SUDDIKSHANA KANNADA NEWS/ DAVANAGERE/ DATE:02-04-2025
ಬೆಂಗಳೂರು: ಬಿಜೆಪಿ ಶಾಸಕರ ಅಮಾನತುಗೊಳಿಸಿರುವ ಸ್ಪೀಕರ್ ಅವರ ಸರ್ವಾಧಿಕಾರಿ ಧೋರಣೆ ಖಂಡನೀಯ ಎಂದು ಬಿಜೆಪಿ ಹೇಳಿದೆ.
ಸರ್ವಾಧಿಕಾರಿಯಂತೆ ವರ್ತಿಸಿ ನಮ್ಮ ಪಕ್ಷದ 18 ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್ ವಿರುದ್ಧ ಮತ್ತು ಅಮಾನತನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಪಕ್ಷದ ಶಾಸಕರೊಂದಿಗೆ ವಿಧಾನಸೌಧದ ಎದುರು ಕೆಂಗಲ್ ಹನುಮಂತಯ್ಯನವರ ಪ್ರತಿಮೆ ಬಳಿ ಬಿಜೆಪಿ ಪ್ರತಿಭಟಿಸಿತು.
ಪ್ರಜಾಪ್ರಭುತ್ವದ ದೇಗುಲದಲ್ಲೇ ಜನಪ್ರತಿನಿಧಿಗಳ ಬಾಯಿ ಮುಚ್ಚಿಸಿ ಹೊರಹಾಕುವ ನಿರ್ಧಾರ ಪ್ರಜಾತಂತ್ರ ವ್ಯವಸ್ಥೆಯ ಮೇಲಿನ ದಬ್ಬಾಳಿಕೆಯ ಕ್ರಮವಾಗಿದೆ. ತುರ್ತು ಪರಿಸ್ಥಿತಿ ಹೇರಿದ ಕುಖ್ಯಾತಿಯ ಕಾಂಗ್ರೆಸ್ಸಿಗರಿಗೆ ವಿರೋಧ ಪಕ್ಷಗಳ ದನಿ ಅಡಗಿಸುವ ವಿಧಾನ ಕರತಲಾಮಲಕವಾಗಿದೆ. ಗೌರವಾನ್ವಿತ ಸ್ಪೀಕರ್ ಅವರು ಈ ಕೂಡಲೇ ಅಮಾನತ್ತನ್ನು ರದ್ದುಗೊಳಿಸಿ ಶಾಸಕತ್ವವನ್ನು ಮರುಸ್ಥಾಪಿಸಲು ಒತ್ತಾಯಿಸಿ ಜಂಟಿ ಕಾರ್ಯದರ್ಶಿಗಳ ಮೂಲಕ ವಿಧಾನಸಭಾ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್. ಅಶೋಕ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಸೇರಿದಂತೆ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರುಗಳು ಉಪಸ್ಥಿತರಿದ್ದರು.