SUDDIKSHANA KANNADA NEWS/ DAVANAGERE/ DATE:06-12-2023
ದಾವಣಗೆರೆ: ಶಾಮನೂರು ಜಯದೇವಪ್ಪ ಕಲ್ಯಾಣ ಮಂಟಪದಲ್ಲಿ ಬಂಗಾರದ ಆಭರಣ ಕಳವು ಮಾಡಿದ್ದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಂಧಿಸಿರುವ ವಿದ್ಯಾನಗರ ಪೊಲೀಸರು, ಬಂಧಿತನಿಂದ 1,80,000 ರೂ. ಮೌಲ್ಯದ 23 ಗ್ರಾಂ ಚಿನ್ನದ ಆಭರಣ ವಶಕ್ಕೆ ಪಡೆದಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಶಿವಗಂಗ ಗ್ರಾಮದ ಎಂ. ಆರ್. ಶ್ವೇತಾ ಎಂಬುವವರು 2023ರ ಜೂನ್ 5 ರಂದು ಮದುವೆಯ ನಿಮಿತ್ತ ದಾವಣಗೆರೆಗೆ ಬಂದಿದ್ದರು. ಅಂದು ಬೆಳಗ್ಗೆ 9. 30ರ ಸುಮಾರಿನಲ್ಲಿ ಕಲ್ಯಾಣ ಮಂಟಪದ ಕೊಠಡಿ ಸಂಖ್ಯೆ:16 ರಲ್ಲಿ ಚಿನ್ನಾಭರಣಗಳನ್ನು ಬ್ಯಾಗ್ ನಲ್ಲಿಟ್ಟು ಬೀಗ ಹಾಕಿಕೊಂಡು ಹೊರ ಹೋಗಿದ್ದರು. ಸುಮಾರು 10. 30ರ ಸುಮಾರಿಗೆ ಇವರ ಪುತ್ರಿ ಅಪೂರ್ವ ಹೆಚ್.ಡಿ ಕೊಠಡಿಗೆ ಹೋದಾಗ ಬಾಗಿಲಿನ ಬೀಗವನ್ನು ಹೊಡೆಯಲಾಗಿದ್ದು ಎಲ್ಲಾ ಬ್ಯಾಗ್ ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ಪಿಂಕ್ ಬಣ್ಣದ ಬ್ಯಾಗ್ ನಲ್ಲಿಟ್ಟಿದ್ದ ಚಿನ್ನಾಭರಣಗಳಾದ 10 ಗ್ರಾಂ ಬಂಗಾರದ ಪೆಂಡೆಂಟ್, 18 ಗ್ರಾಂ ಬಂಗಾರದ ಸರ, 12 ಗ್ರಾಂ ಬಂಗಾರದ ಕಿವಿ ಓಲೆ ಸೇರಿದಂತೆ ಒಟ್ಟಾರೆ 40 ಗ್ರಾಂ ಬಂಗಾರದ ಒಡವೆಗಳು ಅಂದಾಜು ರೂ. 200000 ಮೌಲ್ಯದ ಬಂಗಾರದ ಒಡವೆಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು, ಮಾಲು ಮತ್ತು ಆರೋಪಿತರ ಪತ್ತೆ ಮಾಡಲು ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಪ್ರಭಾವತಿ. ಸಿ. ಶೇತಸನದಿ ಅವರ ನೇತೃತ್ವದಲ್ಲಿ ಠಾಣೆ ಸಿಬ್ಬಂದಿಯನ್ನೊಳಗೊಂಡ ತಂಡ ರಚಿಸಲಾಗಿತ್ತು. ಈ ತಂಡವು ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಪತ್ತೆ ಮಾಡಿ ಕಳ್ಳತನ ಮಾಡಿದ್ದ ಒಟ್ಟು 1,40,000 ರೂ. ಬೆಲೆ ಬಾಳುವ 23 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದೆ. ವಿದ್ಯಾನಗರ ಪೊಲೀಸ್ ಠಾಣೆಯ 2 ಪ್ರಕರಣಗಳು ಪತ್ತೆಯಾಗಿವೆ.
ಆರೋಪಿ ಪತ್ತೆ ಮಾಡಿದ ತನಿಖಾಧಿಕಾರಿ ಪ್ರಭಾವತಿ. ಸಿ. ಶೇತಸನದಿ, ಪಿಎಸ್ಐ ವಿಶ್ವನಾಥ, ವಿಜಯ್ ಎಂ. ಹಾಗೂ ಸಿಬ್ಬಂದಿಯಾದ ಆನಂದ ಮುಂದಲಮನಿ, ಯೋಗೀಶ್ ನಾಯ್ಕ, ಭೋಜಪ್ಪ ಕಿಚಡಿ, ಮಂಜಪ್ಪ.ಟಿ, ಲಕ್ಷ್ಮಣ್, ರಾಘವೇಂದ್ರ, ಶಾಂತರಾಜು ಅವರನ್ನು ಎಸ್ಪಿ ಉಮಾ ಪ್ರಶಾಂತ್ ಹಾಗೂ ಎಎಸ್ಪಿ ವಿಜಯಕುಮಾರ್ ಎಂ. ಸಂತೋಷ್ ಅವರು ಶ್ಲಾಘಿಸಿದ್ದಾರೆ.