SUDDIKSHANA KANNADA NEWS/ DAVANAGERE/ DATE:07-03-2025
ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯರು ಮಂಡನೆ ಮಾಡಿರುವ ದಾಖಲೆಯ 16ನೇ ಬಜೆಟ್ ಅಭಿವೃದ್ಧಿ ಪೂರಕವಾಗಿದೆ. ಕೃಷಿ, ಮಹಿಳೆಯರ ಸಶಸ್ತೀಕರಣ, ವಿದ್ಯಾರ್ಥಿಗಳು, ಎಸ್ಸಿ, ಎಸ್ಟಿ ಸೇರಿದಂತೆ ಎಲ್ಲಾ ಸಮುದಾಯದವರ ಅಭ್ಯುದಯಕ್ಕೆ ಸಹಕಾರಿಯಾಗಿದೆ ಎಂದು ಜವಾಹರ್ ಬಾಲ್ ಮಂಚ್ ದಾವಣಗೆರೆ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಹೇಳಿದ್ದಾರೆ.
ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ಕ್ರಮ, ದೇಶಿ ತಳಿಗಳ ಬೀಜ ಬ್ಯಾಂಕ್ ಸ್ಥಾಪನೆ ಸೇರಿ ತೋಟಗಾರಿಕೆ ಇಲಾಖೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಸುಸ್ತಿ ಮೇಲಿನ ಬಡ್ಡಿ ಮನ್ನಾ, ರೈತರಿಗೆ ಸಾಲ ವಿತರಣೆ, ಕೃಷಿ ಭಾಗ್ಯ ಯೋಜನೆಯಡಿ 3 ಲಕ್ಷಕ್ಕಿಂತ ಅಧಿಕ ಕೃಷಿ ಹೊಂಡಗಳ ನಿರ್ಮಾಣ, ನುಗ್ರಹ ಯೋಜನೆ ಜಾರಿಗೊಳಿಸಲಾಗಿದೆ. ಜಾನುವಾರುಗಳ ಸಾವಿಗೆ ಪರಿಹಾರ ಹೆಚ್ಚಳ, 50 ನೂತನ ಪಶು ಚಿಕಿತ್ಸಾಲಯ ಪ್ರಾರಂಭ ಮಾಡುವಂಥ ಜನೋಪಯೋಗಿ ಕಾರ್ಯಕ್ರಮ ನೀಡಿದ್ದಾರೆ ಎಂದು ಹೇಳಿದ್ದಾರೆ.
ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಗೌರವಧನ ಹೆಚ್ಚಿಸಿ ನೆರವಾಗಿದ್ದಾರೆ. ʻಗೃಹಲಕ್ಷ್ಮಿʼ ಯೋಜನೆಯ ಯಜಮಾನಿಯರನ್ನು ಸ್ವಸಹಾಯ ಗುಂಪುಗಳ ಸದಸ್ಯರುಗಳನ್ನಾಗಿಸಿ ರಾಜ್ಯಮಟ್ಟದ ಅಕ್ಕ ಕೋ-ಆಪರೇಟಿವ್ ಸೊಸೈಟಿʼ ವ್ಯಾಪ್ತಿಗೆ ತರಲಾಗುವುದು. ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ಮಹಿಳಾ ಸ್ವ-ಸಹಾಯ ಸಂಘಗಳಿಂದ ಆಯ್ದ 50 ಸ್ಥಳಗಳಲ್ಲಿ ಶಿಶು ಪಾಲನೆಗಾಗಿ ʻವಾತ್ಸಲ್ಯ ಕೇಂದ್ರʼಗಳನ್ನು ಸ್ಥಾಪನೆ, ಬಾಣಂತಿಯರ ಸಾವಿನ ಪ್ರಮಾಣ ಶೂನ್ಯಕ್ಕೆ ಇಳಿಸುವ ಗುರಿ ಹೊಂದಿರುವುದು ಅತ್ಯುತ್ತಮ ಕಾರ್ಯಕ್ರಮಗಳು ಎಂದು ಬಣ್ಣಿಸಿದ್ದಾರೆ.
ಎಲ್ಲಾ ವರ್ಗದವರನ್ನೂ ಗಮನದಲ್ಲಿಟ್ಟುಕೊಂಡು ಮಂಡನೆ ಮಾಡಿರುವ ಆಯವ್ಯಯವು ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದೆ. ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಕ್ರಮ, ಮಹದಾಯಿ, ಕಳಸಾ -ಬಂಡೂರಿ ನಾಲೆ ಆಧುನೀಕರಣ
ಸೇರಿದಂತೆ ನೀರಾವರಿಗೂ ಆದ್ಯತೆ ನೀಡಿದ್ದಾರೆ. ಎಸ್ಸಿ, ಎಸ್ಟಿ ಸಮುದಾಯದ ವಿದ್ಯಾರ್ಥಿಗಳಿಗೂ ಸಹಕಾರಿಯಾಗಿದೆ. ವಿದೇಶದಲ್ಲಿ ಅಭ್ಯಾಸ ಮಾಡುವ ಕನಸು ನನಸಾಗಿಸಲು ಯೋಜನೆಗಳು ಸೇರಿದಂತೆ ಎಲ್ಲಾ ವರ್ಗದವರ ಅಭಿವೃದ್ಧಿಗೆ ಸಹಕಾರಿಯಾದ ಬಜೆಟ್ ಆಗಿದೆ ಎಂದು ಮೊಹಮ್ಮದ್ ಜಿಕ್ರಿಯಾ ತಿಳಿಸಿದ್ದಾರೆ.