SUDDIKSHANA KANNADA NEWS/ DAVANAGERE/ DATE:13-11-2023
ದಾವಣಗೆರೆ: ಭದ್ರಾ ಜಲಾಶಯದಿಂದ ಹೊರ ಬಿಡುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಉತ್ತಮ ಮಳೆಯಾದ ಕಾರಣ ಭದ್ರಾ ಜಲಾಶಯದಿಂದ ಹೊರ ಹರಿವು ನಿಲ್ಲಿಸಬೇಕು ಎಂದು ರೈತರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಭದ್ರಾ ಜಲಾಶಯದ ಆಡಳಿತ ಅಧಿಕಾರಿಗಳು ನೀರು ಸ್ಥಗಿತಗೊಳಿಸಿದ್ದಾರೆ.
ಭದ್ರಾಜಲಾಶಯಕ್ಕೆ ಬರುತ್ತಿರುವ ಒಳಹರಿವು 1005 ಕ್ಯೂಸೆಕ್ ಇದೆ. ಭದ್ರಾ ಜಲಾನಯನ ಪ್ರದೇಶದಲ್ಲಿ ಸಾಧಾರಣ ಮಳೆಯಾಗಿತ್ತು. ಈ ಕಾರಣಕ್ಕೆ ಜಲಾಶಯಕ್ಕೆ ಬರುತ್ತಿರುವ ನೀರಿನ ಪ್ರಮಾಣ ಭಾನುವಾರದಷ್ಟೇ ಇದೆ.
ಭಾನುವಾರದಿಂದ ಜಲಾಶಯದಿಂದ ಹೊರ ಹರಿವು ನಿಲ್ಲಿಸಲಾಗಿದೆ. ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಹರಿಸಲಾಗುತಿತ್ತು. ಮಳೆಯಾದ ಕಾರಣ ನೀರು ಬಂದ್ ಮಾಡಲಾಗಿದೆ. ಇದರಿಂದಾಗಿ ಭದ್ರಾ ಜಲಾಶಯದ ನೀರಿನ
ಮಟ್ಟ ತುಸು ಏರಿಕೆಯಾಗಿದೆ.
ಸೋಮವಾರ ಬೆಳಿಗ್ಗೆ ಆರು ಗಂಟೆಯ ಹೊತ್ತಿಗೆ ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ 1005 ಕ್ಯೂಸೆಕ್ ಇದ್ದರೆ, ಹೊರ ಹರಿವು ಇಲ್ಲ. ಎಡದಂಡೆ ಹಾಗೂ ಬಲದಂಡೆ ನಾಲೆಯಲ್ಲಿ ನೀರು ನಿಲ್ಲಿಸಲಾಗಿದೆ. ಇದರಿಂದಾಗಿ ಜಲಾಶಯದ ನೀರಿನ ಮಟ್ಟ 152.9 ಅಡಿ ಇದೆ.
ಭದ್ರಾ ಜಲಾಶಯದ ಸಂಗ್ರಹ ಸಾಮರ್ಥ್ಯ 71.535 ಟಿಎಂಸಿ ಇದೆ. ಈಗಿನ ಮಟ್ಟಿಗೆ ಜಲಾಶಯದ ಸಂಗ್ರಹ 36.533 ಟಿಎಂಸಿ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 30 ಅಡಿಗೂ ಕಡಿಮೆ ನೀರಿನ ಸಂಗ್ರಹ ಇದೆ. ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 183.1 ಅಡಿ ಇತ್ತು. ಆದ್ರೆ, ಇಂದು 152.9 ಅಡಿ ಇದೆ.
ದಾವಣಗೆರೆ ಜಿಲ್ಲೆಯ ಶೇಕಡಾ 70 ರಷ್ಟು ರೈತರು ಭದ್ರಾ ಜಲಾಶಯದ ನೀರು ನಂಬಿ ಬೆಳೆ ಬೆಳೆಯುತ್ತಾರೆ. ಈ ಬಾರಿ ಭತ್ತ ಬೆಳೆದ ರೈತರಿಗೆ ನೀರು ಸಿಗುತ್ತೋ ಇಲ್ಲವೋ ಎಂಬ ಆತಂಕ ಇತ್ತು. ಆದ್ರೆ, ಕಳೆದ ನಾಲ್ಕು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ನೀರು ಸಿಕ್ಕಿದೆ. ಆದ್ರೆ, ಭದ್ರಾ ಜಲಾಶಯದ ಅಧಿಕಾರಿಗಳು ಮಳೆ ನಿಂತ ಎರಡು ದಿನಗಳ ಬಳಿಕ ಡ್ಯಾಂನಿಂದ ಹೊರ ಹರಿವು ಸ್ಥಗಿತಗೊಳಿಸಿದ್ದಾರೆ. ನೂರು ದಿನಗಳ ಕಾಲ ನೀರು ಹರಿಸುವುದಾಗಿ ಹೇಳಿದ್ದ ಸರ್ಕಾರವು ಇನ್ನು ಹತ್ತು ದಿನಗಳ ಕಾಲ ನೀರು ಹರಿಸುವಿಕೆಯ ಅವಧಿ ಹೆಚ್ಚಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಸದ್ಯಕ್ಕೆ ನೀರಿನ ಅಗತ್ಯವಿಲ್ಲ. ಭತ್ತಕ್ಕೆ ಮತ್ತೆ ನೀರು ಬೇಕಾಗುತ್ತದೆ. ಆಗ ನೀರು ಹರಿಸಿದರೆ ಭತ್ತ ಬೆಳೆದ ಬೆಳೆಗಾರರು ಸ್ವಲ್ಪ ಮಟ್ಟಿಗೆ ಉಸಿರಾಡಬಹುದು. ಗಾಳಿ, ಮಳೆಯಿಂದಾಗಿ ಮಲೇಬೆನ್ನೂರು, ಹೊನ್ನಾಳಿ ಸೇರಿದಂತೆ ಕೆಲವೆಡೆ ಭತ್ತವೂ ಹಾಳಾಗಿದೆ. ಈ ಕಾರಣದಿಂದಾಗಿ ಭದ್ರಾ ಜಲಾಶಯದಿಂದ ನೀರು ಹರಿಸುವಿಕೆಯ ಅವಧಿ ವಿಸ್ತರಣೆ ಮಾಡಬೇಕು. ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಬೇಕು ಎಂದು ರೈತ ಮುಖಂಡರು, ರೈತರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.