Home ಕ್ರೈಂ ನ್ಯೂಸ್ ಬ್ರಿಮ್ಸ್ ಆಸ್ಪತ್ರೆಯಲ್ಲಿ ವಿಕೃತಿ: ಮೃತ ಮಹಿಳೆಯರ ನಗ್ನ ಫೋಟೋ ತೆಗೆಯುತ್ತಿದ್ದ ಅಟೆಂಡರ್ ಮುನೀರ್ ಅಹ್ಮದ್ ವಿರುದ್ಧ ಎಫ್‌ಐಆರ್ ದಾಖಲು!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಬ್ರಿಮ್ಸ್ ಆಸ್ಪತ್ರೆಯಲ್ಲಿ ವಿಕೃತಿ: ಮೃತ ಮಹಿಳೆಯರ ನಗ್ನ ಫೋಟೋ ತೆಗೆಯುತ್ತಿದ್ದ ಅಟೆಂಡರ್ ಮುನೀರ್ ಅಹ್ಮದ್ ವಿರುದ್ಧ ಎಫ್‌ಐಆರ್ ದಾಖಲು!

Share
ಮಹಿಳೆ
Share

ಬೀದರ್: ರಾಜ್ಯದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗಳಲ್ಲೊಂದಾದ ಬೀದರ್‌ನ ಬ್ರಿಮ್ಸ್ (BRIMS) ಆಸ್ಪತ್ರೆಯ ಶವಾಗಾರದಲ್ಲಿ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ, ಅತ್ಯಂತ ಅಮಾನವೀಯ ಮತ್ತು ವಿಕೃತ ಘಟನೆಯೊಂದು ಬೆಳಕಿಗೆ ಬಂದಿದೆ. ಆಸ್ಪತ್ರೆಯ ಶವಾಗಾರಕ್ಕೆ ಬರುವ ಮೃತ ಮಹಿಳೆಯರ ದೇಹದ ಮೇಲಿನ ಬಟ್ಟೆಗಳನ್ನು ತೆಗೆದು ಫೋಟೋ ಶೂಟ್ ಮಾಡುತ್ತಿದ್ದ ಆರೋಪಿ, ಹೊರಗುತ್ತಿಗೆ ಅಟೆಂಡರ್ ಮುನೀರ್ ಅಹ್ಮದ್‌ನ ಹೀನ ಕೃತ್ಯವೀಗ ಬಯಲಾಗಿದೆ.

ಮೃತಪಟ್ಟ ಮೇಲೂ ಮಹಿಳೆಯರ ಘನತೆ ಮತ್ತು ಕುಟುಂಬಸ್ಥರ ಗೌರವಕ್ಕೆ ಧಕ್ಕೆ ತಂದಿರುವ ಈ ಘಟನೆಯು ವೈದ್ಯಕೀಯ ಕ್ಷೇತ್ರದ ಗೌಪ್ಯತೆ ಮತ್ತು ನೈತಿಕತೆಯನ್ನೇ ಗಾಳಿಗೆ ತೂರಿದೆ.

ಮೊಬೈಲ್‌ನಲ್ಲಿ ಸಿಕ್ಕಿತು ವಿಕೃತಿಯ ಸಾಕ್ಷಿ!

ಆರೋಪಿ ಮುನೀರ್ ಅಹ್ಮದ್ ಶವಾಗಾರದಲ್ಲಿದ್ದ ಹೆಣ್ಣುಮಕ್ಕಳ ಶವಗಳ ನಗ್ನ ಚಿತ್ರಗಳನ್ನು ತೆಗೆದು, ಅವುಗಳನ್ನು ತನ್ನ ಮೊಬೈಲ್‌ನಲ್ಲಿ ರಹಸ್ಯವಾಗಿ ಸಂಗ್ರಹಿಸಿಟ್ಟುಕೊಂಡಿದ್ದ ಎನ್ನಲಾಗಿದೆ. ಈ ಸಿಬ್ಬಂದಿಯ ವಿಕೃತ ವರ್ತನೆ ಮತ್ತು ಹೀನ ಕೃತ್ಯ ಆಸ್ಪತ್ರೆಯ ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಇಡೀ ಆಸ್ಪತ್ರೆ ಮಂಡಳಿ ಬೆಚ್ಚಿಬಿದ್ದಿದೆ. ಆರೋಪಿಯ ಫೋನ್ ಪರಿಶೀಲಿಸಿದಾಗ ಹಲವು ಮಹಿಳಾ ಮೃತದೇಹಗಳ ಬೆತ್ತಲೆ ಚಿತ್ರಗಳು ಪತ್ತೆಯಾಗಿದ್ದು, ಈತ ಹಲವು ವರ್ಷಗಳಿಂದ ಈ ವಿಕೃತ ಕೃತ್ಯ ಎಸಗುತ್ತಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ.

ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ:

ಘಟನೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಬ್ರಿಮ್ಸ್ ಆಸ್ಪತ್ರೆಯ ಶವಾಗಾರ ಮುಖ್ಯಸ್ಥರಾದ ಡಾ. ಮೋಸಿನ್ ಉಲ್ ಹಕ್ ಅವರು ತಕ್ಷಣವೇ ಬೀದರ್‌ನ ನ್ಯೂ ಟೌನ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಸದ್ಯ ಆರೋಪಿ ಮುನೀರ್ ಅಹ್ಮದ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯಡಿ ಕಲಂ 301 ಹಾಗೂ 62 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಇತ್ತ ಕರ್ನಾಟಕ ರಾಜ್ಯ ಮಹಿಳಾ ಆಯೋಗವೂ ಸಹ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಗ್ಯ ಇಲಾಖೆಯಿಂದ ಸಮಗ್ರ ವರದಿ ಕೇಳಿದೆ.

ಸಾರ್ವಜನಿಕರ ತೀವ್ರ ಆಕ್ರೋಶ:

ಬ್ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳು ಬದುಕಿದ್ದಾಗಲೂ ಸೂಕ್ತ ಚಿಕಿತ್ಸೆ ಸಿಗದೆ ಪರದಾಡುವ ಸ್ಥಿತಿ ಇರುತ್ತದೆ. ಆದರೆ ಈಗ ಸತ್ತ ಮೇಲೂ ಶವಗಳಿಗೆ ನೆಮ್ಮದಿಯಿಲ್ಲದಂತಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಸ್ವತಃ ಒಬ್ಬ ಮಹಿಳಾ ನಿರ್ದೇಶಕಿಯೇ ಇರುವ ಬ್ರಿಮ್ಸ್ ಆಸ್ಪತ್ರೆಯಲ್ಲೇ ಮಹಿಳೆಯರ ಶವಗಳಿಗೆ ಇಂತಹ ದುರ್ಗತಿ ಬಂದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆಗೆ ಒಳಗಾಗಿದೆ. ವಿಕೃತಿ ಮೆರೆದ ಆರೋಪಿಗೆ ಕಠಿಣಾತಿಕಠಿಣ ಶಿಕ್ಷೆಯಾಗಬೇಕು ಎಂದು ಇಡೀ ಜಿಲ್ಲೆಯ ಜನತೆ ಒತ್ತಾಯಿಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles