Home ಕ್ರೈಂ ನ್ಯೂಸ್ 17 ಕೋಟಿ ರೂ. ವೆಚ್ಚದ ಅರಮನೆಯಲ್ಲಿ ಮದುವೆ ಫಿಕ್ಸ್; ಪ್ರೇಯಸಿ ಕೈಯಿಂದಲೇ ಉದ್ಯಮಿ ಕೊಲೆಯಾದ ಆಘಾತಕಾರಿ ಕಥೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

17 ಕೋಟಿ ರೂ. ವೆಚ್ಚದ ಅರಮನೆಯಲ್ಲಿ ಮದುವೆ ಫಿಕ್ಸ್; ಪ್ರೇಯಸಿ ಕೈಯಿಂದಲೇ ಉದ್ಯಮಿ ಕೊಲೆಯಾದ ಆಘಾತಕಾರಿ ಕಥೆ!

Share
ಮದುವೆ
Share

ಪುಣೆ: ಮಹಾರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣವಾದ ಲೋಹಗಡ ಕೋಟೆಯಲ್ಲಿ ಜೂನ್ 18 ರಂದು ನಡೆದಿದ್ದ ಪ್ರಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ (26) ಅವರ ಸಾವು ತೀವ್ರ ತಿರುವು ಪಡೆದುಕೊಂಡಿದೆ.

ಇದನ್ನು ಕೇವಲ “ಅಪಘಾತ” ಎಂದು ಬಿಂಬಿಸಲು ಯತ್ನಿಸಿದ್ದ ಭಾವಿ ಪತ್ನಿ ಸಿಯಾ ಗೋಯಲ್ ಹಾಗೂ ಆಕೆಯ ಪ್ರಿಯಕರ ಚೇತನ್ ಬಾಬುಲಾಲ್ ಚೌಧರಿಯನ್ನು ಪುಣೆ ಗ್ರಾಮಾಂತರ ಪೊಲೀಸರು ಕೊಲೆ ಆರೋಪದ ಮೇಲೆ ಬಂಧಿಸಿದ್ದಾರೆ.

ಏನಿದು ಘಟನೆ?

ಪುಣೆಯ ಗಹುಂಜೆ ನಿವಾಸಿಯಾದ ಕೇತನ್ ಅಗರ್ವಾಲ್ ಹಾಗೂ ಸಿಯಾ ಗೋಯಲ್ ಅವರಿಗೆ ಕಳೆದ ಫೆಬ್ರವರಿಯಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥವಾಗಿತ್ತು. ಬರುವ ನವೆಂಬರ್‌ನಲ್ಲಿ ರಾಜಸ್ಥಾನದ ಉದಯ್‌ಪುರದ 17 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಅರಮನೆಯಲ್ಲಿ ಇವರ ಮದುವೆ ನೆರವೇರಬೇಕಿತ್ತು. ಆದರೆ, ಸಿಯಾಗೆ ಈ ಮದುವೆ ಇಷ್ಟವಿರಲಿಲ್ಲ. ತಾನು ಪ್ರೀತಿಸುತ್ತಿದ್ದ ಚೇತನ್ ಚೌಧರಿ ಜೊತೆ ಜೀವಿಸಲು, ಭಾವಿ ಪತಿ ಕೇತನ್‌ನನ್ನು ಮುಗಿಸಲು ಆಕೆ ಸಂಚು ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಿ ಪ್ರವಾಸಕ್ಕೆ ಪಾಸ್‌ಪೋರ್ಟ್ ಕದ್ದು ಸಾಬೋಟಾಜ್!

