ಗುಜರಾತ್: ಆರು ಲಕ್ಷ ರೂಪಾಯಿ ಸಾಲವನ್ನು ಮರುಪಾವತಿಸುವುದರಿಂದ ತಪ್ಪಿಸಿಕೊಳ್ಳಲು ಮತ್ತು ಅಡವಿಟ್ಟಿದ್ದ ಚಿನ್ನಾಭರಣಗಳನ್ನು ಮರಳಿ ಪಡೆಯಲು ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಬ್ಯಾಂಕ್ ಶಾಖಾ ವ್ಯವಸ್ಥಾಪಕರನ್ನು ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಗುಜರಾತ್ನ ಪ್ರಾಂತಿಜ್ನಲ್ಲಿ ಬೆಳಕಿಗೆ ಬಂದಿದೆ.
ಕೊಲೆಯಾದ ವ್ಯಕ್ತಿಯನ್ನು IIFL ಫೈನಾನ್ಸ್ನ ಮಾನ್ಸಾ ಶಾಖೆಯ ಮ್ಯಾನೇಜರ್ ಭರತ್ ಚೌಧರಿ ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಹಿಳೆ ಭಾವನಾ ಅಲಿಯಾಸ್ ಭಾವು ಠಾಕೋರ್ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದು, ಆಕೆಯ ಪ್ರಿಯಕರ ಯೋಗೇಶ್ ಠಾಕೋರ್ ಪ್ರಸ್ತುತ ತಲೆಮರೆಸಿಕೊಂಡಿದ್ದಾನೆ.
ಘಟನೆಯ ವಿವರ:ಪೊಲೀಸರ ತನಿಖೆಯ ಪ್ರಕಾರ, ಭಾವನಾ IIFL ಫೈನಾನ್ಸ್ನಿಂದ 1.50 ಲಕ್ಷ ರೂ. ಹಾಗೂ ಯೋಗೇಶ್ 4.50 ಲಕ್ಷ ರೂ. ಸೇರಿದಂತೆ ಒಟ್ಟು ಆರು ಲಕ್ಷ ರೂ. ಸಾಲ ಪಡೆದಿದ್ದರು. ಈ ಸಾಲಕ್ಕಾಗಿ ಅವರು ತಮ್ಮ ಚಿನ್ನಾಭರಣಗಳನ್ನು ಬ್ಯಾಂಕ್ನಲ್ಲಿ ಅಡವಿಟ್ಟಿದ್ದರು. ಆದರೆ, ತಿಂಗಳ ಕಂತುಗಳನ್ನು ಪಾವತಿಸಲು ಇಷ್ಟವಿಲ್ಲದೆ, ಅಡವಿಟ್ಟ ಚಿನ್ನವನ್ನು ಉಚಿತವಾಗಿ ಪಡೆಯಲು ಇಬ್ಬರೂ ಸೇರಿ ಬ್ಯಾಂಕ್ ಮ್ಯಾನೇಜರ್ ಭರತ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು.
ಸೆಪ್ಟೆಂಬರ್ 2 ರಂದು ಭಾವನಾ, ಸಾಲದ ಹಣವನ್ನು ಹಿಂತಿರುಗಿಸುವುದಾಗಿ ನಂಬಿಸಿ ಭರತ್ ಅವರನ್ನು ಪ್ರಾಂತಿಜ್ಗೆ ಕಳುಹಿಸಿಕೊಡುವಂತೆ ಕರೆ ಮಾಡಿದ್ದಳು. ಮ್ಯಾನೇಜರ್ ಭರತ್ ಅವರನ್ನು ಮಾನ್ಸಾದಿಂದ ಯೋಗೇಶ್ ತನ್ನ ಕಾರಿನಲ್ಲಿ
ಕರೆದುಕೊಂಡು ಹೋಗಿದ್ದನು. ವಡ್ವಾಸ ತಲುಪುತ್ತಿದ್ದಂತೆ, ಕಾರಿನೊಳಗಡೆಯೇ ಭರತ್ ಅವರ ಕುತ್ತಿಗೆಗೆ ಚೂಪಾದ ಆಯುಧದಿಂದ ಇರಿದು ಹತ್ಯೆ ಮಾಡಲಾಗಿದೆ.
ಸಿಕ್ಕಿಬಿದ್ದದ್ದು ಹೇಗೆ?
ಕೊಲೆಯ ನಂತರ ಮೃತದೇಹ ಮತ್ತು ಕಾರನ್ನು ಯಾರೂ ಇಲ್ಲದ ನಿರ್ಜನ ಪ್ರದೇಶದಲ್ಲಿ ವಿಲೇವಾರಿ ಮಾಡಲು ಆರೋಪಿಗಳು ನಿರ್ಧರಿಸಿದ್ದರು.
ಲಿಮ್ಲಾ ಗ್ರಾಮದ ಬಳಿ ಕಾರನ್ನು ರಿವರ್ಸ್ ತೆಗಿಯುವಾಗ ವಾಹನವು ರಸ್ತೆಬದಿಯ ತಗ್ಗಿನಲ್ಲಿ ಸಿಲುಕಿಕೊಂಡಿತು. ಕಾರನ್ನು ಹೊರತೆಗೆಯಲು ಸಾಧ್ಯವಾಗದೆ, ಯಾರಾದರೂ ನೋಡಬಹುದು ಎಂಬ ಭಯದಿಂದ ಆರೋಪಿಗಳು ಶವವನ್ನು ಕಾರಿನಲ್ಲೇ ಬಿಟ್ಟು ಪರಾರಿಯಾಗಿದ್ದರು. ಮಾಹಿತಿ ತಿಳಿದ ಪ್ರಾಂತಿಜ್ ಪೊಲೀಸರು ಕಾಲ್ ಡಿಟೇಲ್ಸ್ ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ನಡೆಸಿ, ಕೆಲವೇ ಗಂಟೆಗಳಲ್ಲಿ ಆರೋಪಿ ಭಾವನಾಳನ್ನು ವಶಕ್ಕೆ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ಪ್ರಿಯಕರ ಯೋಗೇಶ್ಗಾಗಿ ಪ್ರತ್ಯೇಕ ಪೊಲೀಸ್ ತಂಡಗಳನ್ನು ರಚಿಸಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.





Leave a comment