SUDDIKSHANA KANNADA NEWS/ DAVANAGERE/ DATE:19-11-2023
ದಾವಣಗೆರೆ: ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತು ಟಗರು ಕಾಳಗ. ಟಗರುಗಳ ಡಿಚ್ಚಿ ವೀಕ್ಷಿಸಿದ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿ ಜಿ. ಬಿ. ವಿನಯ್ ಕುಮಾರ್… ಸ್ಪರ್ಧೆ ನೋಡಲು ಸೇರಿದ್ದ ಜನರಿಗೆ ರೋಮಾಂಚನ ಅನುಭವ…
ಹೌದು. ಇದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತ್ಯಾವಣಗಿ ಗ್ರಾಮದಲ್ಲಿ ಗೆಳೆಯರ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಟಗರು ಕಾಳಗದ ಸ್ಯಾಂಪಲ್.
ಪ್ರತಿವರ್ಷವೂ ತ್ಯಾವಣಿಗೆ ಗ್ರಾಮದಲ್ಲಿ ಟಗರು ಕಾಳಗ ಏರ್ಪಡಿಸಲಾಗುತ್ತದೆ. ಕಳೆದ ಮೂರು ವರ್ಷಗಳಿಂದ ಈ ಕಾರ್ಯಕ್ರಮ ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ಈ ಬಾರಿಯ ಟಗರು ಕಾಳಗವು ಎಲ್ಲರ ಗಮನ ಸೆಳೆಯಿತು.
ಅಷ್ಟೇ ಅಲ್ಲ, ತಾವು ತಮ್ಮ ತಮ್ಮ ಮನೆ ಕೊಟ್ಟಿಗೆಯಲ್ಲಿ ಕಟ್ಟಿ ಸಾಕುತ್ತಿದ್ದ ಕುರಿಗಳನ್ನು ಸ್ಪರ್ಧೆಗೆ ಕರೆದುಕೊಂಡು ಬರಲಾಗಿತ್ತು. ಸ್ಪರ್ಧೆಯಲ್ಲಿ ಟಗರುಗಳ ಡಿಚ್ಚಿ, ಓಡಾಟ ಎಲ್ಲರ ಗಮನ ಸೆಳೆಯಿತು. ಕೆಲವೊಂದು ಟಗರುಗಳ ಡಿಚ್ಚಿ ನೋಡುತ್ತಿದ್ದಂತೆ ಜನರ ಶಿಳ್ಳೆ, ಕೇಕೆ, ಚಪ್ಪಾಳೆ ಮುಗಿಲು ಮುಟ್ಟಿತ್ತು. ಜನರು ಸಹ ಹುರಿದುಂಬಿಸುತ್ತಾ ಟಗರುಗಳಿಗೆ ಉತ್ತೇಜನ ನೀಡಿದರು.
ಟಗರು ಗೆಲ್ಲಲೇ ಬೇಕು ಎಂದು ಹಠ ತೊಟ್ಟಿದ್ದ ಕಾಳಗವಂತೂ ನೋಡಲು ಸೂಪರ್. ಇನ್ನು ಟಗರುಗಳ ಮಾಲೀಕರು ಸಹ ತನ್ನ ನೆಚ್ಚಿನ ಟಗರು ಜೊತೆಯಲ್ಲೇ ಇದ್ದು, ಅವುಗಳಿಗೆ ಆಹಾರ, ನೀರು ಸೇರಿದಂತೆ ಮೈ ಸವರುತ್ತಾ ಕಾಳಗದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.
ಈ ದೇಸೀ ಸೊಗಡಿನ ಟಗರು ಪಂದ್ಯಕ್ಕೆ ಉತ್ತೇಜನ ನೀಡುವ ಸಲುವಾಗಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ದಾವಣಗೆರೆ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ ವಿನಯ್ ಕುಮಾರ್ ಅವರು, ಕಾಳಗವನ್ನು ವೀಕ್ಷಿಸಿದರು.
ಇನ್ ಸೈಟ್ಸ್ ಐಎಎಸ್ ನ ಸಂಸ್ಥಾಪಕರೂ ಆದ ವಿನಯ್ ಕುಮಾರ್ ಅವರು ಟಗರುಗಳ ಕಾಳಗ ನೋಡಲು ಬಂದಿದ್ದವರ ಗಮನ ಸೆಳೆದರು. ಈ ವೇಳೆ ಮಾತನಾಡಿದ ಅವರು, ದೇಶೀಯ ಕ್ರೀಡೆಗಳು ಮರೆಯಾಗುತ್ತಿದ್ದು, ಪದೇ ಪದೇ ಇಂಥ ಟಗರು ಪಂದ್ಯಾವಳಿ ಹಮ್ಮಿಕೊಂಡು ಪ್ರೋತ್ಸಾಹಿಸಿ ಉತ್ತೇಜನ ನೀಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಆಯಾ ರಾಜ್ಯಗಳ ಗ್ರಾಮೀಣ ಪಂದ್ಯಗಳ ಬಗ್ಗೆ ತಮಿಳುನಾಡು ಕೇರಳ, ರಾಜಸ್ಥಾನ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿಯೇ ಆಯಾ ಸರ್ಕಾರಗಳೇ ಪ್ರೋತ್ಸಾಹ ನೀಡುತ್ತಿವೆ. ಅನುದಾನವನ್ನೂ ನೀಡುತ್ತಿವೆ. ಅದೇ ರೀತಿಯಲ್ಲಿಯೂ ಕರ್ನಾಟಕ
ರಾಜ್ಯದಲ್ಲಿ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಹೆಚ್.ಬಿ. ಕರಿಬಸಪ್ಪ, ಮಾಜಿ ಅಧ್ಯಕ್ಷೆ ಹನುಮಮ್ಮ, ಮುಖಂಡರಾದ ಪದ್ಮಾವತಿ, ಕೃಷ್ಣಕುಮಾರ್, ಹಾಲಪ್ಪ, ಹಾಲೇಶ್, ಮಹಾಂತೇಶ್ ಮತ್ತಿತರರು ಹಾಜರಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಬಂದ ಟಗರುಗಳ ಮಾಲೀಕರು, ಸುತ್ತ ಮುತ್ತಲಿನ ಹಳ್ಳಿಗಳ ಗ್ರಾಮಸ್ಥರು ಪಂದ್ಯ ವೀಕ್ಷಿಸಿದರು. ಸಾವಿರಾರು ಜನರು ಪಂದ್ಯಗಳ ಕಣ್ತುಂಬಿಕೊಂಡರು.