SUDDIKSHANA KANNADA NEWS/ DAVANAGERE/ DATE:09-11-2023
ದಾವಣಗೆರೆ: 2024ರ ಲೋಕಸಭೆ ಚುನಾವಣೆಗೆ ದಾವಣಗೆರೆಯಿಂದ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವುದಾಗಿ ಬಿಜೆಪಿ ಮುಖಂಡ ಹಾಗೂ ಎ. ಕೆ. ಫೌಂಡೇಶನ್ ನ ಸಂಸ್ಥಾಪಕರಾದ ಕೆ. ಬಿ. ಕೊಟ್ರೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಟಿಕೆಟ್ ಸಿಗಬಹುದು ಎಂಬ ವಿಶ್ವಾಸ ಇದೆ. ಕಳೆದ 25 ವರ್ಷಗಳಿಂದಲೂ ನಾನು ಜಿಲ್ಲೆಯಲ್ಲಿ ಚಿರಪರಿಚಿತನಿದ್ದೇನೆ. ಮತ್ತೆ ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಆಗಬೇಕು ಎಂಬ ಆಸೆ ನನ್ನದು. ಪಕ್ಷದಲ್ಲಿ ಹಲವರು ಟಿಕೆಟ್ ಆಕಾಂಕ್ಷಿಗಳಿರಬಹುದು. ನಾನು ಸಹ ರಾಜ್ಯ ಹಾಗೂ ಕೇಂದ್ರ ನಾಯಕರ ಸಂಪರ್ಕದಲ್ಲಿದ್ದೇನೆ. ಚುನಾವಣೆಗೆ ಸ್ಪರ್ಧಿಸಲು ತಯಾರಿ ಮಾಡಿಕೊಂಡಿದ್ದೇನೆ. ನನ್ನದೇ ಆದ ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಟಿಕೆಟ್ ಸಿಗದಿದ್ದರೆ ಪಕ್ಷ ವಿರೋಧಿ ಚಟುವಟಿಕೆ ನಡೆಸುವುದಿಲ್ಲ ಎಂದು ಹೇಳಿದರು.
ನವದೆಹಲಿಯಲ್ಲಿರುವ ಏಮ್ಸ್ ಮಾದರಿಯಲ್ಲಿಯೇ ಜಿಲ್ಲೆಯಲ್ಲಿ ಸರ್ವರಿಗೂ ಉತ್ತಮ ಚಿಕಿತ್ಸೆ ಕಲ್ಪಿಸಬೇಕು ಎಂಬ ಆಸೆ ನನ್ನದು. ರೈತರಿಗಾಗಿ ಸಮಗ್ರ ನೀರಾವರಿ ಯೋಜನೆ ಅನುಷ್ಠಾನ ಅಚ್ಚುಕಟ್ಟಾಗಿ ರೂಪಿಸಬೇಕೆಂಬ ಯೋಜನೆ ಹಾಕಿಕೊಂಡಿದ್ದೇನೆ. ಈ ಕನಸು ಸಾಕಾರಗೊಳ್ಳಬೇಕಾದರೆ ನನಗೆ ಟಿಕೆಟ್ ಸಿಗಬೇಕು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದರು.
