SUDDIKSHANA KANNADA NEWS/ DAVANAGERE/ DATE:12-05-2023
ದಾವಣಗೆರೆ (DAVANAGERE): ಜಿಲ್ಲೆಯ ಏಳು ಕ್ಷೇತ್ರಗಳ ಚುನಾವಣಾ ಫಲಿತಾಂಶಕ್ಕೆ ಇನ್ನು ಕೆಲವು ಗಂಟೆಗಳಷ್ಟೇ ಬಾಕಿ. ಎಲ್ಲರ ಚಿತ್ತ ವಿಧಾನಸಭಾ ಚುನಾವಣೆಯ ಫಲಿತಾಂಶದತ್ತ ನೆಟ್ಟಿದೆ. ಎಲ್ಲಿ ನೋಡಿದರೂ ಯಾರು ಗೆಲ್ತಾರೆ? ಯಾರು ಸೋಲ್ತಾರೆ? ಎಂಬ ಮಾತೇ. ಗೆಲುವು, ಸೋಲಿನ ಬಗ್ಗೆ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಿವೆ. ಆದ್ರೆ, ಮತ್ತೆ ಕೆಲವರಂತೂ ಈ ಬಾರಿ ತನ್ನ ನೆಚ್ಚಿನ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ ಎಂಬ ಬಲವಾದ ವಿಶ್ವಾಸದಲ್ಲಿದ್ದಾರೆ. ಉಳಿದವರು ಬೆಟ್ಟಿಂಗ್ ಕಟ್ಟಲು ಶುರು ಮಾಡಿದ್ದಾರೆ.
ಹೊನ್ನಾಳಿ ತಾಲೂಕಿನ ಚಿಕ್ಕಗೋಣಿ ಗ್ರಾಮದಲ್ಲಿ ಹೆಬ್ಬಾರ್ ನಾಗಣ್ಣ ಎಂಬುವವರು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಈ ಬಾರಿ ಹೊನ್ನಾಳಿ – ನ್ಯಾಮತಿ ತಾಲೂಕಿನ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೆ. ಬಿಜೆಪಿ ಅಭ್ಯರ್ಥಿ ಎಂ. ಪಿ. ರೇಣುಕಾಚಾರ್ಯ ಸೋಲುತ್ತಾರೆ. ಡಿ. ಜಿ.ಶಾಂತನಗೌಡರ ಗೆಲುವು ಶತಃಸಿದ್ಧ. ಯಾರಾದರೂ ಜೂಜು ಕಟ್ಟುವುದಿದ್ದರೆ ಕಟ್ಟಲಿ. ಅದಕ್ಕೆ ನಾನು ಆಹ್ವಾನ ನೀಡುತ್ತೇನೆ ಎಂದು ಗ್ರಾಮದ ಬೀದಿ ಬೀದಿಗಳಲ್ಲಿ ಡಂಗೂರ ಬಾರಿಸಿದ್ದಾರೆ. ಮಾತ್ರವಲ್ಲ, ಪಂಥಾಹ್ವಾನವನ್ನು ಕೊಟ್ಟಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ, ಬೇಕಾದರೆ ನಾನು ಎರಡು ಎಕರೆ ತೋಟ ಕಟ್ಟುತ್ತೇನೆ. ಯಾರಾದರೂ ಬಂದು ಸವಾಲು ಸ್ವೀಕರಿಸಬಹುದು. ಶಾಂತನಗೌಡರ ಗೆಲುವು ಶತಃಸಿದ್ಧ. ಜೂಜು ಕಟ್ಟಲು ಆಸಕ್ತಿ ಇರುವವರು ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬನ್ನಿ ಎಂದು ಡಂಗೂರ ಸಾರಿಸಿದ್ದು, ಇದುವರೆಗೆ ಯಾರಾದರೂ ಪಂಥಾಹ್ವಾನ ಸ್ವೀಕರಿಸಿದ್ದಾರಾ ಎಂಬ ಕುರಿತು ಮಾಹಿತಿ ಇಲ್ಲ.
ಇನ್ನು ಚನ್ನಗಿರಿ ತಾಲೂಕಿನಲ್ಲಿ ಕಾಂಗ್ರೆಸ್ ನ ಶಿವಗಂಗಾ ಬಸವರಾಜ್, ಪಕ್ಷೇತರ ಅಭ್ಯರ್ಥಿ ಮಾಡಾಳ್ ಮಲ್ಲಿಕಾರ್ಜುನ್, ಬಿಜೆಪಿ ಅಭ್ಯರ್ಥಿ ಶಿವಕುಮಾರ್, ಜೆಡಿಎಸ್ ಅಭ್ಯರ್ಥಿ ತೇಜಸ್ವಿ ಪಟೇಲ್ ಪ್ರಮುಖರು ಕಣದಲ್ಲಿರುವವರು. ಮಾಡಾಳ್ ಮಲ್ಲಿಕಾರ್ಜುನ್ ಅಬ್ಬರದ ಪ್ರಚಾರ ಸೇರಿದಂತೆ ಎಲ್ಲಾ ರೀತಿಯಲ್ಲಿಯೂ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿ ಮಾಡಾಳ್ ಮಲ್ಲಿಕಾರ್ಜುನ್ ಹಾಗೂ ಕಾಂಗ್ರೆಸ್ ನ ಶಿವಗಂಗಾ ಬಸವರಾಜ್ ನಡುವೆ ನೇರಾ ನೇರಾ ಹಣಾಹಣಿ ಇದ್ದು, ಯಾರು ಗೆಲ್ಲುತ್ತಾರೆ ಎಂಬುದು ಮತ ಎಣಿಕೆ ಮುಗಿದ ಬಳಿಕ ಗೊತ್ತಾಗಲಿದೆ.
