ಮುಂಬೈ: ಬಾಲಿವುಡ್ನ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (CBI) ಅಧಿಕೃತವಾಗಿ ಎಫ್ಐಆರ್ (FIR) ದಾಖಲಿಸಿಕೊಂಡಿದೆ. ಬಾಂಬೆ ಹೈಕೋರ್ಟ್ ನೀಡಿರುವ ಸ್ಪಷ್ಟ ಆದೇಶದ ಮೇರೆಗೆ ಸಿಬಿಐ ಈ ತನಿಖೆಯನ್ನು ಕೈಗೆತ್ತಿಕೊಂಡಿದೆ.
ಪ್ರಕರಣದ ಹಿನ್ನೆಲೆ:
2020ರ ಜೂನ್ 8ರಂದು ಮುಂಬೈನ ಮಲಾಡ್ನಲ್ಲಿರುವ ವಸತಿ ಸಮುಚ್ಚಯವೊಂದರ 14ನೇ ಮಹಡಿಯಿಂದ ಬಿದ್ದು 28 ವರ್ಷದ ದಿಶಾ ಸಾಲಿಯಾನ್ ಮೃತಪಟ್ಟಿದ್ದರು. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ, ಅಂದರೆ ಜೂನ್ 14, 2020ರಂದು ನಟ ಸುಶಾಂತ್ ಸಿಂಗ್ ರಜಪೂತ್ ಕೂಡ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಆರಂಭದಲ್ಲಿ ಮುಂಬೈ ಪೊಲೀಸರು ದಿಶಾ ಅವರ ಸಾವನ್ನು ‘ಆಕಸ್ಮಿಕ ಸಾವು’ ಎಂದು ದಾಖಲಿಸಿಕೊಂಡು, ನಂತರ ಇದು ಆತ್ಮಹತ್ಯೆ ಎಂದು ತನಿಖೆ ಮುಕ್ತಾಯಗೊಳಿಸಿದ್ದರು.
ತಂದೆಯ ಆರೋಪ ಮತ್ತು ನ್ಯಾಯಾಲಯದ ಆದೇಶ:
ಆದರೆ, ದಿಶಾ ಅವರ ತಂದೆ ಸತೀಶ್ ಸಾಲಿಯಾನ್ ಅವರು ತಮ್ಮ ಮಗಳದ್ದು ಆತ್ಮಹತ್ಯೆಯಲ್ಲ, ಆಕೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಹಾಗೂ ಪ್ರಭಾವಿಗಳನ್ನು ರಕ್ಷಿಸಲು ರಾಜಕೀಯವಾಗಿ ಪ್ರಕರಣವನ್ನು ಮುಚ್ಚಿಹಾಕಲಾಗಿದೆ ಎಂದು ಆರೋಪಿಸಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಸಾಕಷ್ಟು ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಮುಂಬೈ ಪೊಲೀಸರ ತನಿಖೆಯಲ್ಲಿದ್ದ ತಾಂತ್ರಿಕ ನ್ಯೂನ್ಯತೆಗಳನ್ನು ಪ್ರಶ್ನಿಸಿ, ಪ್ರಕರಣದ ನಿಗೂಢತೆಯನ್ನು ಭೇದಿಸಲು ಸಿಬಿಐಗೆ ಎಫ್ಐಆರ್ ದಾಖಲಿಸಿ ಸಮಗ್ರ ತನಿಖೆ ನಡೆಸುವಂತೆ ನಿರ್ದೇಶನ ನೀಡಿತು.
ಸತೀಶ್ ಸಾಲಿಯಾನ್ ಮತ್ತು ಇತರರ ಪ್ರತಿಕ್ರಿಯೆ:
ತನಿಖಾಧಿಕಾರಿಗಳನ್ನು ಭೇಟಿಯಾದ ದಿಶಾ ಅವರ ತಂದೆ ಸತೀಶ್ ಸಾಲಿಯಾನ್, ತಮ್ಮ ಮಗಳ ಸಾವಿನ ಸುತ್ತಲಿನ ಘಟನೆಗಳ ವಿವರಗಳನ್ನು ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಆದಿತ್ಯ, ಸೂರಜ್ ಪಾಂಚೋಲಿ, ಡಿನೋ ಮೋರಿಯಾ ಮತ್ತು ಬೌನ್ಸರ್ಸ್ ಒಳಗೊಂಡಂತೆ ನಾನು ಹಲವರ ಹೆಸರುಗಳನ್ನು ತನಿಖಾಧಿಕಾರಿಗಳಿಗೆ ನೀಡಿದ್ದೇನೆ. ಸತ್ಯಕ್ಕೆ ಎಂದಿಗೂ ಜಯ ಸಿಗುತ್ತದೆ” ಎಂದು ಹೇಳಿದ್ದಾರೆ. ಇತ್ತ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಕೂಡ ಸಿಬಿಐ ತನಿಖೆಯನ್ನು ಸ್ವಾಗತಿಸಿದ್ದಾರೆ.




Leave a comment