ಪ್ರತಿ ವರ್ಷ ಭಾದ್ರಪದ ಮಾಸದ ಚತುರ್ಥಿಯ ಮುನ್ನಾ ದಿನ ಬರುವ ಗೌರಿ ಹಬ್ಬ ಸುಮಂಗಲೆಯರಿಗೆ ಸಕಲ ಸೌಭಾಗ್ಯ ನೀಡುವ ಹಬ್ಬ. ಮಹಿಳೆಯರೆಲ್ಲರಿಗೂ ಗೌರಿ ಹಬ್ಬ ಬಂತೆಂದರೆ ಸಡಗರ. ಮನೆಯಲ್ಲಿ ಮಂಟಪ ನಿರ್ಮಿಸಿ ಬಾಳೆ ಕಂದು, ಮಾವಿನ ತೋರಣ ಕಟ್ಟಿ ಅಲಂಕಾರ ಮಾಡಿ ಗೌರಿ ಮೂರ್ತಿಯನ್ನು ಶೃಂಗರಿಸಿ ಸಡಗರದಿಂದ ಗೌರಿ ಹಬ್ಬವನ್ನು ಆಚರಿಸುತ್ತಾರೆ.
ಗಣೇಶ ಹಬ್ಬದ ರೀತಿಯಲ್ಲಿ ವಿಜೃಂಭಣೆಯಿಂದ ಆಚರಿಸದಿದ್ದರೂ ಸರಳವಾಗಿ ಭಕ್ತಿಯಿಂದ ಆಚರಿಸಲಾಗುತ್ತದೆ. ವಿಶೇಷವಾಗಿ ಮುತ್ತೈದೆಯರು ಮಾಡುವ ಹಬ್ಬ ಇದು. ಭಾದ್ರಪದ ಮಾಸದ ಶುದ್ಧ ತದಿಗೆಯನ್ನು ಗೌರಿ ಹಬ್ಬವನ್ನು ಸ್ವರ್ಣ ಗೌರಿ ವ್ರತದ ಮೂಲಕ ಆಚರಣೆ ಮಾಡಲಾಗುತ್ತದೆ. ಹೆಸರೇ ಸೂಚಿಸುವಂತೆ ಸ್ವರ್ಣ ಅಂದರೆ ಬಂಗಾರ, ಬಂಗಾರದ ಬಣ್ಣದಂತೆ ಹೊಳೆಯುವ ಜಗನ್ಮಾತೆಯಾದ ಗೌರಿಯನ್ನು ಈ ದಿನ ಷೋಡಶೋಪಚಾರದಿಂದ ಪೂಜಿಸಲಾಗುತ್ತದೆ. ಭಾದ್ರಪದ ಮಾಸದ ಚತುರ್ಥಿಯ ಮುನ್ನಾ ದಿನ ಬರುವ ಗೌರಿ ಹಬ್ಬ ಸುಮಂಗಲೆಯರಿಗೆ ಸಕಲ ಸೌಭಾಗ್ಯ ನೀಡುವ ಹಬ್ಬ. ಹಿಂದೂ ಧರ್ಮದಲ್ಲಿ ಗೌರಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಗೌರೀ ಹಬ್ಬವಾಗಿ ಮನೆ ಮನೆಯಲ್ಲಿ ಮಾತೆಯ ಆರಾಧನೆ ನಡೆಯುತ್ತದೆ. ಸಕಲ ಸೌಭಾಗ್ಯಕ್ಕೆ ಪ್ರಾರ್ಥನೆ ಮಾಡಿ ಈ ಹಬ್ಬ ಮಾಡಲಾಗುತ್ತದೆ. ಸ್ವರ್ಣ ಗೌರಿ ವ್ರತದ ಮೂಲಕ ಆಚರಣೆ ಮಾಡಲಾಗುತ್ತದೆ.
ಬೆಳಗ್ಗೆ ತಲೆ ಸ್ನಾನ ಮಾಡಿ ಮಡಿ ಬಟ್ಟೆಯುಡಬೇಕು. ಅರಿಶಿನಕ್ಕೆ ಹಾಲು ಹಾಕಿ ಗೋಪುರ ಮಾಡಿಕೊಳ್ಳಬೇಕು. ಇದನ್ನು ಅರಿಶಿನದ ಗೌರಮ್ಮ ಎನ್ನುತ್ತಾರೆ. ಜಲ ಗೌರಿ ಪೂಜೆ ಕೂಡ ಮಾಡಬಹುದು.