ಬಿಜೆಪಿ ಕಾರ್ಯಕರ್ತನಾಗಿ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದೇನೆ. ಅದರ ಜೊತೆ ಆರ್ ಎಸ್ ಎಸ್ ನಲ್ಲಿಯೂ ಗುರುತಿಸಿಕೊಂಡಿದ್ದೇನೆ. ಸಿದ್ದಾಂತ ಹಾಗೂ ಬದ್ದತೆಯಿಂದ ದುಡಿಯುತ್ತಿದ್ದೇನೆ. ಚುನಾವಣೆಯಲ್ಲಿ ಹಲವರು ಆಕಾಂಕ್ಷಿತರು ಇರುತ್ತಾರೆ. ಅದೇ ರೀತಿ ಎಂ.ಪಿ ರೇಣುಕಾಚಾರ್ಯ ಅವರು ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಅವರು ಹಿರಿಯರು. ಸಂಸದ ಜಿ.ಎಂ ಸಿದ್ದೇಶ್ವರ ಅವರ ಪುತ್ರ ಅನಿತ್ ಕೂಡ ಆಕಾಂಕ್ಷಿಯಾಗಿದ್ದಾರೆ. ಎಲ್ಲರೂ ಕೂಡ ವ್ಯಕ್ತಿಗತವಾಗಿ ಒಳ್ಳೆಯವರೇ. ಪಕ್ಷ ಯಾರಿಗೇ ಟಿಕೆಟ್ ನೀಡಲಿ. ನಮ್ಮ ಕನಸು ಬಿಜೆಪಿ ಗೆಲ್ಲಿಸುವುದು.ಈ ವಿಚಾರದಲ್ಲಿ ಬೇಧಬಾವ ಇಲ್ಲ ಆದರೆ ನನಗೆ ಟಿಕೆಟ್ ನೀಡಿದರೆ ನನ್ನ ಕನಸುಗಳಿದ್ದು, ಅದನ್ನು ಈಡೇರಿಸುವುದು ನನ್ನ ಗುರಿ.ನಾನು ಅಧಿಕಾರದಲ್ಲಿದ್ದ ವೇಳೆ ಹಲವಾರು ಜನಪರ ಕೆಲಸ ಮಾಡಿದ್ದೇನೆ. ಅದೇ ಕೆಲಸಗಳು ಇಂದು ನನ್ನ ರಾಜಕೀಯ ಜೀವನಕ್ಕೆ ಪ್ರೇರೇಣೆಯಾಗಿದೆ ಎಂದರು.
ಸರ್ಕಾರಿ ಶಾಲೆ ಮಕ್ಕಳು ವಿದ್ಯಾವಂತರಾಗಿ ಉನ್ನತ ಸ್ಥಾನಕ್ಕೇರುತ್ತಾರೋ ಆಗ ಮಾತ್ರ ಭಾರತದ ಅಭಿವೃದ್ಧಿ, ಬಡತನ ನಿರ್ಮೂಲನೆ ಸಾಧ್ಯ.ದಾವಣಗೆರೆ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ನನಗೆ ಟಿಕೆಟ್ ಸಿಕ್ಕರೆ ದೆಹಲಿಯ ಏಮ್ಸ್ ಮಾದರಿಯಲ್ಲಿ ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣ ಮಾಡುವುದು, ಬಡವರಿಗೂ ವೈದ್ಯಕೀಯ ಸೌಲಭ್ಯ ಸಿಗಬೇಕು. ಗುಡಿಕೈಗಾರಿಕೆಗೆ ಮಾರುಕಟ್ಟೆ ವ್ಯವಸ್ಥೆ, ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಜೊತೆಗೆ ಸಬಲೀಕರಣಕ್ಕೆ ಒತ್ತು ನೀಡುವುದು ನನ್ನ ಮುಖ್ಯಧ್ಯೇಯ ಎಂದರು.
