SUDDIKSHANA KANNADA NEWS/ DAVANAGERE/ DATE:10-11-2023
ದಾವಣಗೆರೆ: ಭದ್ರಾ ಜಲಾನಯನ ಪ್ರದೇಶದಲ್ಲಿ ಕೆಲ ದಿನಗಳಿಂದ ಉತ್ತಮ ಮಳೆಯಾಗಿದ್ದು, ಭದ್ರಾ ಡ್ಯಾಂಗೆ ಬರುತ್ತಿರುವ ಹೊರಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ 152.6 ಅಡಿ.
ಗುರುವಾರ 2257 ಕ್ಯೂಸೆಕ್ ಒಳಹರಿವಿತ್ತು. ಆದ್ರೆ, ಇಂದು ಬೆಳಗ್ಗೆ ಆರು ಗಂಟೆ ಹೊತ್ತಿಗೆ 2398 ಕ್ಯೂಸೆಕ್ ಒಳಹರಿವಿದೆ. ಉತ್ತಮ ಮಳೆಯಾಗಿರುವ ಕಾರಣದಿಂದ ಜಲಾಶಯದಿಂದ ಬಿಡುತ್ತಿರುವ ಹೊರಿವಿನಲ್ಲಿ ಕಡಿಮೆ ಮಾಡಲಾಗಿದೆ. ಭದ್ರಾ ಬಲದಂಡೆ ನಾಲೆಯಲ್ಲಿ 1000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ನಿನ್ನೆ 1864 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತಿತ್ತು.
ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಉತ್ತಮ ಮಳೆಯಾದ ಕಾರಣ ಭತ್ತ ಬೆಳೆಗೆ ಇನ್ನು ಒಂದು ವಾರದವರೆಗೆ ನೀರು ಹರಿಸದಿದ್ದರೂ ತೊಂದರೆಯಾಗುವುದಿಲ್ಲ. ಹಾಗಾಗಿ, ಈ ಹಿಂದೆ ಘೋಷಿಸಿದಂತೆ 100 ದಿನಗಳ ಕಾಲ ನೀರು ಹರಿಸಬೇಕು. ಮಾತ್ರವಲ್ಲ, ಈಗ ನೀರು ನಿಲುಗಡೆ ಮಾಡಿ ಮುಂದಿನ ಹತ್ತು ದಿನಗಳ ಕಾಲ ನೀರು ಹರಿಸುವ ಅವಧಿ ವಿಸ್ತರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಭದ್ರಾ ಡ್ಯಾಂನಲ್ಲಿನ ನೀರಿನ ಸಂಗ್ರಹ ಸ್ವಲ್ಪ ಮಟ್ಟಿಗೆ ಹೆಚ್ಚಳವಾಗಿದೆ. ಇಂದು 152. 6 ಅಡಿ ತಲುಪಿದ್ದು, ಮತ್ತೆ ಮಳೆ ಮುಂದುವರಿದರೆ ಡ್ಯಾಂಗೆ ಬರುತ್ತಿರುವ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಸದ್ಯಕ್ಕೆ 2398 ಕ್ಯೂಸೆಕ್ ಒಳಹರಿವು ಇರುವುದರಿಂದ ಒಂದು ಸಾವಿರ ಮೂರು ನೂರ ತೊಂಬತ್ತೆಂಟು ಕ್ಯೂಸೆಕ್ ನೀರು ಡ್ಯಾಂನಲ್ಲಿ ಸಂಗ್ರಹವಾಗಲಿದೆ. ಹಾಗಾಗಿ, ಡ್ಯಾಂ ನೀರಿನ ಮಟ್ಟ ಹೆಚ್ಚಳವಾಗುವ ಸಾಧ್ಯತೆ ಇದೆ.
ಭದ್ರಾ ಡ್ಯಾಂನ ಗರಿಷ್ಠ ಮಟ್ಟ 186 ಅಡಿ ಇದ್ದು, ಕಳೆದ ವರ್ಷ ಇದೇ ದಿನ 184.5 ಅಡಿ ಇತ್ತು. ಭದ್ರಾ ಡ್ಯಾಂನ ಸ್ಟೋರೇಜ್ ಕೆಪಾಸಿಟಿ 71.5 ಟಿಎಂಸಿ ಇದೆ. ಜಲಾಶಯದಲ್ಲಿ ನೀರು ಸಂಗ್ರಹ ಹೆಚ್ಚಳವಾದಷ್ಟು ರೈತರಿಗೆ ಅನುಕೂಲವಾಗಲಿದೆ. ಈಗಾಗಲೇ ದಾವಣಗೆರೆ ಜಿಲ್ಲೆಯ ಆರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಆರು ತಾಲೂಕುಗಳಲ್ಲಿಯೂ ಮಳೆ ಉತ್ತಮವಾಗಿ ಸುರಿದಿದೆ. ಚನ್ನಗಿರಿ, ಹೊನ್ನಾಳಿಯಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ.
ಈಗಾಗಲೇ ಭೂಮಿ ತಂಪಾಗಿದ್ದು, ಮಳೆ ಮತ್ತೆ ಸುರಿಯುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಪ್ರಕಾರ ಮತ್ತೆರಡು ದಿನಗಳ ಕಾಲ ಮಳೆಯಾಗಬಹುದು ಎಂದು ಹೇಳಲಾಗುತ್ತಿದೆ. ಭತ್ತ ಬೆಳೆಗೆ ಮಳೆ ಬಂದಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಭದ್ರಾ ಜಲಾನಯನ ಪ್ರದೇಶದಲ್ಲಿ ಮತ್ತೆ ಮಳೆ ಮುಂದುವರಿದರೆ ಜಲಾಶಯದ ನೀರಿನ ಮಟ್ಟ ನೀರಿನ ಏರಿಕೆ ಆಗಲಿದೆ. ಮಾತ್ರವಲ್ಲ, ಬೇಸಿಗೆಗೆ ಕುಡಿಯುವ ನೀರು, ಜಾನುವಾರು ಮೇವು ಹಾಗೂ ಅಡಿಕೆಗೆ ನೀರು ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಮಳೆಯಾಗಲಿ ಎಂದು ರೈತರು ಪ್ರಾರ್ಥನೆ ಮಾಡುತ್ತಿದ್ದಾರೆ. ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳು ಹಾಳಾಗಿದ್ದು, ರೈತರು ಪರಿಹಾರಕ್ಕೆ ಸರ್ಕಾರದ ಮೊರೆ ಇಟ್ಟಿದ್ದಾರೆ.
ಹರಿಹರ ತಾಲೂಕಿನ ಮಲೇಬೆನ್ನೂರು ಸೇರಿದಂತೆ ಹಲವೆಡೆ ಭಾರೀ ಗಾಳಿ, ಮಳೆಗೆ ಭತ್ತ ಹಾಳಾಗಿದೆ. ಚಾಪೆ ಹಾಸಿದಂತೆ ಭತ್ತವು ಮಲಗಿದ್ದು, ಭತ್ತ ಬೆಳೆದ ಬೆಳೆಗಾರರು ಸೂಕ್ತ ಪರಿಹಾರ ನೀಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.