SUDDIKSHANA KANNADA NEWS/ DAVANAGERE/DATE:05_08_2025
ದಾವಣಗೆರೆ: ಕೆಎಸ್ ಆರ್ ಟಿಸಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರದ ಕರೆಯ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿಯೂ ಬಿಸಿ ತಟ್ಟಿತು. ಬೆಳಿಗ್ಗೆ ಆರು ಗಂಟೆಯಿಂದಲೇ ಕೆ ಎಸ್ ಆರ್ ಟಿ ಸಿ ಬಸ್ ಗಳು ನಿಂತಿದ್ದವು. ನಿಲ್ದಾಣವು ಸ್ಥಬ್ಧಗೊಂಡಿತ್ತು.
ಈ ಸುದ್ದಿಯನ್ನೂ ಓದಿ: ವೈಯಕ್ತಿಕ ಸಾಲ ತೆಗೆದುಕೊಳ್ಳುವಾಗ ಈ ಐದು ತಪ್ಪು ಮಾಡಬೇಡಿ!
ಪ್ರಯಾಣಿಕರಲ್ಲದೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಬಣಗುಡುತಿತ್ತು. ಬಸ್ ಸಂಚಾರದ ಮಾಹಿತಿ ಇಲ್ಲದೆ ಕೆಲ ಪ್ರಯಾಣಿಕರು ಪರದಾಡಿದ ಘಟನೆಯೂ ನಡೆಯಿತು. ಬಿಜಾಪುರ, ಕೊಪ್ಪಳ, ಬಳ್ಳಾರಿ ಸೇರಿದಂತೆ ವಿವಿಧ ಸ್ಥಳಗಳಿಗೆ
ಹೋಗಲು ಜನರು ಪರದಾಡುವಂತಾಯಿತು.
ದಾವಣಗೆರೆ ಕರ್ನಾಟಕದ ಮಧ್ಯಭಾಗವಾಗಿರುವ ಕಾರಣ ಬಹುತೇಕ ಸಾರಿಗೆ ಬಸ್ ಗಳು ಇಲ್ಲಿಗೆ ಬಂದು ಹೋಗುತ್ತವೆ. ರಾತ್ರಿಯಾದರೂ ಬಸ್ ಗಳ ವ್ಯವಸ್ಥೆ ಇರುತ್ತದೆ. ಆದ್ರೆ, ಮುಷ್ಕರದ ಬಗ್ಗೆ ಗೊತ್ತಿರದ ಪ್ರಯಾಣಿಕರು ಬೆಳಿಗ್ಗೆಯಿಂದಲೇ
ಬಸ್ ಗಾಗಿ ಕಾಯುತ್ತಿದ್ದರು. ಆದ್ರೆ, ಬಸ್ ಬಾರದ ಕಾರಣ ರಾತ್ರಿಯೆಲ್ಲಾ ಬಸ್ ನಿಲ್ದಾಣದಲ್ಲಿಯೇ ಉಳಿದುಕೊಳ್ಳಬೇಕಾಯಿತು. ಬೆಳಿಗ್ಗೆಯಾದರೂ ಬಸ್ ಬರುತ್ತವೆ ಎಂದುಕೊಂಡವರಿಗೆ ಶಾಕ್ ಆಗಿತ್ತು.
ಬೆಂಗಳೂರು, ಹಾಸನ, ಹರಿಹರ ಹೊಸದುರ್ಗ ಕಡೆಗೆ ಬಸ್ ಸಂಚಾರಕ್ಕೆ ದಾವಣಗೆರೆ ಕೆ ಎಸ್ ಆರ್ ಟಿ ಸಿ ಡಿಪೋದಿಂದ ವ್ಯವಸ್ಥೆ ಮಾಡಲಾಗಿತ್ತು. ಕೆ ಎಸ್ ಆರ್ ಟಿ ಸಿ ಡಿಸಿ ಕಿರಣ್ ಕುಮಾರ್ ಬಸಾಪುರ್ ಮಾತನಾಡಿ ಇನ್ನೂ ಹಲವು ಕಡೆ ಸಂಚಾರಕ್ಕೆ ವ್ಯವಸ್ಥೆ ಮಾಡದ್ದೇವೆ. ದಾವಣಗೆರೆ ಕೇಂದ್ರ ನಿಲ್ದಾಣಕ್ಕೆ ಬಸ್ ಗಳು ಬಂದಿಲ್ಲ ಎಂದು ತಿಳಿಸಿದರು.
ಪ್ರಯಾಣಿಕರ ಜಗಳ: ಬಸ್ ಗಾಗಿ ನಿಲ್ದಾಣದಲ್ಲೇ ಪ್ರಯಾಣಿಕರು ಕಾದು ಕಾದು ಸುಸ್ತಾದರು. ಬಸ್ ಬಾರದಿರುವುದಕ್ಕೆ ಕಂಟ್ರೋಲರ್ ಗಳ ಜೊತೆ ಪ್ರಯಾಣಿಕರು ಜಗಳವನ್ನೂ ಮಾಡಿದರು. ನಾವು ಬಸ್ ಟಿಕೆಟ್ ಹಣ ಪಾವತಿಸಿ ಬಂದಿದ್ದೇವೆ. ಬಸ್ ಸಂಚಾರ ಇಲ್ಲ ಅಂದ್ರೆ ವೆಬ್ಸೈಟ್ ನಲ್ಲಿ ಬುಕಿಂಗ್ ಯಾಕೆ ಮಾಡಿಕೊಳ್ಳಬೇಕು. ಧಿಡೀರ್ ಬಸ್ ಇಲ್ಲ ಅಂದ್ರೆ ನಾವು ಊರಿಗೆ ಹೋಗೋದು ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಾಂಶಗಳು
- ಬಸ್ ಬಾರದ್ದಕ್ಕೆ ಪ್ರಯಾಣಿಕರ ಜಗಳ
- ಆನ್ ಲೈನ್ ಬುಕ್ಕಿಂಗ್ ಯಾಕೆ ಮಾಡಿದ್ರೀ?
