ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಪೆಟ್ಟಿಗೆಯಿಂದ ಹಣ ಲೂಟಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಂದು ಸ್ಪೋಟಕ ಮಾಹಿತಿ ಹೊರಬಿದ್ದಿದೆ.
ದೇಣಿಗೆ ಎಣಿಕೆ ಮಾಡುವ ಸಿಬ್ಬಂದಿಯ ಮೇಲೆ ಅನುಮಾನಗೊಂಡು, ಅವರನ್ನು ತಕ್ಷಣವೇ ಕೆಲಸದಿಂದ ತೆಗೆದುಹಾಕುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮೂರು ತಿಂಗಳ ಹಿಂದೆಯೇ ಶಿಫಾರಸು ಮಾಡಿತ್ತು ಎಂದು ಮೂಲಗಳಿಂದ ತಿಳಿದುಬಂದಿದೆ.
ಆದರೆ, ರಾಮ ಮಂದಿರ ಟ್ರಸ್ಟ್ನ ಕೆಲವು ಪ್ರಭಾವಿ ಅಧಿಕಾರಿಗಳು ಈ ಸಿಬ್ಬಂದಿಯನ್ನು ವಜಾಗೊಳಿಸದಂತೆ ತಡೆದಿದ್ದರು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಟ್ರಸ್ಟ್ ಅಧಿಕಾರಿಗಳ ಶ್ರೀರಕ್ಷೆ?
ದೇಣಿಗೆ ನಿಧಿಯನ್ನು ಎಣಿಕೆ ಮಾಡುವ ಜವಾಬ್ದಾರಿಯನ್ನು ಎಸ್ಬಿಐ ಬೇರೊಂದು ಹೊರಗುತ್ತಿಗೆ (Outsourcing) ಸಂಸ್ಥೆಗೆ ನೀಡಿತ್ತು. ಮೂರು ತಿಂಗಳ ಹಿಂದೆಯೇ ಹಣ ದುರುಪಯೋಗವಾಗುತ್ತಿರುವ ಸುಳಿವು ಸಿಕ್ಕಾಗ, ಬ್ಯಾಂಕ್ ಸಿಬ್ಬಂದಿಯನ್ನು ಬದಲಾಯಿಸಲು ಮುಂದಾಗಿತ್ತು.
ಆದರೆ, ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಮಾಜಿ ಟ್ರಸ್ಟಿ ಅನಿಲ್ ಮಿಶ್ರಾ ಅವರ ತೀವ್ರ ಒತ್ತಡ ಹಾಗೂ ಪ್ರಭಾವದಿಂದಾಗಿ ಬ್ಯಾಂಕ್ಗೆ ಆ ಸಿಬ್ಬಂದಿಯನ್ನು ತೆಗೆದುಹಾಕಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಕಳ್ಳತನವು ಯಾವುದೇ ಅಡೆತಡೆಯಿಲ್ಲದೆ ಮುಂದುವರಿದಿತ್ತು ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಚಂಪತ್ ರಾಯ್ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಅನಿಲ್ ಮಿಶ್ರಾ ಮತ್ತು ಗೋಪಾಲ್ ರಾವ್ ಅವರಿಗೂ ನೋಟಿಸ್ ಜಾರಿ ಮಾಡುವ ಸಾಧ್ಯತೆಯಿದೆ.
ಬ್ಯಾಂಕ್ ನೌಕರರದ್ದೇ ಸಾಥ್!
ಈ ದರೋಡೆ ಕೇವಲ ಹೊರಗುತ್ತಿಗೆ ಸಿಬ್ಬಂದಿಗೆ ಮಾತ್ರ ಸೀಮಿತವಾಗಿರಲಿಲ್ಲ. ಬ್ಯಾಂಕ್ನ ಸ್ವಂತ ಪೇರೋಲ್ನಲ್ಲಿದ್ದ ರತ್ನೇಷ್ ಮತ್ತು ಗಗನ್ದೀಪ್ ಎಂಬ ಇಬ್ಬರು ನೌಕರರ ಕೈವಾಡವೂ ಇದರಲ್ಲಿರುವುದು ಪತ್ತೆಯಾಗಿದೆ.
ಎಣಿಕೆ ಕೋಣೆಯಲ್ಲಿ ಮೇಲ್ವಿಚಾರಣೆ ನಡೆಸಬೇಕಾಗಿದ್ದ ಇವರೇ ಕಳ್ಳತನಕ್ಕೆ ಸಾಥ್ ನೀಡಿರುವ ಭದ್ರವಾದ ಪುರಾವೆಗಳು ಪೊಲೀಸರಿಗೆ ಸಿಕ್ಕಿವೆ. ಬಂಧಿತವಾಗಿರುವ ಎಂಟು ಆರೋಪಿಗಳಲ್ಲಿ ಬಹುತೇಕರು ಟ್ರಸ್ಟ್ ಅಧಿಕಾರಿಗಳ ಸಂಬಂಧಿಕರು ಮತ್ತು ಆಪ್ತರಾಗಿದ್ದು, ಯಾವುದೇ ಪೊಲೀಸ್ ವೆರಿಫಿಕೇಶನ್ ಇಲ್ಲದೆ ಕೇವಲ ಶಿಫಾರಸಿನ ಆಧಾರದ ಮೇಲೆ ಕೆಲಸಕ್ಕೆ ಸೇರಿಕೊಂಡಿದ್ದರು ಎನ್ನಲಾಗಿದೆ.
ಜುಲೈ 11ಕ್ಕೆ ಹೊಸ ಗೈಡ್ಲೈನ್ಸ್:
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಜನರನ್ನು ಬಂಧಿಸಲಾಗಿದ್ದು, ಕದ್ದ ಆಸ್ತಿಯನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಇಂತಹ ಲೋಪದೋಷಗಳನ್ನು ತಡೆಯಲು ರಾಮ ಮಂದಿರ ಟ್ರಸ್ಟ್ ಈಗ ಎಚ್ಚೆತ್ತುಕೊಂಡಿದ್ದು, ಸಿಬ್ಬಂದಿ ನೇಮಕಾತಿಗೆ ಕಠಿಣ ಪೊಲೀಸ್ ವೆರಿಫಿಕೇಶನ್ ಮತ್ತು ಬ್ಯಾಕ್ಗ್ರೌಂಡ್ ಚೆಕ್ ಕಡ್ಡಾಯಗೊಳಿಸಲು ನಿರ್ಧರಿಸಿದೆ.
ಈ ಕುರಿತು ಜುಲೈ 11 ರಂದು ನಡೆಯಲಿರುವ ಟ್ರಸ್ಟ್ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.





Leave a comment