SUDDIKSHANA KANNADA NEWS/ DAVANAGERE/ DATE:07-11-2023
ದಾವಣಗೆರೆ: ರಾಜ್ಯದಲ್ಲಿ ರೈತರು ಮಳೆ ಬಾರದೇ ಸಂಕಷ್ಟದಲ್ಲಿದ್ದಾರೆ. ಇಂಥ ವೇಳೆ ರಾಜ್ಯ ಸರ್ಕಾರ ರೈತ ನೆರವಿಗೆ ಧಾವಿಸಬೇಕು. ಆದ್ರೆ, ಅದನ್ನು ಬಿಟ್ಟು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪರದಾಡುತ್ತಿದೆ. ರೈತರ ಪಂಪ್ಸೆಟ್ಗಳಿಗೆ ಟ್ರಾನ್ಸ್ ಫಾರ್ಮರ್ ಸಹಿತ ಮೂಲ ಸೌಲಭ್ಯ ಒದಗಿಸುವ ಯೋಜನೆ ರದ್ದು ಮಾಡಿರುವುದು ಖಂಡನೀಯ. ರೈತರು ಸ್ವಂತ ಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಪಡೆಯಬೇಕು ಎಂದು ಸ್ಪಷ್ಟವಾಗಿ ಆದೇಶಿಸಿರುವುದಕ್ಕೆ ಬಿಜೆಪಿ ಜಿಲ್ಲಾ ರೈತ ಮೋರ್ಚಾ ವಿರೋಧ ಇದೆ ಎಂದು ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ನಾಗರಾಜ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರದಿಂದ ಕಂಗಾಲಾಗಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಇಂಧನ ಇಲಾಖೆಯ ಅಧೀನ ಕಾರ್ಯದರ್ಶಿ ಡಿ.ಎಂ. ವಿನೋದ್ ಕುಮಾರ್ ಕಳೆದ ಅ. 7 ರಂದು ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಸೆ .22 ರ ನಂತರ ನೋಂದಣಿ ಆಗುವ ನೀರಾವರಿ ಪಂಪ್ಸೆಟ್ಗಳಿಗೆ ರೈತರು ತಮ್ಮ ಸ್ವಂತ ಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಪಡೆಯಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.ಸರ್ಕಾರದ ಹೊಸ ಆದೇಶದ ಹಿನ್ನೆಲೆ ರೈತರು ತಮ್ಮ ನೀರಾವರಿ ಪಂಪ್ಸೆಟ್ಗಳಿಗೆ ವಿದ್ಯುತ್ ಪಡೆಯಲು ಲಕ್ಷಾಂತರ ರೂ . ಹಣ ಖರ್ಚು ಮಾಡಬೇಕಿದೆ ಎಂದರು.
ಕಳೆದ ಹತ್ತು ವರ್ಷದಿಂದ ಅಕ್ರಮ – ಸಕ್ರಮ ಜಾರಿಯಲ್ಲಿತ್ತು . ಪಂಪ್ ಸೆಟ್ ಮೂಲಕ ನೀರಾವರಿ ಮಾಡುವ ರೈತರಿಗೆ ಇಂಧನ ಇಲಾಖೆಯ ಈ ಯೋಜನೆ ವರವಾಗಿತ್ತು. ರೈತರು ಸುಮಾರು 20 ಸಾವಿರ ರೂ . ಶುಲ್ಕ ಪಾವತಿಸಿ ನೀರಾವರಿ ಪಂಪ್ಸೆಟ್ ವಿದ್ಯುತ್ ಸಂಪರ್ಕ ಪರವಾನಗಿ ಪಡೆದರೆ, ವಿದ್ಯುತ್ ಕಂಪನಿಗಳೇ ಆ ರೈತನ ಹೊಲಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಿತ್ತು. ಆದರೆ ಸರ್ಕಾರದ ಹೊಸ ನೀತಿಯಿಂದ ವಿದ್ಯುತ್ ಜಾಲ ಎಷ್ಟೇ ದೂರವಿದ್ದರೂ ಸ್ವಂತ ಹಣದಲ್ಲೇ ವಿದ್ಯುತ್ ಕಂಬ ಮತ್ತು ತಂತಿ ಹಾಕಿಕೊಳ್ಳಬೇಕಿದೆ. ಜೊತೆಗೆ ಲಕ್ಷಾಂತರ ರೂ . ಖರ್ಚು ಮಾಡಿ ಟ್ರಾನ್ಸ್ಫಾರ್ಮರ್ ಪಡೆಯಬೇಕಿದೆ. ಇದು ರೈತರಿಗೆ ಭಾರಿ ಸಂಕಷ್ಟ ತಂದೊಡ್ಡಿದೆ. ರೈತರಿಗೆ ನೋಂದಣಿ ಶುಲ್ಕ ಪಾವತಿಸುವುದೇ ಕಷ್ಟವಾಗಿತ್ತು. ಸರ್ಕಾರದ ಹೊಸ ನೀತಿಯಿಂದ ರೈತರು ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಲಕ್ಷಾಂತರ ರೂ . ಖರ್ಚು ಮಾಡಬೇಕಿದೆ ಎಂದು ವಿವರಿಸಿದರು.