ಮುತ್ತೈದೆ ಬಾಗಿನ: ಬಿದಿರಿನ ಮೊರ, ಬಾಳೆ ಎಲೆ, ಅಕ್ಕಿ 1 ಕಪ್, ತೊಗರಿಬೇಳೆ 1 ಕಪ್, ಉದ್ದಿನ ಬೇಳೆ 1 ಕಪ್, ಕಡಲೆಬೇಳೆ 1 ಕಪ್, ಹೆಸರು ಬೇಳೆ 1 ಕಪ್, ಗೋಧಿ 1 ಕಪ್, ಅಚ್ಚು ಬೆಲ್ಲ 1 ಕಪ್, ಕಲ್ಲುಪ್ಪು 1 ಕಪ್, ಹುಣಸೆಹಣ್ಣು ಸ್ವಲ್ಪ, ಅರಿಶಿನ, ಕುಂಕುಮ, ಅರಿಶಿನ ಕೊಂಬು, ಬ್ಲೌಸ್ ಪೀಸ್, ತೆಂಗಿನಕಾಯಿ, ಹಣ್ಣು, ಎಲೆ, ಅಡಕೆ, ಹಣ, ಕರಿಮಣಿ ಸೇರಿಸಿ ಮುತ್ತೈದೆ ಬಾಗಿನ ಮಾಡಬೇಕು. ನಂತರ ಪದ್ಧತಿಯಂತೆ ಪೂಜೆ ಮಾಡಲಾಗುತ್ತದೆ. ಗಣೇಶ ಮನೆಗೆ ಬರುವ ಮೊದಲೇ ಗೌರಿ ಮನೆ ಪ್ರವೇಶ ಮಾಡಿರುತ್ತಾಳೆ. ಮೊದಲು ಗಣೇಶನ ತಾಯಿ ಗೌರಿಗೆ ಪೂಜೆ ನಡೆಯುತ್ತದೆ. ಮರುದಿನ ಗಣೇಶನನ್ನು ಪೂಜೆ ಮಾಡಲಾಗುತ್ತದೆ. ಗೌರಿ ಹಬ್ಬದಂದು ಗೃಹಿಣಿ ತನ್ನ ತವರಿಗೆ ಹೋಗುವ ಪದ್ಧತಿಯೂ ಅನೇಕ ಕಡೆಗಿದೆ. ಮಗಳು ತಾಯಿಗೆ ಬಾಗಿನ ನೀಡಿ ಆಶೀರ್ವಾದ ಪಡೆಯುವ ಪದ್ಧತಿಯಿದೆ. ಗೌರಿ ಪೂಜೆ ಮಾಡಿದರೆ ಮಾಂಗಲ್ಯ ಗಟ್ಟಿಯಾಗಿರುತ್ತದೆ ಎಂಬುದು ಜನರ ನಂಬಿಕೆ. ಪೂಜೆ ನಂತರ ಅಕ್ಕಪಕ್ಕದ ಮುತ್ತೈದೆಯರನ್ನು ಕರೆದು ಅರಿಶಿನ ಕುಂಕುಮ ನೀಡುವ ಪದ್ಧತಿಯಿದೆ. ಪೂಜಾಂತ್ಯದಲ್ಲಿ ಗೌರಿಯನ್ನು ಸರ್ವಬಾಧಾಪ್ರಶಮನಂ ತ್ರೈಲೋಕ್ಯಾಖೀಲೇಶ್ವರೀ ಏವ ಮೇವ ತ್ವಯಾ ಕಾರ್ಯಮಸ್ಮಧೈರಿ ವಿನಾಶನಂ ಎಂದು ಪ್ರಾರ್ಥನೆ ಮಾಡಿದರೆ ಸಕಲ ಪೀಡೆಗಳೂ ಪರಿಹಾರವಾಗುತ್ತವೆ ಎಂಬ ನಂಬಿಕೆಯಿದೆ.