SUDDIKSHANA KANNADA NEWS/ DAVANAGERE/ DATE-03-05-2025
ಬೆಂಗಳೂರು: ಸೋನು ನಿಗಮ್. ಭಾರತದ ಖ್ಯಾತ ಹಿನ್ನೆಲೆ ಗಾಯಕ. ಕೋಟ್ಯಂತರ ಅಭಿಮಾನಿಗಳಿದ್ದಾರೆ. ಸೋನು ನಿಗಮ್ ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡು ಹೇಳುವ ಮೂಲಕ ಜನರನ್ನು ರಂಜಿಸಿದ್ದಾರೆ, ರಂಜಿಸುತ್ತಲೇ ಇದ್ದಾರೆ. ಆದ್ರೆ, ಸೋನು ನಿಗಮ್ ಆಡಿದ ಆ ಮಾತು ಈಗ ಸಂಕಷ್ಟ ತಂದೊಡ್ಡಿದೆ.
ಹೌದು. ಬೆಂಗಳೂರಿನ ಕಾಲೇಜಿನ ಕಾರ್ಯಕ್ರಮಕ್ಕೆ ಖ್ಯಾತ ಗಾಯಕ ಸೋನು ನಿಗಮ್ ಬಂದಿದ್ದರು. ಗಾಯಕರು ಬಂದಾಗ ಹಾಡು, ನಟರು ಬಂದಾಗ ಡ್ಯಾನ್ಸ್ ಮಾಡುವಂತೆ ಕೇಳುವುದು ಅಭಿಮಾನಿಗಳ ಆಸೆಯಾಗಿರುತ್ತದೆ. ಅದೇ ರೀತಿಯಲ್ಲಿ ಸೋನು
ನಿಗಮ್ ಅವರಿಗೆ ಹಾಡು ಹಾಡುತ್ತಿದ್ದರು. ಈ ವೇಳೆ ಯುವಕನೊಬ್ಬ ತನ್ನ ಇಷ್ಟದ ಹಾಡು ಹಾಡುವಂತೆ ಕೇಳಿದ್ದಾನೆ. ಇದಕ್ಕೆ ಸಿಟ್ಟಿಗೆದ್ದ ಸೋನು ನಿಗಮ್ ಹಾಡು ಅರ್ಧಕ್ಕೆ ನಿಲ್ಲಿಸಿ, ಕನ್ನಡ.. ಕನ್ನಡ.. ಇದೇ ಕಾರಣಕ್ಕೆ ಪಹಲ್ಗಾಮ್ ನಲ್ಲಿ ದಾಳಿಯಾಗಿದ್ದು
ಎಂದು ಬಿಡೋದೇ.
ಈ ಮಾತು ಹೇಳುತ್ತಿದ್ದಂತೆ ಎಲ್ಲರೂ ಸ್ಥಬ್ಧರಾಗಿಬಿಟ್ಟಿದ್ದಾರೆ. ಆ ಬಳಿಕ ಈ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಈಗ ಗಾಯಕ ಸೋನು ನಿಗಮ್ ವಿರುದ್ಧ ದೂರು ನೀಡಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆವಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್ ಐ ಆರ್ ದಾಖಲಾಗಿದೆ.
ಭಯೋತ್ಪಾದನೆಗೆ ಕನ್ನಡ ಭಾಷಾ ಹೋರಾಟದ ಹೋಲಿಕೆ ಮಾಡಿರುವ ಸೋನು ನಿಗಮ್ ಬಂಧಿಸಬೇಕು, ಇನ್ನು ಮುಂದೆ ಕನ್ನಡ ಭಾಷೆಯಲ್ಲಿ ಹಾಡಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.
ಕರವೇ ರಾಜ್ಯಾಧ್ಯಕ್ಷ ನಾರಾಯಣ ಸೋನು ನಿಗಮ್ ಒಬ್ಬ ಸಾಂಸ್ಕೃತಿಕ ಭಯೋತ್ಪಾದಕ. ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸ್ತೀಯಾ? ಕೂಡಲೇ ಕನ್ನಡಿಗರ ಕ್ಷಮೆ ಕೇಳಬೇಕು.ಇಲ್ಲವಾದ್ರೆ ಸೋನು ನಿಗಮ್ ಕನ್ನಡ ಹಾಡು ಹಾಡುವಂತಿಲ್ಲ. ಕನ್ನಡಿಗರ ಸ್ವಾಭಿಮಾನ ಕೆಣಕಿದರೆ ಸುಮ್ಮನಿರಲು ಸಾಧ್ಯವೇ ಇಲ್ಲ ಎಂದು ಗುಡುಗಿದ್ದಾರೆ.