ಲೋಕಸಭಾ ಚುನಾವಣೆ ಬಂದಾಗ ಮೊದಲು ಬರುವುದು ದೇಶದ ಅಭಿವೃದ್ಧಿ, ಸಶಕ್ತಿ ಮತ್ತು ಸದೃಢ ಭಾರತ ನಿರ್ಮಾಣ .ಅಂತಹ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿಯವರು. ಜನ ಕಾಂಗ್ರೆಸ್ ಪರ ಒಲವು ತೋರುವುದಿಲ್ಲ. ಜನರಿಗೆ ಬೇಕಿರುವುದು ಸದೃಢ ದೇಶ. ಅದು ಮೋದಿ ಅವರಿಂದ ಮಾತ್ರ ಸಾಧ್ಯ. ಭಾರತಕ್ಕಾಗಿ ಜನ ಮತ್ತೊಮ್ಮೆ ಬಿಜೆಪಿ ಬೆಂಬಲಿಸಲಿದ್ದಾರೆ. ರಾಜ್ಯ ಚುನಾವಣೆಯೇ ಬೇರೆ, ಕೇಂದ್ರ ಚುನಾವಣೆಯೇ ಬೇರೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದು ಮೋದಿ ಅವರು. ಈ ಬಾರಿಯೂ ಅವರನ್ನೇ ಆಯ್ಕೆ ಮಾಡಬೇಕಿದೆ. ಕೇಂದ್ರದ ಅನೇಕ ಯೋಜನೆಗಳೇ ನಮಗೆ ಅಜೆಂಡಾ. ಕಾಂಗ್ರೆಸ್ ಆಕಾಂಕ್ಷಿಯಾಗಿರುವವರೇ ಕೇಂದ್ರದ ಯೋಜನೆಗಳನ್ನು ತಳಮಟ್ಟದಲ್ಲಿ ಮುಟ್ಟಿಸುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ಅಂದರೆ ಇದರಲ್ಲೇ ತಿಳಿದುಕೊಳ್ಳಬಹುದು ನಮ್ಮ ಕೇಂದ್ರದ ಯೋಜನೆಗಳ ಜನಪ್ರಿಯತೆ ಎಷ್ಟಿದೆ ಎಂಬುದನ್ನು.ಒಬ್ಬ ಅಭ್ಯರ್ಥಿಯಾಗಬೇಕಾದ ವ್ಯಕ್ತಿಯೇ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾತನಾಡುತ್ತಾರೆ ಎಂದರೆ ಆ ಯೋಜನೆಗಳು ಸರಿ ಇದೆ ಎಂದೇ ಅರ್ಥ ಎಂದರು.
ದೊಡ್ಡಕೈಗಾರಿಕೆಗಳನ್ನು ದಾವಣಗೆರೆಗೆ ತರಬೇಕು.ಕೈಗಾರಿಕಾ ಕಾರಿಡಾರ್ ಮಾಡಬೇಕು. ಸ್ತ್ರೀಶಕ್ತಿ ಗುಂಪುಗಳನ್ನು ಸಶಕ್ತಗೊಳಿಸಿ ಅವರಿಗೆ ಕಿರುಸಾಲ ನೀಡುವ ಯೋಜನೆ ಬಲಪಡಿಸಬೇಕಿದೆ.ಸಮಗ್ರ ನೀರಾವರಿ ಕೆರೆ ಅಭಿವೃದ್ಧಿ ಯಾದರೆ ಕುಡಿಯುವ ನೀರು ಹಾಗೂ ನೀರಾವರಿಗೂ ನೆರವಾಗಬೇಕು. ತುಂಗಭದ್ರಾನದಿಗೆ ಮಾಲಿನ್ಯ ಹೆಚ್ಚಾಗುತ್ತಿದೆ. ಅದಕ್ಕಾಗಿ ಶುದ್ದೀಕರಣ ಮಾಡಬೇಕು. ತುಂಗಭದ್ರಾ ನದಿಯ ಎಡದಂಡೆ ಹಾಗೂ ಬಲದಂಡೆಗಳಲ್ಲಿ ಕ್ರಿಮಿನಾಶಕಗಳ ಬಳಕೆ ಹೆಚ್ಚಾಗುತ್ತಿದ್ದು, ಮಾಲಿನ್ಯ ತಡೆಗಟ್ಟಬೇಕು ಹಾಗೂ ರೈತರಿಗೂ ನೆರವಾಗಬೇಕು ಎಂಬ ಉದ್ದೇಶ ನನ್ನದು. ಅದಕ್ಕಾಗಿ ಹಸಿರುಗೊಬ್ಬರವನ್ನು ಆ ಭಾಗದ ರೈತರಿಗೆ ಉಚಿತವಾಗಿ ನೀಡಬೇಕು. ಮಾಲಿನ್ಯ ತಡೆಗಟ್ಟಲು ನನ್ನ ಮೊದಲ ಆದ್ಯತೆ, ನನ್ನ ಗುರಿ ಎಂದು ತಿಳಿಸಿದರು.