SUDDIKSHANA KANNADA NEWS/ DAVANAGERE/ DATE:18-01-2025
ದಾವಣಗೆರೆ: ಆಕಸ್ಮಿಕವಾಗಿ ಬಾವಿಗೆ ಬಿದ್ದು 70 ವರ್ಷದ ವೃದ್ದೆ ಮೃತಪಟ್ಟಿರುವ ಘಟನೆ ಹೊನ್ನಾಳಿ – ನ್ಯಾಮತಿ ಪಟ್ಟಣದ ಗಾಂಧಿ ರಸ್ತೆಯ ಆಟೋ ನಿಲ್ದಾಣದ ಹಿಂಭಾಗದಲ್ಲಿ ನಡೆದಿದೆ.
ಕೂಗನಹಳ್ಳಿ ತಾಂಡಾದ ಗಂಗಮ್ಮ ದುರ್ಗಭೋವಿ (70) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಹಣ ಬಿಡಿಸಿಕೊಳ್ಳುವ ಸಲುವಾಗಿ ನ್ಯಾಮತಿ ಪಟ್ಟಣಕ್ಕೆ ವೃದ್ಧೆ ಬಂದಿದ್ದರು. ಬ್ಯಾಂಕ್ ನಿಂದ ಹಣ ಬಿಡಿಸಿಕೊಂಡು ಊರಿಗೆ ವಾಪಸ್ ಹೋಗಲು ಆಟೋಗೆ ಕಾಯುತ್ತಿದ್ದರು. ಈ ವೇಳೆ ಮೊಮ್ಮಗಳೂ ಇದ್ದಳು. ಆದ್ರೆ ಹಿಂಬದಿಯ ಖಾಲಿ ಜಾಗಕ್ಕೆ ಮೂತ್ರ ವಿಸರ್ಜನೆಗೆ ಹೋಗಿದ್ದಾರೆ. ಈ ವೇಳೆ ತುಂಬಾ ಹೊತ್ತಾದರೂ ವಾಪಸ್ ಬಾರದ ಕಾರಣ ಮೊಮ್ಮಗಳು ಹಿಂಬದಿಯ ಖಾಲಿ ಜಾಗಕ್ಕೆ ಹೋಗಿ ನೋಡಿದಾಗ ಬಾವಿಯಲ್ಲಿ ಬಿದ್ದಿರುವುದು ಗೊತ್ತಾಗಿದೆ.
ಕೂಡಲೇ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾಳೆ. ಹೊನ್ನಾಳಿ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶವವನ್ನು ಹೊರತೆಗೆದರು. ಬಾವಿಯನ್ನು ಮುಚ್ಚದ ಮಾಲೀಕರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸುವಂತೆ ಮೃತ ವೃದ್ಧೆ ಪುತ್ರಿ ನ್ಯಾಮತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.