ಮಳೆಯ ಅಭಾವದಿಂದ ರಾಜ್ಯದಲ್ಲಿ ಸಂಪೂರ್ಣ ಬರಗಾಲ ಆವರಿಸಿದ್ದು, ಮುಂಗಾರು ಬೆಳೆ ಸಂಪೂರ್ಣ ಹಾಳಾಗಿ ಹೋಗಿದೆ . ಪ್ರಸ್ತುತ ಹಿಂಗಾರಿನಲ್ಲಿ ಕೂಡ ಮಳೆಯ ಅಭಾವದಿಂದಾಗಿ ರೈತನ ಬೆಳೆಗಳು ಸಂಪೂರ್ಣ ನಾಶವಾಗಿವೆ . ಸರ್ಕಾರದ ವರದಿಯ ಪ್ರಕಾರ ರಾಜ್ಯದಲ್ಲಿ 223 ತಾಲ್ಲೂಕುಗಳು ಸಂಪೂರ್ಣ ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸುಮಾರು 200 ಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು , ಇದು ದುರ್ದೈವದ ಸಂಗತಿಯಾಗಿದೆ ಎಂದರು.
ಈ ಹಿಂದಿನ ರೈತ ಪರವಾದ ಯೋಜನೆಗಳಾದ ಕಿಸಾನ್ ಸಮ್ಮಾನ್ ನಿಧಿ, ರೈತ ವಿದ್ಯಾನಿಧಿ, ಭೂ ಚೇತನ, ಭೂ ಸಿರಿ, ರೈತ ಶಕ್ತಿ, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸೇರಿದಂತೆ ಅನೇಕ ಯೋಜನೆಗಳನ್ನು ಅನುದಾನದ ಕೊರತೆ ಎಂಬ ನೆಪವೊಡ್ಡಿ ರದ್ದು ಮಾಡಲಾಗಿದೆ. ವಿದ್ಯುತ್ ಅಭಾವ, ರೈತರ ಆತ್ಮಹತ್ಯೆ ಹಾಗೂ ಬರ ಪೀಡಿತ ಪ್ರದೇಶದ ರೈತರ ಸಹಾಯಕ್ಕೆ ಬರಬೇಕಾದ ಸರ್ಕಾರ ಮತ್ತು ಉಸ್ತುವಾರಿ ಮಂತ್ರಿಗಳು ಯಾವುದೇ ಜಿಲ್ಲೆಗಳಿಗೆ ಭೇಟಿ ನೀಡಿಲ್ಲ. ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ. ಹೀಗಾಗಿ ರೈತನ ಬದುಕು ಅತ್ಯಂತ ಅಸಹನೀಯವಾಗಿದೆ ಎಂದು ದೂರಿದರು.
ರೈತರ ಕೃಷಿ ಪಂಪ್ಸೆಟ್ಗಳಿಗೆ ಸ್ವಂತ ಖರ್ಚಿನಲ್ಲಿಯೇ ಹೊಸ ಸಂಪರ್ಕ ಪಡೆಯುವ ಆದೇಶವನ್ನು ಸರ್ಕಾರ ರದ್ದುಗೊಳಿಸಿ ಈ ಹಿಂದಿನಂತೆಯೇ ವಿದ್ಯುತ್ ಸಂಪರ್ಕ ನೀಡಬೇಕಾಗಿ ಸರ್ಕಾರವನ್ನು ಕರ್ನಾಟಕ ಬಿಜೆಪಿ ರೈತ ಮೋರ್ಚಾ ಒತ್ತಾಯಿಸುತ್ತದೆ ಎಂದು ತಿಳಿಸಿದರು.
ಒಂದು ವೇಳೆ ಈ ಆದೇಶವನ್ನು ಹಿಂಪಡೆಯದಿದ್ದರೆ ರಾಜ್ಯದ ಸುಮರು 35 ಲಕ್ಷ ಪಂಪ್ಸೆಟ್ಗಳ ರೈತ ಬಳಕೆದಾರರೊಂದಿಗೆ ಬಿಜೆಪಿ ರೈತ ಮೋರ್ಚಾ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಕೊಳೇನಹಳ್ಳಿ ಬಿ.ಎಂ. ಸತೀಶ್, ಕಡ್ಲೇಬಾಳು ಧನಂಜಯ್, ಗುರುನಾಥ್, ಬಾತಿ ಶಿವಕುಮಾರ್, ಅಣಜಿ ಗುಡ್ಡೇಶ್, ಕುಂದುವಾಡ ಗಣೇಶ್, ರೇವಣಸಿದ್ದಪ್ಪ, ಕಡ್ಲೇಬಾಳು ಬಸವರಾಜ್, ಅಣಬೇರು ಶಿವಪ್ರಕಾಶ್ ಉಪಸ್ಥಿತರಿದ್ದರು.