SUDDIKSHANA KANNADA NEWS/ DAVANAGERE/ DATE:02-02-2025
ದಾವಣಗೆರೆ: ಮಹಿಳೆಯರು, ಯುವತಿಯರು ಹಾಗೂ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಚನ್ನಗಿರಿ ಮೆಡಿಕಲ್ ಶಾಪ್ ನ ಮಾಲೀಕ ಅಮ್ಜದ್ ನಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಶ್ರೀರಾಮಸೇನೆ ಪ್ರತಿಭಟನೆ ನಡೆಸಲಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶ್ರೀರಾಮಸೇನೆ ಸಂಸ್ಥಾಪಕ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು, ಅಮ್ಜನ್ ದ್ದು ಕಾಮುಕತನ ಪರಮಾವಧಿ. ರಾಕ್ಷಸಿ ಪ್ರವೃತ್ತಿ. ಇಂಥ ಕಾಮುಕನಿಗೆ ಗಲ್ಲು ಶಿಕ್ಷೆಯಾಗಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಚಾರ್ಜ್ ಶೀಟ್ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮ್ಜದ್ ಎಂಬ ರಾಕ್ಷಸಿ ಪ್ರವೃತ್ತಿಯ ವ್ಯಕ್ತಿಯು ವ್ಯವಸ್ಥಿತವಾಗಿ ನೂರಾರು ಮಹಿಳೆಯರು, ವಿದ್ಯಾರ್ಧಿನಿಯರು, ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ರಾಜ್ಯ
ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕು. ಪೊಲೀಸ್ ಇಲಾಖೆಯ ಸಮಗ್ರ ತನಿಖೆ ನಡೆಸಿ ದೋಷರೋಪಣ ಪಟ್ಟಿ ಸಲ್ಲಿಸಿದರೆ ಕೋರ್ಟ್ ನಲ್ಲಿ ಆರೋಪಿಗೆ ತಕ್ಕ ಶಿಕ್ಷೆಯಾಗಲಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು
ಇಂಥ ಕಾಮುಕನು ಕಾನೂನಿನಿಂದ ತಪ್ಪಿಸಿಕೊಳ್ಳಲು ಬಿಡಬಾರದು ಎಂದು ಮನವಿ ಮಾಡಿದರು.
ಕಳೆದ ಜನವರಿ 30ರಂದು ಚನ್ನಗಿರಿಯಲ್ಲಿ ಆರೋಪಿ ಅಮ್ಜದ್ ನನ್ನು ಬಂಧಿಸಲಾಗಿದೆ. ಅತನ ಬಳಿ ಹಲವಾರು ಅತ್ಯಾಚಾರದ ವೀಡಿಯೋ ತುಣುಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 56 ವರ್ಷದ ಈ ಆರೋಪಿ ತನ್ನ ಮೆಡಿಕಲ್ ಶಾಪ್ ನಲ್ಲಿ ರಾಕ್ಷಸೀಯ ಕೃತ್ಯ ನಡೆಸಿದ್ದು, ಇದರ ಹಿಂದೆ ವ್ಯವಸ್ಥಿತ ಸಂಘಟನೆಗಳು ಇರುವ ಶಂಕೆ ಇದೆ. ಈ ಘಟನೆ ಕುರಿತಂತೆ ರಾಜ್ಯ ಸರ್ಕಾರ, ಗೃಹ ಇಲಾಖೆ, ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಆರೋಪಿ ಯಾವುದೇ ಕಾರಣ- ಕ್ಕೂ ಪ್ರಕರಣದಿಂದ ತಪ್ಪಿಸಿಕೊಳ್ಳದಂತೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಸಮಾಜದಲ್ಲಿ ಹೆಣ್ಣು ಮಕ್ಕಳು ಗೌರವಯುತವಾಗಿ ಜೀವನ ನಡೆಸಬೇಕು. ಚನ್ನಗಿರಿ ಘಟನೆಯಿಂದ ಅಲ್ಲಿನ ಮಹಿಳೆಯರು, ವಿದ್ಯಾರ್ಥಿಗಳು, ಬಾಲಕಿಯರು ಭಯಭೀತರಾಗಿದ್ದಾರೆ. ಇಂತಹ ಕೃತ್ಯ ಎಸಗಿರುವ ಆರೋಪಿಗೆ
ಗಲ್ಲು ಶಿಕ್ಷೆ ಆಗಬೇಕು. ನಾಗರಿಕ ಸಮಾಜದಲ್ಲಿ ಇಂಥ ವ್ಯಕ್ತಿ ಜೀವಿಸಲು ಯೋಗ್ಯನಲ್ಲ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆಯೇ ಅಮ್ಜದ್ ನ ಮೊದಲ ಪತ್ನಿ ಈ ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಅತ್ಯಾಚಾರ ಪ್ರಕರಣಗಳಲ್ಲಿ ತನ್ನ ಪತಿ ಇದ್ದ ಬಗ್ಗೆ ಮಾಹಿತಿ ನೀಡಿದ್ದರು. ಎರಡು ವರ್ಷಗಳ ಹಿಂದೆ ಈ ವ್ಯಕ್ತಿ ಬಗ್ಗೆ ತನಿಖೆ ನಡೆಸಿದ್ದರೇ ಅಂದೇ ಈ ವ್ಯಕ್ತಿಯ ಕಾಮಪುರಾಣ ಬಯಲಾಗುತ್ತಿತ್ತು. ಆದರೆ, ಅಂದು ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳದೇ ರಾಜಿ ಸಂಧಾನ ಮಾಡಿದ್ದರ ಹಿನ್ನೆಲೆಯೇ ಇಷ್ಟೆಲ್ಲಾ ಪ್ರಕರಣಗಳಿಗೆ ಕಾರಣ ಆಗಿದೆ ಎಂದು ಆರೋಪಿಸಿದರು.
ಗೋಷ್ಟಿಯಲ್ಲಿ ಶ್ರೀರಾಮಸೇನೆ ರಾಜ್ಯ ಕಾರ್ಯದರ್ಶಿ ಪರಶುರಾಮ ನಡುಮನಿ, ಜಿಲ್ಲಾಧ್ಯಕ್ಷ ಮಣಿ ಸರ್ಕಾರ್, ಚನ್ನಗಿರಿಯ ವಿನಯ್, ನಿತೀನ್, ಪಿ.ಸಾಗರ್, ಶ್ರೀಧರ್, ಶಿವಕುಮಾರ್, ಅಜಯ್, ಪ್ರಭು ಮತ್ತಿತರರು ಹಾಜರಿದ್ದರು.