ಲಕ್ನೋ: ಸತ್ತು ಹೋಗಿದ್ದಾಳೆಂದು ಭಾವಿಸಿ, ಆಕೆಯ ಶವಕ್ಕೆ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರವನ್ನೂ ನೆರವೇರಿಸಿ, ಪತಿ ಕುಟುಂಬದ ವಿರುದ್ಧ ಕೊಲೆ ಮತ್ತು ವರದಕ್ಷಣೆ ಪ್ರಕರಣ ದಾಖಲಿಸಿದ್ದ ಕುಟುಂಬಕ್ಕೆ ಮತ್ತು ಪೊಲೀಸರಿಗೆ ಈಗ ಅಚ್ಚರಿಯೋ ಅಚ್ಚರಿ! ಏಕೆಂದರೆ, 2024ರ ಮೇ ತಿಂಗಳಿನಲ್ಲಿ ನಾಪತ್ತೆಯಾಗಿದ್ದ ಯುವತಿಯೊಬ್ಬಳು ಬರೋಬ್ಬರಿ 27 ತಿಂಗಳ ನಂತರ ಸಶರೀರವಾಗಿ ಜೀವಂತವಾಗಿ ತನ್ನ ಮನೆಗೆ ಹಿಂತಿರುಗಿದ್ದಾಳೆ.
ಪ್ರಕರಣದ ಹಿನ್ನೆಲೆ ಮತ್ತು ಘಟನಾವಳಿಗಳು
ಮೇ 2, 2024 – ನಾಪತ್ತೆ: ಬಿ ಕೆ ಟಿ ವ್ಯಾಪ್ತಿಯ ನವಿಕೋಟ್ ನಂದನಾ ಗ್ರಾಮದ ನಿವಾಸಿ ಶಿವಾನಿ (28) ಎಂಬ ಯುವತಿ ಔಷಧ ತರಲೆಂದು ಮನೆಯಿಂದ ಹೊರಟು ಅನಿರೀಕ್ಷಿತವಾಗಿ ನಾಪತ್ತೆಯಾಗಿದ್ದಳು.
ಜುಲೈ 16, 2024 – ಕೊಳೆತ ಶವ ಪತ್ತೆ: ಸೈರ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಐಐಎಂ ರಸ್ತೆ ಹಿಂಭಾಗದ ಕಾಲುವೆಯಲ್ಲಿ ಯುವತಿಯೊಬ್ಬಳ ಕೊಳೆತ ಶವ ಪತ್ತೆಯಾಗಿತ್ತು.
ಕೊಲೆ ಕೇಸ್ ದಾಖಲು: ಶಿವಾನಿಯ ಪೋಷಕರು ಆಕೆಯ ಪತಿ ಆನಂದ್ ಸಿಂಗ್ ಹಾಗೂ ಆತನ ಕುಟುಂಬಸ್ಥರು ವರದಕ್ಷಣೆಗಾಗಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಪೊಲೀಸರು ವರದಕ್ಷಣೆ ಕಿರುಕುಳ, ಕೊಲೆ ಮತ್ತು ಅಪಹರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಕಾಲುವೆಯಲ್ಲಿ ಸಿಕ್ಕ ಶವ ಸಂಪೂರ್ಣವಾಗಿ ಕೊಳೆತು ಹೋಗಿದ್ದರಿಂದ ಪೊಲೀಸರು ಶವದ ಮಾದರಿಯನ್ನು ಡಿಎನ್ಎ (DNA) ಪರೀಕ್ಷೆಗೆ ಕಳುಹಿಸಿದ್ದರು. ಫೊರೆನ್ಸಿಕ್ ವರದಿ ಬಂದಾಗ, ಆ ಶವದ ಡಿಎನ್ಎ ಶಿವಾನಿಯ ಪೋಷಕರ ಡಿಎನ್ಎ ಜೊತೆ ತಾಳೆಯಾಗಲಿಲ್ಲ. ಇದರಿಂದಾಗಿ ಆ ಶವ ಶಿವಾನಿಯದ್ದಲ್ಲ ಎಂಬುದು ದೃಢಪಟ್ಟು, ಪ್ರಕರಣದಿಂದ ವರದಕ್ಷಣೆ ಸಾವು ಮತ್ತು ಕೊಲೆ ಕಾಯ್ದೆಗಳನ್ನು ಪೊಲೀಸರು ಕೈಬಿಟ್ಟಿದ್ದರು.
ಕಳೆದ ಶನಿವಾರ (ಸೆಪ್ಟೆಂಬರ್ 5) ಶಿವಾನಿ ಹಠಾತ್ತಾಗಿ ತನ್ನ ತಂದೆ ಸರ್ವೇಶ್ ಕುಮಾರ್ ಸಿಂಗ್ ಜೊತೆ ಬಿ ಕೆ ಟಿ ಪೊಲೀಸ್ ಠಾಣೆಗೆ ಆಗಮಿಸಿದ್ದಾಳೆ. ಈಕೆಯನ್ನು ಜೀವಂತವಾಗಿ ಕಂಡ ಪೊಲೀಸರು ಹಾಗೂ ಕುಟುಂಬಸ್ಥರು ದಂಗಾಗಿದ್ದಾರೆ.
ಪೊಲೀಸರ ಮುಂದಿರುವ ಸಾಲು ಸಾಲು ಪ್ರಶ್ನೆಗಳು
ಶಿವಾನಿ ಜೀವಂತವಾಗಿ ಹಿಂತಿರುಗಿರುವುದರಿಂದ ಲಕ್ನೋ ಪೊಲೀಸರು ಪ್ರಕರಣದ ತನಿಖೆಯನ್ನು ಮತ್ತೆ ತೀವ್ರಗೊಳಿಸಿದ್ದಾರೆ.





Leave a comment