- ಬೆಳಿಗ್ಗೆ ಬಸ್ ಬರಲ್ಲ ಎಂದಿದ್ದಕ್ಕೆ ಆಕ್ರೋಶ
- ಖಾಸಗಿ ಬಸ್ ಚಾಲಕರಿಂದ ಸಾರಿಗೆ ಬಸ್ ಚಾಲನೆ
- ಬೆಂಗಳೂರು, ಹಾಸನ, ಹರಿಹರ ಹೊಸದುರ್ಗ ಕಡೆಗೆ ಬಸ್ ಸಂಚಾರ
- ಕಡಿಮೆ ಇತ್ತು ನೌಕರರ ಹಾಜರಾತಿ
- ಖಾಸಗಿ ಬಸ್ ಗಳ ಭರಾಟೆ
- ಕೆ ಎಸ್ ಆರ್ ಟಿಸಿಯಲ್ಲಿ ಬಂದು ನಿಂತಿದ್ದ ಖಾಸಗಿ ಬಸ್ ಗಳು
- ಮುಷ್ಕರದ ಬಿಸಿ ತಪ್ಪಿಸಲು ಅಧಿಕಾರಿಗಳ ಹೆಣಗಾಟ
ದಾವಣಗೆರೆ KSRTC ವಿಭಾಗಿಯ ನಿಯಂತ್ರಣಧಿಕಾರಿ ಕಿರಣ್ ಕುಮಾರ್ ಬಸಾಪುರ್ ಮಾತನಾಡಿ ನಮ್ಮ ವಿಭಾಗಿಯಾದಲ್ಲಿ ಇರುವ 80 ರಿಂದ 90 ಬಸ್ ಗಳು ಕಾರ್ಯಚರಣೆ ಆಗಿವೆ. ನೌಕರರ ಹಾಜರಾತಿ ಕಡಿಮೆ ಇದೆ. ಖಾಸಗಿ ಡ್ರೈವರ್ ಬಂದಿದ್ದಾರೆ. ಅವರಿಗೆ ಹೇಳಿ ಬಸ್ ಸಂಚಾರ ಆರಂಭ ಮಾಡಿದ್ದೇವೆ. ಹೊರಗಡೆಯಿಂದ 15 ಚಾಲಕರು ಬಂದಿದ್ದು, ಪ್ರಯಾಣಿಕರಿಗೆ ತೊಂದರೆ ಆದ್ರೆ ಖಾಸಗಿ ಬಸ್ ಓಡಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು. ಕೆಲವೊಂದು ಕಡೆಗಳಿಗೆ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು.
ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡುವ ಉದ್ದೇಶದಿಂದ ಬಸ್ ವ್ಯವಸ್ಥೆ ಮಾಡಲಾಗಿತ್ತು. ಹರಿಹರ ಹೊಸದುರ್ಗ, ಚಿತ್ರದುರ್ಗ, ಬೆಂಗಳೂರು ಕಡೆ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.
ಖಾಸಗಿ ಬಸ್ ಗಳ ಭರಾಟೆ:
ಇನ್ನು ಕೆ ಎಸ್ ಆರ್ ಟಿ ಸಿ ನೌಕರರ ಮುಷ್ಕರದಿಂದ ಖಾಸಗಿ ಬಸ್ ಗಳಲ್ಲಿ ಜನಜಂಗುಳಿ ಹೆಚ್ಚಿತ್ತು. ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಪ್ರಯಾಣ ಉಚಿತವಿದ್ದ ಕಾರಣ ಹೆಚ್ಚಿನ ಮಹಿಳೆಯರು ಈ ಬಸ್ ಹತ್ತುತ್ತಿದ್ದರು. ಆದ್ರೆ, ಸಾರಿಗೆ ಬಸ್ ಇಲ್ಲದ ಕಾರಣ ಖಾಸಗಿ ಬಸ್ ಗಳಲ್ಲಿ ಪ್ರಯಾಣಿಸಲು ಹಣವನ್ನೂ ನೀಡಿದರು.
ದಾವಣಗೆರೆಯಿಂದ ಬೆಂಗಳೂರು ಚಿತ್ರದುರ್ಗ ತುಮಕೂರು ಸೇರಿದಂತೆ ಹಲವು ಕಡೆಗಳಿಗೆ ಬಸ್ ಸಂಚಾರ ಹೆಚ್ಚಾಗಿತ್ತು. ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬಂದು ಖಾಸಗಿ ಬಸ್ ಗಳು ಬಂದು ನಿಂತಿದ್ದವು. ಕೆ ಎಸ್ ಆರ್ ಟಿ ಸಿ ಬಸ್ಸಿಗೆ ಸೆಡ್ಡು ಹೊಡೆಯಲು ನಿಂತ ಖಾಸಗಿ ಬಸ್ ಗಳ ಮಾಲೀಕರ ಜೇಬು ತುಂಬಿತು.