ದಾವಣಗೆರೆ: ಜಿಲ್ಲೆಯ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಮನೆ ಕಳವು ಪ್ರಕರಣಗಳನ್ನು ಭೇದಿಸುವಲ್ಲಿ ದಾವಣಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಮೂವರು ಅಂತರಜಿಲ್ಲಾ ಕಳ್ಳರನ್ನು ಬಂಧಿಸಲಾಗಿದ್ದು, ಅವರಿಂದ ಒಟ್ಟು 2,81,000 ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಮೊದಲ ಪ್ರಕರಣದ ವಿವರ:
ದಾವಣಗೆರೆ ತಾಲ್ಲೂಕಿನ ದೇವೀರಮ್ಮ ಎಂಬುವವರ ಮನೆಗೆ ಜೂನ್ 12ರ ರಾತ್ರಿ ನುಗ್ಗಿದ್ದ ಕಳ್ಳರು, ಬೀಗ ಮುರಿದು ಲಾಕರ್ನಲ್ಲಿದ್ದ 12 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ಹಾಗೂ ನಗದನ್ನು ದೋಚಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ಮೂಲದ ಮೈಲಾರಿ @ ವಗ್ಗ ಮೈಲಾರಿ (50) ಮತ್ತು ಕುಮಾರ @ ವಗ್ಗ ಕುಮಾರ (36) ಎಂಬುವವರನ್ನು ಬಂಧಿಸಿ, 1,08,000 ರೂ. ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ.
ಎರಡನೇ ಪ್ರಕರಣದ ವಿವರ:
ಕಡ್ಳೆಬಾಳು ಗ್ರಾಮದ ಕರಿಬಸವೇಶ್ವರ ಎಂಬುವವರ ಬೀಗ ಹಾಕಿದ್ದ ಮನೆಗೆ ಜುಲೈ 9ರ ಸಾಯಂಕಾಲ ನುಗ್ಗಿದ ಕಳ್ಳರು ಚಿನ್ನಾಭರಣ ಕಳವು ಮಾಡಿದ್ದರು. ಈ ಕೇಸ್ನಲ್ಲಿ ದಾವಣಗೆರೆ ತಾಲ್ಲೂಕಿನ ದೇವೇಂದ್ರ @ ದೇವಾ (27) ಎಂಬಾತನನ್ನು ಬಂಧಿಸಿ, ಆತನಿಂದ 1,73,000 ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಬಂಧಿತ ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದಾವಣಗೆರೆ ಗ್ರಾಮಾಂತರ ಉಪ-ವಿಭಾಗದ ಡಿವೈಎಸ್ಪಿ ಬಿ.ಎಸ್ ಬಸವರಾಜ್, ಪಿಐ ಅಣ್ಣಯ್ಯ ಕೆ.ಟಿ ಮಾರ್ಗದರ್ಶನದಲ್ಲಿ ಪಿಎಸ್ಐಗಳಾದ ಪ್ರಭು ಡಿ. ಕೆಳಗಿನಮನಿ, ಜೋವಿತ್ ರಾಜ್ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಪಿಐ ಇಸ್ಮಾಯಿಲ್ ಅವರ ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಸಮಯಪ್ರಜ್ಞೆ ಮೆರೆದ ಇಡೀ ತಂಡವನ್ನು ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶೇಖರ್ ಹೆಚ್.ಟಿ ಹಾಗೂ ಹೆಚ್ಚುವರಿ ಎಸ್ಪಿ ಪರಮೇಶ್ವರ ಹೆಗಡೆ ಶ್ಲಾಘಿಸಿದ್ದಾರೆ.





Leave a comment