SUDDIKSHANA KANNADA NEWS/ DAVANAGERE/ DATE:10-11-2023
ದಾವಣಗೆರೆ: ಮುಂದಿನ ಬೆಳಗಾವಿ ಅಧಿವೇಶನದೊಳಗೆ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಬೇಕು. ಕೇಂದ್ರದ ಒಬಿಸಿ ಪಟ್ಟಿಗೆ ಲಿಂಗಾಯತ ಸಮಾಜದ ಉಪಪಂಗಡಗಳನ್ನು ಸೇರ್ಪಡೆ ಮಾಡಬೇಕು. ಅಧಿವೇಶನದೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಅಧಿವೇಶನದೊಳಗೆ ಇಷ್ಟಲಿಂಗ ಪೂಜೆ ನೆರವೇರಿಸಿದರೆ ಅಚ್ಚರಿ ಪಡಬೇಕಿಲ್ಲ ಎಂದು ಕೂಡಲಸಂಗಮದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.
ನಗರದ ಹೊರವಲಯದ ಚಿಂದೋಡಿ ಲೀಲಾ ಸಮುದಾಯ ಭವನದ ಸಮೀಪದ ಶ್ರೀ ವಾಹನ ಗಣಪತಿಗೆ ಮಾಲಾರ್ಪಣೆ ಮಾಡಿ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಕಾಲ್ನಡಿಗೆ ಮೂಲಕ ತೆರಳಿ ಹೆದ್ದಾರಿಯಲ್ಲಿಯೇ ಇಷ್ಟಲಿಂಗ ಪೂಜೆ ನೆರವೇರಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಶ್ರೀಗಳು, ಪಂಚಮಸಾಲಿ ಸಮಾಜ ಎಂದಿಗೂ ಕೈ ಕಟ್ಟಿ ಕೂರುವುದಿಲ್ಲ, ಬೇಡಿಕೆ ಈಡೇರುವವರೆಗೂ ಯಾವುದೇ ಕಾರಣಕ್ಕೂ ವಿರಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಶ್ರೀಗಳು, ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷವು ನಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿತ್ತು. ಈಗ ಅಧಿಕಾರಕ್ಕೆ ಬಂದಿದೆ. ನಮಗೆ ಮೀಸಲಾತಿ ನೀಡದೇ ಹೋದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ದಾವಣಗೆರೆಯಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿದ್ದೇವೆ. ಈಗಾಗಲೇ ಆರು ಜಿಲ್ಲೆಗಳಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಇಷ್ಟಲಿಂಗ ಪೂಜೆ ಮಾಡಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ. ಲಿಂಗಾಯತ ಸಮಾಜ ಶಾಂತಿಪ್ರಿಯ. ಬಸವಣ್ಣನವರ ಪರಂಪರೆಯವರಾಗಿದ್ದು, ಶಾಂತಿಯಿಂದ ಕ್ರಾಂತಿ ಮಾಡುವ ಸಮುದಾಯವೂ ಹೌದು. ನಮ್ಮ ಸಹನೆ ಕೆಣಕಬೇಡಿ. ಕೇವಲ ಭರವಸೆ ಮಾತನಾಡಿ ಆಮೇಲೆ ಮೋಸ ಮಾಡಲಾಗುತ್ತಿದೆ. ಈ ಹಿಂದೆ ಬಿಜೆಪಿ ಸರ್ಕಾರವು 2 ಎ ಮೀಸಲಾತಿ ನೀಡುವುದಾಗಿ ಭರವಸೆ ನೀಡಿ ಕೊನೆ ಕ್ಷಣದಲ್ಲಿ 2 ಡಿ ಮೀಸಲಾತಿ ಕೊಟ್ಟು ಗೊಂದಲ ಹುಟ್ಟು ಹಾಕಿತು. ಯಾವುದೇ ಕಾರಣಕ್ಕೂ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ಶ್ರೀಗಳು ಘೋಷಿಸಿದರು.
ಈ ದೇಶದಲ್ಲಿ ಭಗವಂತನನ್ನು ಪೂಜೆ ಮಾಡಿ ಯಾರು ಹೋರಾಟ ಮಾಡಿಲ್ಲ. ಎಲ್ಲರೂ ಕೈಯಲ್ಲಿ ಕಲ್ಲು, ಕೋಲು ಹಿಡಿದು ಹೋರಾಟ ಮಾಡಿದ್ದಾರೆ. ಆದರೆ ನಾವು ಈ ರೀತಿಯ ಹೋರಾಟಕ್ಕೆ ಇಳಿದಿಲ್ಲ. ನಮಗೆ ಸಿಗಬೇಕಿರುವ ನ್ಯಾಯ ಕೇಳುತ್ತಿದ್ದೇವೆ.
ಇದರಲ್ಲಿ ಯಾರ ಸ್ವಾರ್ಥ ಇಲ್ಲ. ಪಂಚಮಸಾಲಿ ಸಮಾಜ ದುಡಿದು ತಿನ್ನುವ ಸಮಾಜ. ಹೆಚ್ಚಿನವರು ರೈತರೇ ಇದ್ದಾರೆ. ಮಾತ್ರವಲ್ಲ, ಸಮಾಜದ ವಿದ್ಯಾರ್ಥಿಗಳೂ ಶೈಕ್ಷಣಿಕವಾಗಿ ಮುಂದೆ ಬರಬೇಕು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮುಂದೆ ಬರಬೇಕಾದರೆ 2ಎ ಮೀಸಲಾತಿ ನೀಡಬೇಕು. ಸಿಎಂ ಸಿದ್ದರಾಮಯ್ಯನವರು ಬೇಡಿಕೆ ಈಡೇರಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಉತ್ತಮ ಪ್ರತಿಕ್ರಿಯೆ: ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ಹೋರಾಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರನೇ ಹಂತದ ಹೋರಾಟ ಇದಾಗಿದ್ದು, ಹೋರಾಟವು ಮುಂಬರುವ ದಿನಗಳಲ್ಲಿ ಉಗ್ರ ಸ್ವರೂಪ ಪಡೆಯಲಿದೆ ಎಂದು ಪ್ರತಿಭಟನೆಯಲ್ಲಿ
ಪಾಲ್ಗೊಂಡಿದ್ದ ಸಮಾಜದ ಮುಖಂಡರು ಎಚ್ಚರಿಕೆ ನೀಡಿದರು.
ಸಚಿವ ಖಂಡ್ರೆ ಭರವಸೆ:
ಇನ್ನು ಪಂಚಮಸಾಲಿ ಸಮಾಜದ ಮುಖಂಡರು ಹಾಗೂ ಶ್ರೀಗಳ ಪ್ರತಿಭಟನೆಗೆ ಸ್ಪಂದಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಬೇಡಿಕೆ ಈಡೇರಿಸುವ ಭರವಸೆ ನೀಡಿದರು.
2ಎ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ಸಮಾಜದ ಹಕ್ಕೊತ್ತಾಯ ಪತ್ರ ಸ್ವೀಕರಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ವರಿಷ್ಠರ ಗಮನಕ್ಕೆ ತರುವ ಜೊತೆಗೆ ಸಚಿವ ಸಂಪುಟ ಸಭೆಯಲ್ಲಿಯೂ ಈ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸಮಾಜದ ರಾಜ್ಯಾಧ್ಯಕ್ಷ ಅಜಯ್ ಕುಮಾರ್, ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್, ಅಭಿ ಕಾಟನ್ ಮಾಲೀಕರಾದ ಬಕ್ಕೇಶ್, ಹುಚ್ಚಪ್ಪ ಮಾಸ್ತರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.