SUDDIKSHANA KANNADA NEWS/ DAVANAGERE/ DATE-05-05-2025
ದಾವಣಗೆರೆ: ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ರೈತರಿಂದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಗೆ ನೊಂದಣಿ ಅವಧಿಯನ್ನು ಮೇ 31 ರ ವರೆಗೆ ವಿಸ್ತರಿಸಿ ಸರ್ಕಾರ ಆದೇಶಿಸಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.
ಕ್ವಿಂಟಾಲ್ ಭತ್ತಕ್ಕೆ ಎ.ಗ್ರೇಡ್ ರೂ.2320, ಸಾಮಾನ್ಯ ಭತ್ತ ರೂ. 2300 ಗಳ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಜಗಳೂರು ಹೊರತುಪಡಿಸಿ ಎಲ್ಲಾ ಎಪಿಎಂಸಿಗಳಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರತಿ ರೈತರಿಂದ 25 ಕ್ವಿಂಟಾಲ್ನಿಂದ ಗರಿಷ್ಠ 50 ಕ್ವಿಂಟಾಲ್ವರೆಗೆ ಖರೀದಿ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುತ್ತಿದ್ದ ರೈತರನ್ನು ಒಳಗೆ ತಮ್ಮ ಸಭಾಂಗಣದಲ್ಲಿ ಕರೆದು ಚರ್ಚಿಸಿದ ಜಿಲ್ಲಾಧಿಕಾರಿ ಗಂಗಾಧರಸ್ವಾಮಿಯವರು ರೈತರ ಸಮಕ್ಷಮದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಧಾನ ಕಾರ್ಯದರ್ಶಿ ಮನೋಜ್ ಜೈನ್, ಆಯುಕ್ತೆ ಜೋತ್ಸಹ್ನ, ಕೃಷಿ ಸಚಿವ ಚೆಲುವರಾಯಸ್ವಾಮಿಯವರ ಆಪ್ತ ಕಾರ್ಯದರ್ಶಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ರವರ ಆಪ್ತ ಕಾರ್ಯದರ್ಶಿ ಯವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದರು.
ದಾವಣಗೆರೆ ಜಿಲ್ಲೆಯಲ್ಲಿ ಭತ್ತದ ಕೊಯ್ಲು ಪ್ರಾರಂಭವಾಗಿದೆ. ಭತ್ತದ ಧಾರಣೆಯಲ್ಲಿ ಇಳಿಮುಖವಾಗಿದೆ. ದರ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಬೀದಿಯಲ್ಲಿ ಭತ್ತ ಸುರಿದು ಪ್ರತಿಭಟನೆ ಮಾಡುತ್ತಿದ್ದಾರೆ. ನನ್ನ ಕಛೇರಿ ಮುಂದೆ ಧರಣಿ ನಡೆಸಿ
ಘೇರಾವ್ ಮಾಡುತ್ತಿದ್ದಾರೆ. ಆದ್ದರಿಂದ ಭತ್ತ ಖರೀದಿಗಾಗಿ ನೋಂದಣಿಗೆ ಇದ್ದ ಕೊನೆ ದಿನಾಂಕ:25.04.2025ನ್ನು ವಿಸ್ತರಣೆ ಮಾಡಬೇಕು ಎಂದು ರೈತರು ಆಗ್ರಹಿಸಿದರು.
