SUDDIKSHANA KANNADA NEWS/ DAVANAGERE/ DATE:22-03-2025
ಬೆಂಗಳೂರು: ವಿಧಾನ ಪರಿಷತ್ ಉಪಸಭಾಪತಿ ಧರ್ಮೇಗೌಡ ಅವರು ಕೂತಿದ್ದ ಪೀಠದ ಮೇಲೆ ಎರಗಿದ ಕಾಂಗ್ರೆಸ್ನ ಪುಂಡ ಶಾಸಕರು ಅವರನ್ನು ಕೆಳಗೆ ಎಳೆದು ಬಿಸಾಡಿದ್ದರು.ಬುದ್ಧಿವಂತರ ಛಾವಡಿಯೆಂದೇ ಕರೆಯಲಾಗುವ ಪರಿಷತ್ತಿನಲ್ಲಿ ಕಾಂಗ್ರೆಸ್ ಶಾಸಕರು ಅಕ್ಷರಶಃ ಗೂಂಡಾಗಳಂತೆ ವರ್ತಿಸಿ ಧರ್ಮೇಗೌಡರಿಗೆ ಅಪಮಾನ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ್ದರು ಎಂದು ಬಿಜೆಪಿ ತಿರುಗೇಟು ನೀಡಿದೆ.
ಆ ಸಮಯದಲ್ಲಿ ಕಾಂಗ್ರೆಸ್ಸಿನ ಕೆ. ಪ್ರತಾಪ್ ಚಂದ್ರ ಶೆಟ್ಟಿ ಅವರು ಸಭಾಪತಿಯಾಗಿದ್ದರು. ಉಪಸಭಾಪತಿ ಧರ್ಮೇಗೌಡ ಅವರ ಮೇಲೆ ನಡೆದ ದೌರ್ಜನ್ಯದ ಕುರಿತು ವರದಿ ನೀಡಲು ಒಂದು ಕಮಿಟಿಯನ್ನು ರಚನೆ ಮಾಡಿದ್ದರು. ಆದರೆ, ಇಂದು ಎಳೆದಾಡಿ ತಳ್ಳಿಸುವಂತಹ ಯಾವುದೇ ಘಟನೆ ನಡೆದಿಲ್ಲವಾದರೂ, ಸಣ್ಣ ಘಟನೆಯ ಕುರಿತು ಪರಿಶೀಲನೆ ಮಾಡದೆ, ಸರ್ವಾಧಿಕಾರಿಯಂತೆ ವಿರೋಧ ಪಕ್ಷಗಳನ್ನು ಹತ್ತಿಕ್ಕುವುದಕ್ಕಾಗಿ 6 ತಿಂಗಳು ಅಮಾನತು ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೂಲೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿಯ 18 ಶಾಸಕರು ಅಂತಹ ಕಿಡಿಗೇಡಿ ಕೃತ್ಯವೇನು ಮಾಡಿಲ್ಲ. ಧರ್ಮ ಆಧಾರಿತ ಮೀಸಲಾತಿ ನೀಡುವಂತಿಲ್ಲ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಸಂವಿಧಾನದಲ್ಲಿ ಹೇಳಿದ್ದಾರೆ. ಹೀಗಿದ್ದರೂ ಸಂವಿಧಾನ ವಿರೋಧಿ ಸಿದ್ದರಾಮಯ್ಯ ಸರ್ಕಾರ ತುಷ್ಟೀಕರಣಕ್ಕಾಗಿ ಮೀಸಲಾತಿ ನೀಡಿ ಪ್ರಜಾಪ್ರಭುತ್ವದ ಕಗ್ಗೂಲೆ ಮಾಡಿದೆ ಎಂದು ಸಿಟ್ಟು ಹೊರಹಾಕಿದೆ.
ಮುಖ್ಯಮಂತ್ರಿ ಕುರ್ಚಿಯನ್ನು ವಾಮಮಾರ್ಗದ ಮೂಲಕವಾದರೂ ಪಡೆಯಲೇಬೇಕೆಂಬ ದುರುದ್ದೇಶದಿಂದ ಸುಮಾರು 48 ರಾಜಕಾರಣಿಗಳ ಮೇಲೆ ಅದು ಕಾಂಗ್ರೆಸ್ ಸಚಿವರು, ಶಾಸಕರ ಮೇಲೆಯೇ ಹನಿಟ್ರ್ಯಾಪ್ ಮಾಡಲಾಗಿದೆ. ಇಷ್ಟೆಲ್ಲಾ ಅನಾಚಾರಗಳು ನಡೆಯುತ್ತಿದ್ದರೂ ಬಿಜೆಪಿ ವಿರೋಧ ಪಕ್ಷವಾಗಿ ಸದನದೊಳಗೆ ಪ್ರತಿಭಟನೆ ಮಾಡದೆ ಕುರ್ಚಿಯಲ್ಲಿ ಕುಳಿತು ಸರ್ವಾಧಿಕಾರಿ ಸರ್ಕಾರದ ಬುರಡೆ ಭಾಷಣ ಕೇಳಬೇಕಿತ್ತೇ? ತುಘಲಕ್ ಸರ್ಕಾರ ತನ್ನ ಸಮಾಧಿಗೆ ಅಂತಿಮ ಮೊಳೆ ಹೊಡಿಸಿಕೊಳ್ಳುತ್ತಿದೆ ಎಂದು ಗುಡುಗಿದೆ.