ಆದ್ರೆ, ಕೈ ಹುರಿಯಾಳು ಶಿವಗಂಗಾ ಬಸವರಾಜ್ ಪರ ಹಲವರು ಬೆಟ್ಟಿಂಗ್ ಕಟ್ಟಲು ತಯಾರಿದ್ದಾರೆ. ಮಾತ್ರವಲ್ಲ, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳ ನಡುವೆ ಮತ ವಿಭಜನೆ ಆಗುತ್ತೆ. ಈ ಕಾರಣಕ್ಕಾಗಿ ಶಿವಗಂಗಾ ಬಸವರಾಜ್ ಗೆದ್ದೇ ಗೆಲ್ಲುತ್ತಾರೆ, ಯಾರು ಬೇಕಾದರೂ ಜೂಜು ಕಟ್ಟಬಹುದು ಎಂದು ಸವಾಲು ಹಾಕುತ್ತಿದ್ದಾರೆ.
ಚನ್ನಗಿರಿ ತಾಲೂಕಿನ ತಚಾವರೆಕೆರೆ ಗ್ರಾಮದ ಯುವಕನೊಬ್ಬ ತೋಟವನ್ನೇ ಪಣಕ್ಕಿಟ್ಟಿದ್ದಾನೆ. ಚನ್ನಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವಗಂಗಾ ಬಸವರಾಜ್, ಗೆದ್ದೇ ಗೆಲ್ಲುತ್ತಾರೆ. ಯಾರೂ ಬೇಕಾದರೂ ಬರಬಹುದು ಎಂದು ಸವಾಲು ಹಾಕಿದ್ದಾನೆ.
ಇನ್ನು ಕೂಲಿ ಕಾರ್ಮಿಕರೊಬ್ಬರೂ ಸಹ ನಾನು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಹತ್ತು ಸಾವಿರ ರೂಪಾಯಿ ಕಟ್ಟುತ್ತೇನೆ, ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ ಎಂದರೆ ಮತ್ತೊಬ್ಬ ಯುವಕನೊಬ್ಬ ತನ್ನ ಎರಡು ಎಕರೆ ಅಡಿಕೆ ತೋಟ ಪಣಕ್ಕಿಡುತ್ತೇನೆ ಎಂದು ಹೇಳಿದ್ದಾರೆ. ಚಾನೆಲ್ ಪಕ್ಕದಲ್ಲಿರುವ ನೀರಿನ ವ್ಯವಸ್ಥೆಯುಳ್ಳ ಎರಡು ಎಕರೆ ತೋಟವನ್ನು ಪಣಕ್ಕಿಟ್ಟಿದ್ದು, ಬಾಜಿ ಕಟ್ಟಲು ಆಹ್ವಾನ ನೀಡಿದ್ದಾರೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಬಿಜೆಪಿ ಅಭ್ಯರ್ಥಿ ಬಿ. ಜಿ. ಅಜಯಕುಮಾರ್ ಅವರ ಪರ ವಿರೋಧವಾಗಿಯೂ ಬೆಟ್ಟಿಂಗ್ ಜೋರಾಗುತ್ತಿದೆ. ಹರಿಹರ, ಜಗಳೂರು, ಮಾಯಕೊಂಡ ಕ್ಷೇತ್ರಗಳಲ್ಲಿಯೂ ಪ್ರಬಲ ಪೈಪೋಟಿಯನ್ನು ಅಭ್ಯರ್ಥಿಗಳು ನೀಡುತ್ತಿದ್ದಾರೆ. ಗೆಲ್ಲುವ ಸಾಧ್ಯತೆ ಇರುವ ಅಭ್ಯರ್ಥಿಗಳ ಪರ ಹಣ, ಬೈಕ್ ಸೇರಿದಂತೆ ಇತರೆ ಜೂಜಾಟ ಜೋರಾಗಿಯೇ ಇದೆ. ಯಾವುದೂ ಅಧಿಕೃತವಾಗಿರದಿದ್ದರೂ ಬಾಯಿ ಮಾತಿನಲ್ಲಿ ಸವಾಲು – ಪ್ರತಿಸವಾಲು ಜೋರಾಗಿದೆ.