ಪೊಲೀಸ್ ತನಿಖೆ ಹಾಗೂ ಮೃತನ ತಂದೆ ವಿಶಾಲ್ ಅಗರ್ವಾಲ್ ನೀಡಿರುವ ದೂರಿನ ಪ್ರಕಾರ, ಜೂನ್ 6 ರಂದು ಈ ಜೋಡಿ ಪ್ರೀ-ವೆಡ್ಡಿಂಗ್ ಫೋಟೋಶೂಟ್‌ಗಾಗಿ ಇಂಡೋನೇಷ್ಯಾದ ಬಾಲಿ ದ್ವೀಪಕ್ಕೆ ತೆರಳಬೇಕಿತ್ತು. ಮುಂಬೈ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗ ಮಧ್ಯೆ, ಆಹಾರ ಮಳಿಗೆಯೊಂದರ ಬಳಿ ಕಾರು ನಿಲ್ಲಿಸಿದಾಗ ಸಿಯಾ ಮೊಬೈಲ್ ಮರೆತ ನೆಪದಲ್ಲಿ ಕಾರಿನ ಬಳಿ ಒಬ್ಬಳೇ ಹೋಗಿದ್ದಾಳೆ. ಏರ್‌ಪೋರ್ಟ್ ತಲುಪಿದಾಗ ಕೇತನ್ ಪಾಸ್‌ಪೋರ್ಟ್ ಮಾತ್ರ ನಾಪತ್ತೆಯಾಗಿತ್ತು. ಹೀಗಾಗಿ ಬಾಲಿ ಪ್ರವಾಸ ರದ್ದಾಗಿತ್ತು. ನಂತರ ಸಿಯಾ ತಾನೇ ಆ ಪಾಸ್‌ಪೋರ್ಟ್ ಹರಿದು ಹೋಟೆಲ್ ಶೌಚಾಲಯದಲ್ಲಿ ಎಸೆದಿರುವುದು ತಾಂತ್ರಿಕ ತನಿಖೆಯಿಂದ ಬಯಲಾಗಿದೆ.

ಹುಟ್ಟುಹಬ್ಬದ ನೆಪದಲ್ಲಿ ಕೋಟೆಗೆ ಕರೆದೊಯ್ದು ಕೊಲೆ:

ಜೂನ್ 19 ರಂದು ಸಿಯಾಳ ಹುಟ್ಟುಹಬ್ಬವಿದ್ದ ಕಾರಣ, ಜೂನ್ 18 ರ ಬೆಳಗ್ಗೆ ಲೋಹಗಡ ಕೋಟೆಗೆ ಟ್ರೆಕ್ಕಿಂಗ್ ಹೋಗೋಣ ಎಂದು ಕೇತನ್‌ನನ್ನು ಆಕೆ ಒತ್ತಾಯಿಸಿ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿಗೆ ಆಕೆಯ ಪ್ರಿಯಕರ ಚೇತನ್ ಕೂಡ ಹುಡಿ (Hoodie) ಧರಿಸಿ ಮುಖ ಮುಚ್ಚಿಕೊಂಡು ಬಂದಿದ್ದನು. ಕೋಟೆಯ ತುದಿಯಲ್ಲಿ ಜನರಿಲ್ಲದ ನಿರ್ಜನ ಹಾಗೂ ಅಪಾಯಕಾರಿ ಜಾಗಕ್ಕೆ ಕೇತನ್‌ನನ್ನು ಕರೆದೊಯ್ದು, ಇಬ್ಬರೂ ಸೇರಿ ಆತನನ್ನು 400 ಅಡಿ ಆಳದ ಕಂದಕಕ್ಕೆ ತಳ್ಳಿದ್ದಾರೆ. ನಂತರ ಪೊಲೀಸರ ಮುಂದೆ “ಫೋಟೋ ತೆಗೆಯುವಾಗ ಕಾಲು ಜಾರಿ ಬಿದ್ದಿದ್ದಾರೆ” ಎಂದು ಸಿಯಾ ಕಟ್ಟುಕಥೆ ಹೆಣೆದಿದ್ದಳು.

ಪೊಲೀಸರಿಗೆ ಸಿಕ್ಕ ಸುಳಿವು ಏನು?

ಶವ ಪತ್ತೆಯಾದಾಗ ಸಿಯಾಳ ನಡವಳಿಕೆಯಲ್ಲಿ ಯಾವುದೇ ದುಃಖವಿರಲಿಲ್ಲ ಎಂದು ಕೇತನ್ ಪೋಷಕರು ಶಂಕೆ ವ್ಯಕ್ತಪಡಿಸಿದ್ದರು. ಅಲ್ಲದೆ ಕೇತನ್ ಒಬ್ಬ ನುರಿತ ಟ್ರೆಕ್ಕರ್ ಆಗಿದ್ದರಿಂದ ಸುಲಭವಾಗಿ ಕಾಲು ಜಾರಲು ಸಾಧ್ಯವಿರಲಿಲ್ಲ. ಪುಣೆ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ ನೇತೃತ್ವದ ತಂಡ ಸಿಸಿಟಿವಿ ದೃಶ್ಯಾವಳಿ, ಮೊಬೈಲ್ ಕಾಲ್ ರೆಕಾರ್ಡ್ಸ್ ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಸಿಯಾ ಹಾಗೂ ಚೇತನ್ ನಿರಂತರ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ. ತೀವ್ರ ವಿಚಾರಣೆ ನಡೆಸಿದಾಗ ಇಬ್ಬರೂ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಕೊಲೆ ಮೊಕದ್ದಮೆ ದಾಖಲಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles