ದಾವಣಗೆರೆ: ಜಿಲ್ಲೆಯಾದ್ಯಂತ ಗಣೇಶೋತ್ಸವದ ಸಂದರ್ಭದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮೆರವಣಿಗೆಗಳಲ್ಲಿ ಹೆಚ್ಚಿನ ಶಬ್ದ ಹೊರಸೂಸುವ DJ ಸಿಸ್ಟಂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಆದೇಶ ಹೊರಡಿಸಿದ್ದಾರೆ.
ಸೆಪ್ಟೆಂಬರ್ 14 ರಿಂದ ಗಣೇಶ ಮೂರ್ತಿಗಳ ವಿಸರ್ಜನೆ ಪೂರ್ಣಗೊಳ್ಳುವವರೆಗೆ ಈ ಆದೇಶ ಜಾರಿಯಲ್ಲಿರಲಿದೆ.
ನಿಷೇಧಕ್ಕೆ ಮುಖ್ಯ ಕಾರಣಗಳು:
ಆರೋಗ್ಯ ಕಾಳಜಿ: DJ ಸಿಸ್ಟಂನಿಂದ ಹೊರಹೊಮ್ಮುವ ಕರ್ಕಶ ಶಬ್ದದಿಂದ ಸಾರ್ವಜನಿಕರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ನವಜಾತ ಶಿಶುಗಳು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ತೀವ್ರ ತೊಂದರೆಯಾಗಲಿದೆ.
ಕಾನೂನು ಚೌಕಟ್ಟು: Noise Pollution (Regulation & Control) Rules, 2000 ನಿಯಮಗಳ ಅನುಸಾರ ಶಬ್ದ ಮಾಲಿನ್ಯ ನಿಯಂತ್ರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ವಿಶೇಷ ಸೂಚನೆಗಳು:
ಹೊರ ಜಿಲ್ಲೆಯ DJ ಗೆ ಬ್ರೇಕ್: ಇತರೆ ಜಿಲ್ಲೆಗಳಿಂದ DJ ಸಿಸ್ಟಂ ತಂದು ದಾವಣಗೆರೆಯಲ್ಲಿ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಸ್ಪೀಕರ್ ನಿಯಮಗಳು: ವೂಫರ್ ಮತ್ತು ಸಬ್-ವೂಫರ್ಗಳನ್ನು ನಿಗದಿತ ಮಾನದಂಡದಂತೆ ಬಳಸಬಹುದು. ಆದರೆ ಹೆಚ್ಚಿನ ಶಬ್ದ ಉಂಟುಮಾಡುವ ‘ಪ್ರೆಶರ್ ಮೆಜರ್ಮೆಂಟ್’ ಹಾಗೂ ಪ್ರಬಲ ಧ್ವನಿವರ್ಧಕ ಉಪಕರಣಗಳನ್ನು ಬಳಸುವಂತಿಲ್ಲ.
ಪೊಲೀಸ್ ಅನುಮತಿ ಕಡ್ಡಾಯ: ಶಬ್ದದ ಪ್ರಮಾಣವನ್ನು ಪರಿಶೀಲಿಸಿದ ನಂತರವೇ ಪೊಲೀಸ್ ಇಲಾಖೆಯು ಧ್ವನಿವರ್ಧಕಗಳ ಬಳಕೆಗೆ ಅನುಮತಿ ನೀಡಲಿದೆ.
ನಿಯಮಗಳನ್ನು ಮೀರಿ DJ ಬಳಸುವ ಆಯೋಜಕರು ಹಾಗೂ ಮಾಲೀಕರ ವಿರುದ್ಧ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಿದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.





Leave a comment