SUDDIKSHANA KANNADA NEWS/ DAVANAGERE/ DATE:01-09-2024
ದಾವಣಗೆರೆ: ಈ ಹಿಂದೆ ಸಿರಿಗೆರೆ ಪೀಠಾಧಿಪತಿಯಿಂದ ಕೆಳಗಿಳಿಯುವುದಾಗಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರೇ ಹೇಳಿದ್ದರು. ಆಗ ನಾವ್ಯಾರು ಕೇಳಿರಲಿಲ್ಲ. ಈಗ ಸಮಯ ಬಂದಿದೆ. ಪೀಠ ತ್ಯಾಗ ಮಾಡಿ ಎಂದು ಮಾಜಿ ಶಾಸಕ ವಡ್ನಾಳ್ ರಾಜಣ್ಣ ಹೇಳಿದ್ದಾರೆ.
ದಾವಣಗೆರೆ ನಗರದ ಹೊರವಲಯದಲ್ಲಿರುವ ಅಪೂರ್ವ ರೆಸಾರ್ಟ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಠದ ಆಡಳಿತದಲ್ಲಿ ಏನೇನಾಗಿದೆ ಎಂಬ ಬಗ್ಗೆ ಈ ಹಿಂದೆ ನಾವೇನೂ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಹಸ್ತಕ್ಷೇಪ ಮಾಡಿರಲಿಲ್ಲ. ಇಷ್ಟರೊಳಗೆ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಪೀಠ ತ್ಯಾಗ ಮಾಡಬೇಕಿತ್ತು. ಆದ್ರೆ,. ಮಾಡಿರಲಿಲ್ಲ. ಏಕವ್ಯಕ್ತಿ ಡೀಡ್ ಸರಿಯಾದ ಕ್ರಮ ಅಲ್ಲ. ನೂತನ ಪೀಠಾಧಿಪತಿ ನೇಮಕ ಮಾಡಿ. ಇವರೆಡೂ ಸರಿಯಾಗಿದ್ದರೆ ಯಾರೂ ಮಾತನಾಡುತ್ತಿರಲಿಲ್ಲ ಎಂದು ಹೇಳಿದರು.

ಮಠದ ಆಗು ಹೋಗುಗಳು, ಚಟುವಟಿಕೆಗಳನ್ನು ಸರಿಯಾಗಿ ನಡೆಸುವ ಸೂಕ್ತರನ್ನು ಪೀಠಾಧಿಪತಿಯನ್ನಾಗಿ ನೇಮಿಸಿ. ಮಠದ ಆಸ್ತಿ ಗಮನ ತರುವಂಥ ಕೆಲಸ ಮಾಡಬೇಕು. ಸಮಾಜದಲ್ಲಿರುವ ಎಲ್ಲಾ ಊರುಗಳ ಜನರ ಬಳಿ ಹೋಗಿ ಎಲ್ಲವನ್ನೂ ಮಾತನಾಡಲು ಆಗದು. ನಾವೇನೂ ತುಂಬಾ ಬೇಡಿಕೆಗಳನ್ನು ಇಟ್ಟಿಲ್ಲ. ಇರುವುದು ಎರಡೇ ಬೇಡಿಕೆ ಎಂದು ತಿಳಿಸಿದರು.
ನಾವು ಸಮಾಜ ಒಡೆಯುವ ಕೆಲಸ ಮಾಡಿಲ್ಲ. ನೀವು ಸಮಾಜ ಒಡೆಯುವ ಕೆಲಸ ಮಾಡಬೇಡಿ. ನಾವು ತಾಳ್ಮೆಯಿಂದ ವಿನಂತಿ ಮಾಡಿಕೊಳ್ಳುತ್ತಿದ್ದೇವೆ. ಸಮಾಜದಲ್ಲಿ ಗೊಂದಲ ಉಂಟಾಗಬಾರದು. ಈ ಕಾರಣಕ್ಕೆ ಆದಷ್ಟು ಬೇಗ ತೀರ್ಮಾನ ಮಾಡಬೇಕು ಎಂದು ವಡ್ನಾಳ್ ರಾಜಣ್ಣ ಆಗ್ರಹಿಸಿದರು.