SUDDIKSHANA KANNADA NEWS/ DAVANAGERE/ DATE:19-11-2023
ದಾವಣಗೆರೆ: ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ನಿಂತಿದೆ. ಭದ್ರಾ ಡ್ಯಾಂಗೆ ಬರುತ್ತಿರುವ ಒಳಹರಿವಿನ ಪ್ರಮಾಣವೂ ತುಂಬಾನೇ ಕಡಿಮೆಯಾಗಿದೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ. ದಾವಣಗೆರೆ ಜಿಲ್ಲೆಯ ಶೇಕಡಾ 70ರಷ್ಟು ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆ ಬೆಳೆದಿರುವ ರೈತರ ಆತಂಕಕ್ಕೆ ಕಾರಣವಾಗಿದೆ.
ಭದ್ರಾ ಜಲಾಶಯದ ನೀರು ನಂಬಿ ದಾವಣಗೆರೆ ಜಿಲ್ಲೆಯ ರೈತರು ಬೆಳೆ ಬೆಳೆಯುತ್ತಾರೆ. ಅದರಲ್ಲಿಯೂ ಅಡಿಕೆ ಬೆಳೆಗೆ ಇದೇ ನೀರೇ ಪ್ರಮುಖ. ಭದ್ರಾ ಜಲಾಶಯದಿಂದ ಹೊರ ಹರಿವಿದ್ದು, ಜಲಾಶಯದ ನೀರಿನ ಮಟ್ಟ ದಿನ ಕಳೆದಂತೆ ಕುಸಿತ ಕಂಡಿದೆ.
ಭದ್ರಾ ಡ್ಯಾಂನ ಇಂದಿನ ನೀರಿನ ಮಟ್ಟ 151.8 ಅಡಿ. ಒಳ ಹರಿವು 494 ಕ್ಯೂಸೆಕ್ ಇದ್ದರೆ, ಹೊರ ಹರಿವು 2855 ಕ್ಯೂಸೆಕ್ ಇದೆ. ಭದ್ರಾ ಜಲಾಶಯದಿಂದ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಒತ್ತಾಯದ ಮೇರೆಗೆ ಮತ್ತೆ ಹರಿಸಲಾಗತ್ತಿದೆ. ಮಳೆ ಬಂದ ಕಾರಣ ಒಂದು ವಾರಗಳ ಕಾಲ ನೀರ ಸ್ಥಗಿತಗೊಳಸಲಾಗಿತ್ತು. ಮತ್ತೆ ನೀರು ಹರಿಸುತ್ತಿರುವುದು ರೈತರಲ್ಲಿ ಖುಷಿ ತಂದರೆ, ಮತ್ತೊಂದೆಡೆ ಬೇಸಿಗೆಗೆ ಕುಡಿಯುವ ನೀರಿನ ಅಭಾವ ಉಂಟಾಗುವ ಸಾಧ್ಯತೆಯೂ ಇದೆ ಎಂಬ ಆತಂಕ ಮತ್ತೊಂದೆಡೆ ಶುರುವಾಗಿದೆ.
ಭದ್ರಾ ಬಲದಂಡೆ ನಾಲೆಯಲ್ಲಿ 2650 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಜಲಾಶಯಕ್ಕೆ ಒಳ ಹರಿವು ಕನಿಷ್ಠ 500 ಕ್ಯೂಸೆಕ್ ಸಹ ಇಲ್ಲ. ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ ಸೇರಿದಂತೆ ಮಲೆನಾಡಿನಲ್ಲಿ ಮಳೆಯೂ ಕ್ಷೀಣವಾಗಿದೆ. ಮತ್ತೆ ಮಳೆ ಬರುವ ಸಾಧ್ಯತೆಯೂ ಕಡಿಮೆ ಇದೆ. ಹೊರ ಹರಿವು ಇದೇ ರೀತಿ ಹರಿಸಿದರೆ ಕೆಲ ದಿನಗಳಲ್ಲಿ 150 ಅಡಿಗಿಂತ ಕಡಿಮೆ ನೀರು ಸಂಗ್ರಹವಾಗುತ್ತದೆ.
