SUDDIKSHANA KANNADA NEWS/ DAVANAGERE/ DATE-05-05-2025
ದಾವಣಗೆರೆ: ಕಳೆದ ಒಂದೂವರೆ ವರ್ಷದಿಂದ ನನ್ನೊಟ್ಟಿಗೆ ಗಟ್ಟಿಯಾಗಿ ನಿಂತ ನಿಮ್ಮೆಲ್ಲರಿಗೂ ಎಂದೆಂದಿಗೂ ಚಿರಋಣಿಯಾಗಿರುತ್ತೇನೆ. ನೀವು ತೋರಿರುವ ಅಭಿಯಾನ ಎಂದೂ ಮರೆಯಲಾಗದು. ಮುಂದಿನ ದಿನಗಳಲ್ಲಿ ದೊಡ್ಡ ನಾಯಕನಾಗಿ ಬೆಳೆದರೆ ಅದೂ ನಿಮ್ಮಿಂದಲೇ. ರಾಜಕೀಯ ಪಯಣದಲ್ಲಿ ನನ್ನ ಜೊತೆ ನಿಲ್ಲಲು ನಿಮ್ಲಲ್ಲೂ ಗುಂಡಿಗೆ, ಧೈರ್ಯ, ಸ್ವಾಭಿಮಾನ ಬೇಕಿತ್ತು. ಅದು ನಿಮ್ಮಲ್ಲಿದೆ ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.
ನಗರದ ಪೂಜಾ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ಸ್ವಾಭಿಮಾನಿ ಅಭಿಮಾನಿ ಬಳಗ, ಹಿತೈಷಿಗಳು, ಅಭಿಮಾನಿಗಳು ಏರ್ಪಡಿಸಿದ್ದ ತನ್ನ 41ನೇ ಜನುಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ನಿಮ್ಮೆಲ್ಲರನ್ನೂ ನೋಡಿ ತುಂಬಾನೇ ಖುಷಿಯಾಗಿದೆ. ಹುಡುಗ ಬೆಳೆಯಲಿ ಎಂಬ ಆಶಯ ನಿಮ್ಮೆಲ್ಲರೂ ಇದೆ. ಹಾಗಾಗಿ, ಬೀದರ್, ರಾಯಚೂರು, ಕೊಪ್ಪಳ, ವಿಜಯಪುರ, ಬೆಂಗಳೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವ ಜನರನ್ನು ನೋಡಿದರೆ ಗೊತ್ತಾಗುತ್ತದೆ ಎಂದು ಹೇಳಿದರು.
ರಾಜಕಾರಣದಲ್ಲಿ ಆರಂಭ ಇದು, ಅಂತ್ಯವಲ್ಲ ಎಂದು ದಾವಣಗೆರೆ ಲೋಕಸಭೆ ಚುನಾವಣೆಗೆ ಮುನ್ನ ಹೇಳಿದ್ದೆ. ಚುನಾವಣೆ ಆದ ಬಳಿಕ ನಾನು ಇಲ್ಲಿಂದ ಜಾಗ ಖಾಲಿ ಮಾಡುತ್ತೇನೆ ಎಂದುಕೊಂಡಿದ್ದರು. ನಾನೆಲ್ಲಿಗೂ ಹೋಗಿಲ್ಲ. ಇಲ್ಲಿಯೇ ಇದ್ದೇನೆ. ಬೀದರ್ ನಿಂದ ಚಾಮರಾಜನಗರದವರೆಗೆ ನನ್ನನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಿದ್ದಾರೆ. ನಾನು ಹೋಗುತ್ತಿದ್ದೇನೆ. ಶಿಕ್ಷಣದ ಮಹತ್ವ, ಧೈರ್ಯ, ಸ್ಫೂರ್ತಿದಾಯಕ ಮಾತು ಕೇಳಲು ತುದಿಗಾಲ ಮೇಲೆ ನಿಂತಿದ್ದಾರೆ. ನಾನು ಒಂದು ಜಾತಿಗೆ ಸೀಮಿತ ಅಲ್ಲ, ಸರ್ವಜನಾಂಗದವರು ಪ್ರೀತಿಯಿಂದ ಆಹ್ವಾನಿಸುತ್ತಾರೆ. ಯಾವುದೋ ಒಂದು ಜಾತಿ ಹಾಗೂ ವರ್ಗಕ್ಕೆ ಸೀಮಿತವಾಗಲು ಇಷ್ಟಪಡುವುದಿಲ್ಲ. ಎಲ್ಲರೂ ತೋರುತ್ತಿರುವ ಪ್ರೀತಿ, ಕೊಡುತ್ತಿರುವ ಧೈರ್ಯ, ತುಂಬುತ್ತಿರುವ ಆತ್ಮವಿಶ್ವಾಸ ನನ್ನನ್ನು ಮತ್ತಷ್ಟು ಗಟ್ಟಿಯಾಗಿಸಿದೆ ಎಂದರು.
