ದಾವಣಗೆರೆ: ಅಯೋಧ್ಯೆಯ ಶ್ರೀರಾಮಮಂದಿರಕ್ಕೆ ನೀಡಲು ಬೆಳ್ಳಿ, ಬಂಗಾರ ಸಂಗ್ರಹ 1991ರಿಂದಲೂ ಮಾಡಲಾಗಿತ್ತೆಂಬ ಸುಳ್ಳು ಆರೋಪ ಮಾಡಿರುವ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ದಾವಣಗೆರೆಯ ಶಿಗ್ಲಿ ಬಸ್ಯಾ. ಈತ ಸಪ್ಲೈಯರ್. ಏನೇನೆಲ್ಲಾ ಮಾಡಿ ಅಧಿಕಾರಕ್ಕೆ ಬಂದಿದ್ದಾನೆಂಬುದು ದಾವಣಗೆರೆಯ ಜನರಿಗೆ ಗೊತ್ತಿರುವ ವಿಚಾರ. ಸಾಮಾಜಿಕ ಕಳಕಳಿ, ನೈತಿಕತೆ, ಮಾತನಾಡುವ ಅರ್ಹತೆ ಇದ್ದರೆ ದಾಖಲೆ ಸಮೇತ ಮಾತನಾಡಲಿ ಎಂದು ದೂಡಾ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಹಿರಿಯ ನಾಯಕ ರಾಜನಹಳ್ಳಿ ಶಿವಕುಮಾರ್ ಸವಾಲು ಹಾಕಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಗ್ಲಿ ಬಸ್ಯಾ ತಾನು ಕಳ್ಳತನ ಮಾಡಿದ್ದನ್ನು ಒಪ್ಪಿಕೊಳ್ಳುತ್ತಾನೆ. ಆದರೆ ದಿನೇಶ್ ಕೆ. ಶೆಟ್ಟಿ ಕಳ್ಳತನ ಮಾಡಿ ಒಳ್ಳೆಯವವನಂತೆ ನಾಟಕ ಮಾಡುತ್ತಾನೆ ಎಂದು ವಾಗ್ದಾಳಿ ನಡೆಸಿದರು.
ದಾಖಲೆ ಸಮೇತ ಮಾತನಾಡಲು ಸವಾಲು:
ಇಟ್ಟಿಗೆ, ಹುಂಡಿ ಕಳ್ಳತನ ದಾವಣಗೆರೆಯಲ್ಲೂ ನಡೆದಿದೆ ಎಂಬ ಆರೋಪ ಮಾಡಿರುವ ದಿನೇಶ್ ಕೆ. ಶೆಟ್ಟಿಯು ಬೆಳ್ಳಿ ಇಟ್ಟಿಗೆ ಸಮರ್ಪಣೆ ಮಾಡುವ ವೇಳೆ ಮುರುಘಾ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಅವರೂ ನಮ್ಮ ಜೊತೆ ಇದ್ದರು. ಹಾಗಿದ್ದರೆ
ಬಸವಪ್ರಭು ಸ್ವಾಮೀಜಿ ಅವರು ಸುಳ್ಳು ಹೇಳುತ್ತಾರಾ? ವಿನಾಕಾರಣ, ದಾಖಲೆರಹಿತ ಆರೋಪ ಸರಿಯಲ್ಲ. ಅನುಮಾನ ಇದ್ದರೆ ಅಯೋಧ್ಯೆಗೆ ಹೋಗಿ ಪರಿಶೀಲಿಸಿ ಬರಲಿ. ಅಲ್ಲಿಗೆ ಹೋಗಿ ಬರುವ ಖರ್ಚು ನಾನೇ ಕೊಡುತ್ತೇನೆ. ಜನರಿಗೆ ಸುಳ್ಳು ಮಾಹಿತಿ ನೀಡಬಾರದು. ವಾಸ್ತವ ಏನಿದೆಯೋ ಅದನ್ನು ಮಾತನಾಡಲಿ ಎಂದು ಟಾಂಗ್ ನೀಡಿದರು.
ಸುಮಾರು 35 ವರ್ಷಗಳಿಂದಲೂ ಚಿನ್ನ, ಬೆಳ್ಳಿ ದೇಣಿಗೆ ಸಂಗ್ರಹ ಮಾಡಿದ್ದೇವೆಂಬ ಆರೋಪಿಸಿರುವ ದಿನೇಶ್ ಕೆ. ಶೆಟ್ಟಿಗೆ ಮಾಹಿತಿಯೇ ಇಲ್ಲ. ಆರ್ ಎಸ್ಎಸ್, ಹಿಂದುಪರ ಸಂಘಟನೆಗಳು, ಬಿಜೆಪಿಯಾಗಲೀ ಅಂದಿನಿಂದ ಸಂಗ್ರಹ ಮಾಡಿಲ್ಲ. ದೇಣಿಗೆ ನೀಡಲು ಆಸಕ್ತಿ ಹೊಂದಿದವರು ನೀಡಿದ್ದಾರೆ. ವಿನಾಕಾರಣ ಆಪಾದನೆ ಮಾಡೋದು ಬಿಟ್ಟು ಸತ್ಯಾಂಶ ಮಾತನಾಡಲಿ ಎಂದು ಸಲಹೆ ನೀಡಿದರು.
