SUDDIKSHANA KANNADA NEWS/ DAVANAGERE/ DATE:10-06-2024
ದಾವಣಗೆರೆ: ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹೆಚ್. ಕಲ್ಪನಹಳ್ಳಿ ಬಳಿಯ ಹೈ ವೇ ರಸ್ತೆಯಲ್ಲಿ ಲಾರಿ ಚಾಲಕನಿಂದ ಮೊಬೈಲ್ ಮತ್ತು ಹಣ ದರೋಡೆ ಮಾಡಿದ್ದ ಐವರನ್ನು ಬಂಧಿಸಲಾಗಿದೆ.
ದಾವಣಗೆರೆ ನಗರದ ಎಸ್ ಜೆ ಎಂ ನಗರದ ಆಟೋ ಚಾಲಕ ಕುಶಾಲ್ (20), ಆಂಜನೇಯ ಮಿಲ್ ಬಳಿ ವಾಸಿ ಕೂಲಿ ಕಾರ್ಮಿಕ ವೆಂಕಟೇಶ್ (19) ತರಗಾರು ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ (19), ಕಾನೂನು ಸಂಘರ್ಷಕ್ಕೆ ಒಳಗಾದ
ಇಬ್ಬರು ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದರೋಡೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಘಟನೆ ಹಿನ್ನೆಲೆ:
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಸೂಡಂಬಿ ಗ್ರಾಮದ ಲಾರಿ ಚಾಲಕ ಸಂದೀಪ್ ಶಿವನಗೌಡ ಹಿರೇಗೌಡ ಅವರು ಲಾರಿ ಚಾಲಕ ಕೆಲಸ ಮಾಡಿಕೊಂಡಿದ್ದು ಜೂ.7ರ ಲಾರಿ ಬಾಡಿ ಕಟ್ಟಿಸಲು ತುಮಕೂರಿಗೆ ಲಾರಿಯನ್ನು ತೆಗೆದುಕೊಂಡು ಪೂನಾ – ಬೆಂಗಳೂರು ಮಾರ್ಗವಾಗಿ ಹೋಗುತ್ತಿದ್ದರು. ಆಗ ರಾತ್ರಿ ಸುಮಾರು 12.15 ಗಂಟೆ ಸಮಯದಲ್ಲಿ ದಾವಣಗೆರೆಯ ಹೆಚ್.ಕಲಪನ ಹಳ್ಳಿ ಹತ್ತಿರ ಹೈವೇ ರಸ್ತೆಯಲ್ಲಿ ಊಟ ಮಾಡಲೆಂದು ಲಾರಿಯನ್ನು ನಿಲ್ಲಿಸಿದ್ದರು.
ಇದೇ ಸಮಯಕ್ಕೆ ಯಾರೋ ಐವರು ಹುಡುಗರು ಒಂದು ಪ್ಯಾಸೆಂಜರ್ ಆಟೋದಲ್ಲಿ ಬಂದವರೇ ಲಾರಿಯಲ್ಲಿ ಹತ್ತಿ ಚಾಲಕನಿಂದ ಹಣ, ಮೊಬೈಲ್ ದರೋಡೆ ಮಾಡುತ್ತಿರುವಾಗ ಪ್ರತ್ಯಕ್ಷದರ್ಶಿಯೊಬ್ಬರು ತಕ್ಷಣ 112 ತುರ್ತು ಸ್ಪಂದನ ವಾಹನಕ್ಕೆ ಕರೆ ಮಾಡಿ ಮಾಹಿತಿ ನೀಡಿದ ಮೇರೆಗೆ ಹತ್ತಿರದಲ್ಲಿಯೇ ಗಸ್ತು ಕರ್ತವ್ಯದಲ್ಲಿದ್ದ 112 ತುರ್ತು ಸ್ಪಂದನ ವಾಹನದ ಸಿಬ್ಬಂದಿಯವರು ತಕ್ಷಣ ಕಾರ್ಯ ಪ್ರವೃತ್ತರಾಗಿ ಅತಿ ಶೀಘ್ರವಾಗಿ ಸ್ಥಳಕ್ಕೆ ಆಗಮಿಸಿದರು. ದರೋಡೆ ಮಾಡುತ್ತಿದ್ದ ವ್ಯಕ್ತಿಗಳು ತಪ್ಪಿಸಿಕೊಂಡು ಓಡಿದಾಗ ಪೊಲೀಸ್ ಸಿಬ್ಬಂದಿಯವರು ಬೆನ್ನತ್ತಿ ಇಬ್ಬರನ್ನು ಹಿಡಿದುಕೊಂಡು ವಶಕ್ಕೆ ಪಡೆದುಕೊಂಡು ದರೋಡೆಗೆ ಒಳಗಾಗಿದ್ದ ವ್ಯಕ್ತಿಯನ್ನು ರಕ್ಷಿಸಿದ್ದಾರೆ.
ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ದಾವಣಗೆರೆ ಜಿಲ್ಲೆ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯ್ ಕುಮಾರ್ ಸಂತೋಷ್ ಹಾಗೂ ಮಂಜುನಾಥ ಮತ್ತು ದಾವಣಗೆರೆ ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಶಾಂತ್ ಸಿದ್ದನಗೌಡರ್ ರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆಯ ಪಿ.ಐ ಕಿರಣ್ ಕುಮಾರ್ ಇ.ವೈ., ಪಿಎಸ್ಐ ಜೋವಿತ್ ರಾಜ್ ಮತ್ತು 112 ವಾಹನದ ಸಿಬ್ಬಂದಿ ಸಿದ್ದೇಶ್, ಚಾಲಕ ವಿನೋದ್, ಠಾಣಾ ಸಿಬ್ಬಂದಿ ದೇವೇಂದ್ರನಾಯ್, ನಾಗಭೂಷಣ, ಅಣ್ಣಯ್ಯ, ಮಹಮ್ಮದ್ ಯೂಸುಫ್ ಅತ್ತಾರ್, ವೀರೇಶ್ ಪಿ.ಎಂ. ಇವರೊಂದಿಗೆ ಅಲ್ಪ ಸಮಯದಲ್ಲಿಯೇ ಕೃತ್ಯವೆಸಗಿ ಓಡಿ ಹೋಗಿದ್ದ ಆರೋಪಿತರನ್ನು ಪತ್ತೆ ಮಾಡಿದ್ದಾರೆ.
ಚಾಲಕನಿಂದ ಕಿತ್ತುಕೊಂಡು ಹೋಗಿದ್ದ 1200 ರೂಪಾಯಿ ನಗದು ಹಾಗೂ 10,000 ರೂಪಾಯಿ ಬೆಲೆ ಬಾಳುವ 1 ಮೊಬೈಲ್ ಫೋನ್, 1,20,000 ರೂ ಬೆಲೆಯ ಕೃತ್ಯಕ್ಕೆ ಬಳಸಿದ್ದ ಆಟೋವನ್ನು ವಶಪಡಿಸಿಕೊಂಡು ಆರೋಪಿತರು ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ. ಬಾಲಕರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನದಲ್ಲಿರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದರೋಡೆ ಮಾಡಿದ್ದ ಆರೋಪಿತರು ಮತ್ತು ಕಾ. ಸ. ಬಾಲಕರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಶ್ಲಾಘಿಸಿದ್ದಾರೆ.