ಈಗಾಗಲೇ ಭತ್ತ ಬೆಳೆದಿರುವ ರೈತರ ಜಮೀನುಗಳಿಗೆ ನೀರಿನ ಅವಶ್ಯಕತೆ ಇದೆ. ಸ್ವಲ್ಪ ದಿನಗಳಲ್ಲಿ ಭತ್ತವೂ ಕಟಾವಿಗೆ ಬರಲಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರು ರೈತರು ಈಗಾಗಲೇ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಹರಿಹರ ಶಾಸಕ ಬಿ. ಪಿ. ಹರೀಶ್ ಅವರು ಈಗಾಗಲೇ ಜಲಸಂಪನ್ಮೂಲ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರನ್ನು ಭೇಟಿ ನೂರು ದಿನಗಳು ಮಾತ್ರವಲ್ಲ, ಇನ್ನೂ ಹತ್ತು ದಿನಗಳ ಕಾಲ ಹೆಚ್ಚು ನೀರು ಹರಿಸಬೇಕೆಂದು
ಮನವಿ ಮಾಡಿದ್ದಾರೆ. ಇದಕ್ಕೆ ಡಿ. ಕೆ. ಶಿವಕುಮಾರ್ ಅವರೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದೇ ರೀತಿ ನೀರು ಡ್ಯಾಂನಿಂದ ಹರಿಸಿದರೆ ಬೇಸಿಗೆಗೆ ಏನು ಮಾಡಬೇಕೆಂಬ ಚಿಂತೆಯೂ ಕಾಡಲಾರಂಭಿಸಿದೆ.
ಭದ್ರಾವತಿ, ಚನ್ನಗಿರಿ ಭಾಗದಲ್ಲಿ ಹೆಚ್ಚಾಗಿ ಅಡಿಕೆ ಬೆಳೆಯಲಾಗುತ್ತದೆ. ಬೇಸಿಗೆಗೆ ಅಡಿಕೆಗೆ ನೀರು ಬೇಕು. ಈ ವೇಳೆ ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾದರೆ ಹೊರ ಹರಿವು ನಿಲ್ಲಿಸಲಾಗುತ್ತದೆ. ಅಡಿಕೆ ಮರಗಳನ್ನು ಉಳಿಸಿಕೊಳ್ಳಲು ನೀರಿನ ಅವಶ್ಯಕತೆ ಬೀಳುತ್ತದೆ. ಆಗ ಎಲ್ಲಿಂದ ನೀರು ತರುವುದು ಎಂಬ ಚಿಂತೆಯೂ ಕಾಡಲಾರಂಭಿಸಿದೆ.
ಕಳೆದ ವರ್ಷ ಇದೇ ಭದ್ರಾ ಜಲಾಶಯದ ನೀರಿನ ಮಟ್ಟ 182.7 ಅಡಿ ಇತ್ತು. ಈ ವರ್ಷ 31 ಅಡಿ ನೀರು ಕಡಿಮೆ ಸಂಗ್ರಹವಿದೆ. ಒಟ್ಟಿನಲ್ಲಿ ಭದ್ರಾ ಜಲಾಶಯ ನಂಬಿ ಭತ್ತ ಬೆಳೆದಿರುವ ರೈತರಿಗೆ ನೀರು ಹರಿಸಲಾಗುತ್ತಿದೆ. ಜಾನುವಾರುಗಳ ಮೇವು, ಕುಡಿಯುವ ನೀರಿಗೂ ಭದ್ರಾ ಜಲಾಶಯವೇ ಆಧಾರ. ಹಾಗಾಗಿ, ದಾವಣಗೆರೆ, ಚಿತ್ರದುರ್ಗದ ಜನರು ಮುಗಿಲಿನತ್ತ ನೋಡುವಂತಾಗಿದೆ.