ನನಗೆ ಲೋಕಸಭೆ ಚುನಾವಣೆ ವೇಳೆ ಟಿಕೆಟ್ ನೀಡುವ ವಿಚಾರ ಬಂದಾಗ ನಿನಗಿನ್ನೂ ವಯಸ್ಸಿದೆ ಎಂದರು. ಆದರೆ, ಬೀದರ್ ನಲ್ಲಿ 26 ವರ್ಷದ ಯುವಕನಿಗೆ ಟಿಕೆಟ್ ಕೊಟ್ಟರು. 40 ವರ್ಷದವರಿಗೆ ನೀಡಲಿಲ್ಲ. ರಾಜಕಾರಣಕ್ಕೆ ಬಂದಿರುವುದು ಹಣ ಮಾಡಲು ಅಲ್ಲ. ನನ್ನೊಟ್ಟಿಗೆ ನಾಯಕರನ್ನು ಬೆಳೆಸುವ ಸಲುವಾಗಿ. ಸ್ವಚ್ಚ, ಪ್ರತಿಯೊಬ್ಬರ ಆತ್ಮಗೌರವ ಕಾಪಾಡುವಂಥ ರಾಜಕಾರಣ ಬೇಕು. ಈ ನಿಟ್ಟಿನಲ್ಲಿ ಚಿಕ್ಕದಾಗಿ ಪ್ರಯತ್ನ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಲೋಕಸಭೆ ಚುನಾವಣೆಯಲ್ಲಿ ಯಾರೊಟ್ಟಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಯಾರಿಂದಲೂ ದುಡ್ಡು ಪಡೆದಿಲ್ಲ. ತಳಮಟ್ಟದಿಂದ ಹೋರಾಟ ಮಾಡ್ತಿದ್ದೇನೆ. ಒಂದು ವೇಳೆ ಹಣ ಪಡೆದಿದ್ದರೆ ದೊಡ್ಡ ಮುಖಂಡರ ಹಿಂದೆ ಓಡಾಡಿಕೊಂಡು
ಇರುತ್ತಿದ್ದೆ. ಜನರ ಪರವಾಗಿ ಗಟ್ಟಿ ನಾಯಕತ್ವ ಬೇಕು. ಹಾಗಾಗಿ ನಿಮ್ಮೊಂದಿಗೆ ನಾನಿದ್ದೇನೆ, ನನ್ನೊಂದಿಗೆ ನೀವಿದ್ದೀರಾ. ನಿಮಗೆ ಯಾರ ಭಯ ಇಲ್ಲ ಎಂಬುದು ಗೊತ್ತು ಎಂದ ಅವರು, ತೆರೆಮರೆಯಲ್ಲಿ ನಿಂತು ಅನೇಕರು ಆಶೀರ್ವಾದ ಮಾಡ್ತಾರೆ. ಅವರ ಬಗ್ಗೆ ನನಗೆ ಅಪಾರವಾದ ಗೌರವ ಇದೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಪ್ರತಿಯೊಂದು ವಿಧಾನಸಭೆ ಕ್ಷೇತ್ರಕ್ಕೆ ಹೋಗುತ್ತೇನೆ. ಅಲ್ಲಿ ಪ್ರತಿಯೊಬ್ಬ ಮುಖಂಡರನ್ನೂ ಭೇಟಿ ಮಾಡುತ್ತೇನೆ. ನಾನುಯಾವುದೇ ವ್ಯಕ್ತಿ ವಿರುದ್ಧ ಹೋರಾಟ ಮಾಡುತ್ತಿಲ್ಲ. ವ್ಯವಸ್ಥೆ ವಿರುದ್ಧದ ಹೋರಾಟ ಅಷ್ಟೇ. ಜನುಮದಿನದ ಪ್ರಯುಕ್ತ ಅಳವಡಿಸಲಾಗಿದ್ದ 20ರಿಂದ 30 ಬ್ಯಾನರ್ ಗಳನ್ನು ತೆಗೆಸಲಾಗಿದೆ. ಭಯ ಮತ್ತು ಅಸೂಯೆ ಕಾರಣದಿಂದ ಬ್ಯಾನರ್ ತೆಗೆಸಿದರೆ ಜನರ ಪ್ರೀತಿ ಕಡಿಮೆಯಾಗುವುದಿಲ್ಲ ಎಂಬುದಕ್ಕೆ ಇಲ್ಲಿ ಸೇರಿರುವ ಜನಸ್ತೋಮವೇ
ಸಾಕ್ಷಿ. ಪ್ರಾಮಾಣಿಕ ಪ್ರಯತ್ನ, ನಿಮ್ಮ ಆಶೀರ್ವಾದ ಇದ್ದರೆ ನಾಯಕ ಬೆಳೆಯುವುದನ್ನು ತಡೆಯಲಾಗದು ಎಂದು ಹೇಳಿದರು.