮಕ್ಕಳು) ಬಲವಂತವಾಗಿ ಕರೆದೊಯ್ಯಲು ಯತ್ನಿಸಿದಾಗ ಜಗಳ ಪ್ರಾರಂಭವಾಯಿತು. ಈ ಗಲಾಟೆಯ ನಡುವೆ ಸಾಧನಾ ತನ್ನ ಗಂಡ ದೀಪಕ್ನ ಖಾಸಗಿ ಅಂಗ ಕಡಿದಿದ್ದಾಳೆ. ಮಾತ್ರವಲ್ಲ, ಮೂಗು ಕಚ್ಚಿದ್ದಾಳೆ. ನಂತರ ತಾನೇ ನೆಲಕ್ಕೆ ತಲೆ ಅಪ್ಪಳಿಸಿಕೊಂಡು ಗಾಯಗೊಳಿಸಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ.
ಪೋಲಿಸ್ ತನಿಖೆ ಮತ್ತು ಪ್ರಸ್ತುತ ಸ್ಥಿತಿ:
ಘಟನೆಯ ಮಾಹಿತಿ ತಿಳಿದ ತಕ್ಷಣ ಸಾಂಡಿ ಠಾಣೆಯ ಪೊಲೀಸರು ಸ್ಥಳಕ್ಕೆ ದಾವಿಸಿ, ದಂಪತಿ ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ಸಾಂಡಿ ಠಾಣೆಯ ಎಸ್ಎಚ್ಒ ಪುಷ್ಪರಾಜ್ ಮಾತನಾಡಿ, “ಅನಿರೀಕ್ಷಿತವಾಗಿ ಸಾಧನಾ ಮನೆಗೆ ಮರಳಿದ್ದರಿಂದ ಈ ಕಲಹ ಏರ್ಪಟ್ಟಿದೆ. ಸದ್ಯಕ್ಕೆ ಸಾಧನಾ ಕಡೆಯಿಂದ ಯಾವುದೇ ಅಧಿಕೃತ ದೂರು ಸಲ್ಲಿಕೆಯಾಗಿಲ್ಲ, ಆದರೆ ಪತಿ ದೀಪಕ್ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
ಸಾಧನಾ ಮತ್ತು ದೀಪಕ್ ದಂಪತಿಗೆ ಮದುವೆಯಾಗಿ 10 ವರ್ಷಗಳಾಗಿದ್ದು, ಮೂವರು ಹೆಣ್ಣುಮಕ್ಕಳಿದ್ದಾರೆ. ಈ ಹಿಂದೆ ಆಕೆ ಪ್ರೇಮಿಯೊಂದಿಗೆ ಓಡಿಹೋದಾಗ ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನ ಮಾಡಿಸಲಾಗಿತ್ತು ಎಂದು ತಿಳಿದುಬಂದಿದೆ.





Leave a comment