ಏಕನಿವೇಶನ ರದ್ದು ಪ್ರಕರಣ:
ವಿವೇಕಾನಂದ ಸ್ವಾಮಿ ಬಡಾವಣೆಯಲ್ಲಿ ಏಕನಿವೇಶನ ಮಾಡಿಕೊಟ್ಟಿದ್ದರ ವಿರುದ್ಧ ಪ್ರತಿಭಟನೆ ನಡೆಸಿದ್ದೆವು. ನಾವು ದೂಡಾಕ್ಕೆ ಹೋದಾಗ ದಿನೇಶ್ ಕೆ. ಶೆಟ್ಟಿ ಎಲ್ಲಿ ಓಡಿ ಹೋಗಿದ್ದ. ಅಲ್ಲಿಯೇ ಇದ್ದು ಪ್ರಾಮಾಣಿಕನಾಗಿದ್ದರೆ, ಸತ್ಯವಂತನಾಗಿದ್ದರೆ ಉತ್ತರ ನೀಡಬೇಕಿತ್ತು. ಆ ನಂತರ ಏಕನಿವೇಶನ ರದ್ದು ಮಾಡಲಾಯಿತು. ಹಾಗಾದರೆ ದಿನೇಶ್ ಕೆ. ಶೆಟ್ಟಿ ತಾನು ಕಳ್ಳ ಎಂಬುದನ್ನು ಒಪ್ಪಿಕೊಂಡಿದ್ದ ಎಂದು ಏಕವಚನದಲ್ಲಿಯೇ ಗುಡುಗಿದರು.
ಕಾಂಗ್ರೆಸ್ ನಾಯಕರ ವಿರುದ್ಧ ಟೀಕೆ:
ಅಯೋಧ್ಯೆಯ ಶ್ರೀರಾಮಮಂದಿರದ ಪ್ರತಿಷ್ಠಾಪನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಮುಖಂಡರನ್ನು ಆಹ್ವಾನಿಸಿದರೂ ಬಂದಿರಲಿಲ್ಲ. ರಾಮಮಂದಿರ ನಿರ್ಮಾಣಕ್ಕೆ ವಿರೋಧಿಸಿದವರು
ಈಗ ರಾಮಮಂದಿರದ ಭಕ್ತರಂತೆ ವರ್ತಿಸುತ್ತಿದ್ದಾರೆ ಎಂದು ರಾಜನಹಳ್ಳಿ ಶಿವಕುಮಾರ್ ಛೇಡಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಎಸ್. ಕೊಟ್ರಬಸಪ್ಪ, ಮಾಗನೂರು ಬಸಪ್ಪ, ಈಶ್ವರಪ್ಪ ಕೊಂಡಜ್ಜಿ, ಗುರು ಸೋಗಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್, ಟಿಂಕರ್ ಮಂಜಣ್ಣ ಮತ್ತಿತರರು ಹಾಜರಿದ್ದರು.
- Ayodhya Ram Mandir Donation Row
- BJP vs Congress Davanagere
- DAVANAGERE NEWS
- Davanagere Politics
- Dinesh K Shetty
- DUDA President
- Rajanahalli Shivakumar
- Vivekananda Layout Single Plot Issue
- ಅಯೋಧ್ಯೆ ರಾಮಮಂದಿರ ದೇಣಿಗೆ
- ದಾವಣಗೆರೆ ರಾಜಕೀಯ
- ದಾವಣಗೆರೆ ಸುದ್ದಿ
- ದಿನೇಶ್ ಕೆ. ಶೆಟ್ಟಿ
- ದೂಡಾ ಅಧ್ಯಕ್ಷ
- ಬಸವಪ್ರಭು ಸ್ವಾಮೀಜಿ
- ಬಿಜೆಪಿ ವಿರೋಧ ಕಾಂಗ್ರೆಸ್
- ರಾಜನಹಳ್ಳಿ ಶಿವಕುಮಾರ್
- ವಿವೇಕಾನಂದ ಬಡಾವಣೆ ಏಕನಿವೇಶನ





Leave a comment