SUDDIKSHANA KANNADA NEWS/ DAVANAGERE/ DATE:18-11-2023
DAVANAGERE: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ನಿವೇಶನ ಹಂಚಿಕೆಯಾಗಿದ್ದು, ಹಕ್ಕುಪತ್ರ ನೀಡಲು ಮಹಾನಗರ ಪಾಲಿಕೆ ಆಯುಕ್ತರು ಮೀನಾಮೇಷ ಎಣಿಸುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ಕೇಸ್ ಲೋಕಾಯುಕ್ತದಲ್ಲಿದ್ದು, ವರದಿ ಕೊಟ್ಟಿಲ್ಲ. ಇನ್ನೆರಡು ತಿಂಗಳಲ್ಲಿ ಬರಲಿದೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಏನಿದು ಹಕ್ಕುಪತ್ರ ವಿತರಣೆ ವಿವಾದ ಎಂಬ ಕುರಿತ ಸಂಪೂರ್ಣ ಮಾಹಿತಿಯುಳ್ಳ ಸ್ಟೋರಿ ಇದು.
ಎಸ್. ಎ. ರವೀಂದ್ರನಾಥ್ ಅವರು, ಶಾಸಕರಾಗಿದ್ದಾಗ ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನಿವೇಶನ ರಹಿತ ಬಡ ಕುಟುಂಬಗಳಿಗೆ ಕೆ.ಬೇವಿನಹಳ್ಳಿ, ಬನ್ನಿಕೋಡು ಮತ್ತು ಸಾಲಕಟ್ಟೆ ಗ್ರಾಮದ ವಿವಿಧ ರಿ.ಸ.ನಂ ಗಳಲ್ಲಿ ಸುಮಾರು 50 ಎಕರೆ ಜಮೀನು ಖರೀದಿಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಮಹಾನಗರ ಪಾಲಿಕೆಯು 2022ರ ಮಾರ್ಚ್ 9ರಂದು ಕಳುಹಿಸಿಕೊಟ್ಟಿತ್ತು. ಖರೀದಿ ಪ್ರಸ್ತಾವನೆಗೆ ಕಳುಹಿಸಿಕೊಡಲು ತೀರ್ಮಾನಿಸಿರುವ ಕೆ.ಬೇವಿನಹಳ್ಳಿ , ಬನ್ನಿಕೋಡು ಮತ್ತು ಸಾಲಕಟ್ಟೆ ಮತ್ತು ಬೆಳ್ಳೂಡಿ, ಷಂಶಿಮಠ ಗ್ರಾಮಗಳನ್ನು ಸಹ ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಗೆ ಸೇರಿಸಲಾಗಿದೆ.
22.04.2022 ರಂದು ಜಮೀನು ಖರೀದಿಗೆ ಪ್ರತಿ ಎಕರೆಗೆ ರೂ : 37.50 ಲಕ್ಷ ರೂಗಳಂತೆ ಒಟ್ಟು 50.13 ಎಕರೆಗೆ 18.90.46.910/- ರೂಗಳನ್ನು ಸರ್ಕಾರವು ಅನುದಾನವನ್ನು ಬಿಡುಗಡೆ ಮಾಡಿದೆ. ಸರ್ಕಾರದ ಆದೇಶದಂತೆ ಅನುದಾನವನ್ನು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ , ಬೆಂಗಳೂರು ಇವರು ದಿನಾಂಕ : 25.04.2022 ರಂದು ಜಿಲ್ಲಾಧಿಕಾರಿಗಳು, ದಾವಣಗೆರೆ ಖಾತೆಗೆ ಆರ್.ಟಿ.ಜಿ.ಎಸ್ ಮುಖಾಂತರ ರವಾನಿಸಲಾಗಿತ್ತು. ಅದರಂತೆ ಜಿಲ್ಲಾಧಿಕಾರಿಗಳು ಜಮೀನು ಖರೀದಿಗೆ ಆಯುಕ್ತರು, ದಾವಣಗೆರೆ ಮಹಾನಗರಪಾಲಿಕೆ ಅವರಿಗೆ ದಿನಾಂಕ : 15.07.2022 ಅನುಮೋದನೆ ನೀಡಿದ್ದು, ಅದರಂತೆ ರೈತರುಗಳಿಗೆ ಚೆಕ್ ವಿತರಣೆಯನ್ನು ಮಾಡಿ ಜಮೀನು ಖರೀದಿಯನ್ನು ಮಾಡಲಾಗಿದೆ.
ಮೊದಲನೇ ಹಂತದಲ್ಲಿ 26.05.04 ಎಕರೆ ಜಮೀನಿಗೆ ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಬಡಾವಣಿ ನಕ್ಷೆ ನೀಡಲಾಗಿದ್ದು, ಅದರಂತೆ ಒಟ್ಟು 1024 ( 20 + 30 ಅಳತೆಯ ) ನಿವೇಶನಗಳನ್ನು ಗುರುತಿಸಲಾಗಿರುತ್ತದೆ. ದಿನಾಂಕ: 02.01.2023 ರಂದು ನಡೆದ ಉತ್ತರ ನಗರ ಆಶ್ರಯ ಸಮಿತಿ ಸಭೆಯಲ್ಲಿ 987 ಫಲಾನುಭವಿಗಳನ್ನು ವಸತಿ ಯೋಜನೆಯ ಷರತ್ತುಗಳ ನಿಯಮಾನುಸಾರ ಆಯ್ಕೆ ಮಾಡಿ ನಿಗಮಕ್ಕೆ ನಿವೇಶನ ರಹಿತರೆಂದು ಗುರುತಿಸಿ ಕಳುಹಿಸಿಕೊಡಲಾಗಿತ್ತು.
ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ , ಪ್ರಸ್ತಾವನೆಯನ್ನು ಕಳುಹಿಸಿ ಕೊಡಲಾಗಿದ್ದು, ದಿನಾಂಕ : 23.03.2023 ರಂದು ನಿಗಮದಿಂದ ಒಟ್ಟು 966 ಹಕ್ಕುಪತ್ರಗಳು ಬಂದಿವೆ. ಅದರಂತೆ ಜಿಲ್ಲಾಧಿಕಾರಿಗಳು ಹಕ್ಕುಪತ್ರಗಳಿಗೆ ಸಹಿ ಮಾಡಲು ಸಕ್ಷಮ ಅಧಿಕಾರಿಯಾದ ಆಯುಕ್ತರು, ದಾ.ಪಾ.ಪಾ ಇವರಿಗೆ ನೀಡಲಾಗಿದೆ.
ಆಯುಕ್ತರು ಸದರಿ ಸಮಯದಲ್ಲಿ ಸಾರ್ವತ್ರಿಕ ಚುನಾವಣೆ -2023 ಇದ್ದು , ಹಕ್ಕುಪತ್ರ ಸಹಿ ಮಾಡಲು ಉಪ ಆಯುಕ್ತರು (ಕಂದಾಯ ) ಇವರಿಗೆ ಅಧಿಕಾರ ನೀಡಿದ್ದರು. ಅದರಂತೆ ಉಪ ಆಯುಕ್ತರು ದಿನಾಂಕ : 28.03.2023 ಎಸ್.ಲಕ್ಷ್ಮೀ ) ಇವರು ಹಕ್ಕುಪತ್ರಗಳಿಗೆ ಸಹಿ ಮಾಡಿದ್ದಾರೆ.
29.03.2023 ರಂದು ಸಾರ್ವತ್ರಿಕ ಚುನಾವಣೆ -2023 ರ ದಿನಾಂಕ ಘೋಷಣೆಯಾಯಿತು. ಉತ್ತರ ವಿಧಾನ ಸಭಾ ಕ್ಷೇತ್ರದ ಹಕ್ಕುಪತ್ರಗಳಿಗೆ ಯಾವುದೇ ಲೋಕಾಯುಕ್ತ ವಿಚಾರಣೆಗಳು ಇರುವುದಿಲ್ಲ. ಲೋಕಾಯುಕ್ತ ವಿಚಾರಣೆ ಇದ್ದದ್ದು ಈ ಹಿಂದಿನ ಆಯುಕ್ತರಾದ ವಿಶ್ವನಾಥ ಪಿ ಮುದಜ್ಜಿ ವಿರುದ್ಧ.
ಮಲ್ಲೇಶ್ ಎಂಬುವವರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ನಗರ ಆಶ್ರಯ ಶಾಖೆಯಿಂದ ನೀಡಿದ ನಿವೇಶನ ಮಂಜೂರಾತಿ ಪತ್ರಗಳ ವಿರುದ್ಧ. ಅದು ದಕ್ಷಿಣ ವಿಧಾನ ಸಭಾ ಕ್ಷೇತ್ರಕ್ಕೆ ಬರುತ್ತದೆ.
ಬಿಜೆಪಿ ಆರೋಪವೇನು…?
ಲೋಕಾಯುಕ್ತ ವಿಚಾರಣೆ ಇದ್ದರೂ ಸಹ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಹೆಗಡೆ ನಗರದ ಫಲಾನುಭವಿಗಳಿಗೆ ಒಟ್ಟು 246 ಹಕ್ಕುಪತ್ರಗಳನ್ನು ಹಂಚಿಕೆ ಮಾಡಲು ಇಂದು ಆಯುಕ್ತರು ಆದೇಶ ನೀಡಿದ್ದಾರೆ. ಒಟ್ಟಿನಲ್ಲಿ ಉತ್ತರ ಕ್ಷೇತ್ರದಲ್ಲಿನ ಬಡವರ ಬಗ್ಗೆ ನಿರ್ಲಕ್ಷ್ಯ ಹಾಗೂ ತಾರತಮ್ಯ ಮಾಡಲಾಗುತ್ತಿದೆ. ಇದು ಸಹಿಸುವ ವಿಷಯವೇ ಅಲ್ಲ ಎಂದು ಪ್ರಸನ್ನಕುಮಾರ್ ತಿಳಿಸಿದರು.
ಅಂತಿಮವಾಗಿ ಜಿಲ್ಲಾಧಿಕಾರಿ ಅವರು ಆದೇಶ ಮಾಡಿದರೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಆಯುಕ್ತರು ಹೇಳಿದ ಕಾರಣ ಪ್ರತಿಭಟನೆ ಹಿಂಪಡೆಯಲಾಯಿತು. ಆದಷ್ಟು ಬೇಗ ಪತ್ರ ನೀಡದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಪ್ರತಿಭಟನೆ ವೇಳೆ, ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್. ಟಿ. ವೀರೇಶ್, ಉಪಮೇಯರ್ ಯಶೋಧಾ, ಸದಸ್ಯರಾದ ಶಿವಾನಂದ್, ಕೆ. ಎಂ. ವೀರೇಶ್, ಸುರೇಶ್, ವೀಣಾ ನಂಜಪ್ಪ ಸೇರಿದಂತೆ ಹಲವರು ಹಾಜರಿದ್ದರು.