ಇದಕ್ಕೂ ಮುಂಚೆ ಸಭೆಯಲ್ಲಿ ರೈತ ಮುಖಂಡ ಬಿ. ಎಂ. ಸತೀಶ್ ಕೊಳೇನಹಳ್ಳಿ ಅವರು ಮಾತನಾಡಿ ಸಾಮಾನ್ಯವಾಗಿ ಭತ್ತದ ಕೊಯ್ಲು ಎಪ್ರಿಲ್ ತಿಂಗಳ ಕೊನೆಯಲ್ಲಿ ಮತ್ತು ಮೇ ತಿಂಗಳ ಮೊದಲ ವಾರದಲ್ಲಿ ಪ್ರಾರಂಭವಾಗುತ್ತದೆ. ಭತ್ತ ಖರೀದಿ ನೋಂದಣಿಗೆ ಕೊನೆ ದಿನಾಂಕ ಎಪ್ರಿಲ್ 25 ರೊಳಗೆ ಯಾವ ರೈತರು ನೋಂದಣಿ ಮಾಡಿಸಿಲ್ಲ. ಕೊನೆ ದಿನಾಂಕದ ನಿಗದಿ ಮಾಡಿರುವುದು ಅವೈಜ್ಞಾನಿಕ. ಆದ್ದರಿಂದ ನೋಂದಣಿ ಕೊನೆ ದಿನಾಂಕವನ್ನು ಮೇ ತಿಂಗಳ ಅಂತ್ಯದವರೆಗೆ ವಿಸ್ತರಿಸಿ, ನಾಳೆಯಿಂದಲೇ ನೋಂದಣಿ ಮತ್ತು ಖರೀದಿ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಲೋಕಿಕೆರೆ ನಾಗರಾಜ್ ಅವರು ಮಾತನಾಡಿ ಖರೀದಿ ನೋಂದಣಿ ಪ್ರಕ್ರಿಯೆ ಸರಳವಾಗಿರಬೇಕು. ಗ್ರಾಮ ಪಂಚಾಯಿತಿಗಳಲ್ಲಿ ನೋಂದಣಿ ಮಾಡುವ ವ್ಯವಸ್ಥೆ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ತೇಜಸ್ವಿ ಪಟೇಲ್ ರವರು ಮಾತನಾಡಿ ರೈತರು ನಾಟಿ ಮಾಡಿದ ದಿನವೇ ನೋಂದಣಿಯಾದಂತೆ. ಖರೀದಿ ಮಾಡಿದ 24 ಗಂಟೆಯೊಳಗೆ ರೈತನ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬೇಕು. ರೈತರು ಎಫ್ ಎ ಕ್ಯೂ ಗುಣಮಟ್ಟವನ್ನು ಕಾಪಾಡಿಕೊಂಡು ಬರಬೇಕು ಎಂದು ಕರೆ ಕೊಟ್ಟರು.
ಸಭೆಯಲ್ಲಿ ಮಾಜಿ ಶಾಸಕ ಎಂ. ಬಸವರಾಜ್ ನಾಯ್ಕ್, ರೈತ ಮುಖಂಡರಾದ ಬೆಳವನೂರು ನಾಗೇಶ್ವರರಾವ್, ಅತ್ತಿಗೆರೆ ನಂದೀಶ್, ಕಲ್ಪನಹಳ್ಳಿ ಸತೀಶ್, ರೇವಣಸಿದ್ದಪ್ಪ, ಉಜ್ಜಪ್ಪ, ಅವರಗೆರೆ ಅಜ್ಜನಗೌಡ್ರು, ಗೋಪನಾಳ್ ಕೆಂಚವೀರಪ್ಪ, ಕುಂದುವಾಡದ ಗಣೇಶಪ್ಪ, ಜಿಮ್ಮಿ ಹನುಮಂತಪ್ಪ, ಮಹೇಶಪ್ಪ, ಆರುಂಡಿ ಪುನೀತ್, ನಾಗರಸನಹಳ್ಳಿ ರುದ್ರಪ್ಪ, ವಿರೂಪಾಕ್ಷಪ್ಪ, ಜಡಗನಹಳ್ಳಿ ವಿರೂಪಾಕ್ಷಪ್ಪ, ಬಸವರಾಜಪ್ಪ, ಕಾರಿಗನೂರು ಮಂಜುನಾಥ ಪಟೇಲ್, ಗಂಗಾಧರಪ್ಪ, ಹದಡಿ ಜೆ.ಎನ್.ವೆಂಕಟೇಶ್, ವಿಜಯ ಬಳೇಯರ, ಸಂಕೋಳ ಚಂದ್ರಶೇಖರ ಮುಂತಾದವರು ಉಪಸ್ಥಿತರಿದ್ದರು.