SUDDIKSHANA KANNADA NEWS/ DAVANAGERE/ DATE:15-10-2023
ದಾವಣಗೆರೆ (Davanagere): ಕರ್ನಾಟಕದ ಖ್ಯಾತ ವಾಗ್ಮಿಗಳು, ಆಹಾರ ತಜ್ಞರು, ಚಿಂತಕರಾದ ಶ್ರೀ ಕೆ.ಸಿ.ರಘು ಅವರ ಅಕಾಲಿಕ ನಿಧನಕ್ಕೆ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (AISEC) ಕರ್ನಾಟಕ ರಾಜ್ಯ ಸಮಿತಿಯು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದು, ಅವರ ಕುಟುಂಬದವರಿಗೆ ಸಂತಾಪ ಸೂಚಿಸಿದೆ.
Read Also This Story:
Māyakonda: ಮತ್ತಿ ಗ್ರಾಮದ ಅಸ್ವಚ್ಛತೆಗೆ ಕೆ. ಎಸ್. ಬಸವಂತಪ್ಪ ಕೆಂಡಾಮಂಡಲ: ಅಧಿಕಾರಿಗಳ ಬೆಂಡೆತ್ತಿದ ಶಾಸಕ
ರಘು ಅವರು, ಶಿಕ್ಷಣ ಉಳಿಸಿ ಸಮಿತಿಯು ನಡೆಸಿದ ಎನ್.ಇ.ಪಿ.2020 ನೀತಿಯ ವಿರುದ್ಧ, ಪಠ್ಯಪುಸ್ತಕಗಳ ತಿರುಚಿವಿಕೆಯ ವಿರುದ್ಧದ ಹೋರಾಟದಲ್ಲಿ ನಮ್ಮೊಂದಿಗಿದ್ದುದ್ದನ್ನು ನಾವಿಂದು ಭಾವಪೂರ್ವವಾಗಿ ಸ್ಮರಿಸುತ್ತೇವೆ ಎಂದು ಎಐಸಿಇಸಿ ಪ್ರಮುಖರಾದ ನಾಗಜ್ಯೋತಿ ತಿಳಿಸಿದ್ದಾರೆ.
ಕೆ. ಸಿ. ರಘು ಅವರು ಅತಿಥಿ ಶಿಕ್ಷಕರು – ಉಪನ್ಯಾಸಕರ ಸಮಸ್ಯೆಗಳ ಬಗ್ಗೆ, ನಾಲ್ಕು ವರ್ಷದ ಪದವಿಯ ಬಗ್ಗೆ ನಡೆದ ರಾಜ್ಯ ಮಟ್ಟದ ವೆಬಿನಾರ್ ನಲ್ಲಿ ತಮ್ಮ ಅಧ್ಯಯನಶೀಲತೆ ಹಾಗೂ ಮಾತಿನ ಮೊನಚಿನಿಂದ ಕೇಳುಗರಲ್ಲಿ ಸ್ಪೂರ್ತಿಯನ್ನು ತುಂಬಿದ್ದರು. ಅವರ ಅಕಾಲಿಕ ಮರಣ ಆಳವಾದ ನೋವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.
ಅವರು ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಉಪಾಧ್ಯಕ್ಷರಲ್ಲಿ ಒಬ್ಬರಾಗಿ, ಶಿಕ್ಷಣದ ಕೋಮುವಾದಿಕರಣ ಹಾಗೂ ಕಾರ್ಪೊರೇಟ್ ಕರಣ ಮಾಡುವುದರ ವಿರುದ್ದ ಗಟ್ಟಿ ಧ್ವನಿಯಾಗಿದ್ದರು. ವೈಜ್ಞಾನಿಕ, ಧರ್ಮನೀರಪೇಕ್ಷ, ಪ್ರಜಾಸತ್ತಾತ್ಮಕ ಹಾಗೂ ಸಾರ್ವತ್ರಿಕ ಶಿಕ್ಷಣಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಅವರ ಸಾವು ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.