ಗುವಾಹಾಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಮೊರಿಗಾಂವ್ ಜಿಲ್ಲೆಯ ಭುರಾಗಾಂವ್ ಪೊಲೀಸರು ಅಬ್ದುಲ್ ಮುತಾಲಿಬ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಭಾಷಣ ಮಾಡುತ್ತಿದ್ದ ಫೇಸ್ಬುಕ್ ಲೈವ್ ಪ್ರಸಾರದಲ್ಲಿ, 1 ಕೋಟಿ ರೂಪಾಯಿಗೆ ಸಿಎಂ ಅವರನ್ನು ಕೊಲೆ ಮಾಡುವುದಾಗಿ ಅಬ್ದುಲ್ ಮುತಾಲಿಬ್ ಹೆಸರಿನ ಖಾತೆಯಿಂದ ಕಾಮೆಂಟ್ ಮಾಡಲಾಗಿತ್ತು. ಜೊತೆಗೆ ಈ ಕಾಮೆಂಟ್ನಲ್ಲಿ ದೇಶವಿರೋಧಿ ಹಾಗೂ ಪಾಕಿಸ್ತಾನ ಪರ ಘೋಷಣೆಗಳನ್ನು ಪೋಸ್ಟ್ ಮಾಡಲಾಗಿತ್ತು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಕಾಮೆಂಟ್ ಜೊತೆ ನೀಡಲಾಗಿದ್ದ ಮೊಬೈಲ್ ಸಂಖ್ಯೆಯನ್ನು ಆಧರಿಸಿ ತನಿಖೆ ನಡೆಸಿ ದರ್ಜಿ ವೃತ್ತಿ ಮಾಡುತ್ತಿದ್ದ ಆರೋಪಿ ಮುತಾಲಿಬ್ನನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ಆತನ ತಂದೆ, ಸಹೋದರ ಸೇರಿದಂತೆ ಮತ್ತಿಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವರದಿಯ ಪ್ರಕಾರ, ಪ್ರಸ್ತುತ ಡಿಜಿಟಲ್ ಸಾಕ್ಷ್ಯಗಳ ಪರಿಶೀಲನೆ ನಡೆಯುತ್ತಿದೆ.





Leave a comment