Home ನವದೆಹಲಿ “ಅಕ್ಕಾ ಕೇಳವ್ವಾ ನಾನೊಂದು ಕನಸ ಕಂಡೆ”: ಅಮೆರಿಕದ ನೆಲದಲ್ಲಿ ಬೆಳ್ಳಿ ಹಬ್ಬ ಆಚರಿಸಿದ ‘ಅಕ್ಕ’ ಸಂಸ್ಥೆಗೆ ತರಳಬಾಳು ಶ್ರೀಗಳ ಆಶೀರ್ವಚನ.
ನವದೆಹಲಿದಾವಣಗೆರೆಬೆಂಗಳೂರು

“ಅಕ್ಕಾ ಕೇಳವ್ವಾ ನಾನೊಂದು ಕನಸ ಕಂಡೆ”: ಅಮೆರಿಕದ ನೆಲದಲ್ಲಿ ಬೆಳ್ಳಿ ಹಬ್ಬ ಆಚರಿಸಿದ ‘ಅಕ್ಕ’ ಸಂಸ್ಥೆಗೆ ತರಳಬಾಳು ಶ್ರೀಗಳ ಆಶೀರ್ವಚನ.

Share
ತರಳಬಾಳು
Share

“ಕನ್ನಡದ ಅಕ್ಕ ಅಮೆರಿಕಾದಲ್ಲಿ ಒಂದು ವಿಶೇಷ ಅರ್ಥವನ್ನು ಪಡೆದಿದೆ. ‘ಅಕ್ಕಾ ಕೇಳವ್ವಾ, ನಾನೊಂದು ಕನಸ ಕಂಡೆ’ ಎಂದು ಅಕ್ಕಮಹಾದೇವಿಯು ಹೇಳುವಂತೆ, ಉತ್ತರ ಅಮೆರಿಕದ ಕನ್ನಡಿಗರ ಹಿರಿದಾದ ಕನಸಿನ ಸಾಕಾರ ರೂಪವಿದು!” ಎಂದು ಇಪ್ಪತ್ತೈದು ವರ್ಷಗಳ ಹಿಂದೆ ನಾವು ಬರೆದಿದ್ದೆವು. ಅಂದು ಕನಸಾಗಿ ಕಂಡಿದ್ದ ಅಕ್ಕಾ ಇಂದು ರಜತ ಮಹೋತ್ಸವವನ್ನು ಆಚರಿಸುತ್ತಿರುವುದು ಒಂದು ಸಂಘಟನೆಯ ಬೆಳವಣಿಗೆಯಷ್ಟೇ ಅಲ್ಲ, ಕನ್ನಡದ ಜಾಗತಿಕ ಪಯಣದ ಮಹತ್ವದ ಮೈಲಿಗಲ್ಲಾಗಿದೆ ಎಂದು ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಂದೇಶ ನೀಡಿದ್ದಾರೆ. 

ಅಕ್ಕಾ ಸಮ್ಮೇಳನಗಳೊಂದಿಗೆ ನಮಗೆ ಆರಂಭದಿಂದಲೂ ಆತ್ಮೀಯ ನಂಟಿದೆ. ಸಾಗರದಾಚೆ ನೆಲೆಸಿರುವ ಕನ್ನಡಿಗರೊಂದಿಗೆ ಬೆರೆತಾಗ, ದೇಶ ಬದಲಾದರೂ ದೇಸಿಯ ಸ್ಮೃತಿ ಬದಲಾಗುವುದಿಲ್ಲ; ನೆಲ ದೂರವಾದರೂ ನುಡಿಯ ಬಂಧ ದೂರವಾಗುವುದಿಲ್ಲ ಎಂಬ ಸತ್ಯ ಮನದಟ್ಟಾಗುತ್ತದೆ.

ಭೌಗೋಳಿಕ ಕರ್ನಾಟಕಕ್ಕೆ ಗಡಿಯಿದೆ; ಕನ್ನಡದ ಕರ್ನಾಟಕಕ್ಕೆ ಗಡಿಯಿಲ್ಲ. ನಕ್ಷೆಯಲ್ಲಿ ಕರ್ನಾಟಕದ ಗಡಿ ಮುಗಿದರೂ, ಕನ್ನಡಿಗನ ಹೃದಯದಲ್ಲಿ ಕನ್ನಡದ ಸೀಮೆ ನಿರಂತರವಾಗಿ ವಿಸ್ತರಿಸುತ್ತಲೇ ಇರುತ್ತದೆ. ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ; ಅದು ಒಂದು ಜನಸಮುದಾಯದ ಸ್ಮೃತಿ, ಸಂಸ್ಕೃತಿ, ಚಿಂತನೆ ಮತ್ತು ಅಸ್ಮಿತೆಯ ಜೀವಂತ ವಾಹಿನಿ.

ಆದ್ದರಿಂದ ವಿದೇಶದಲ್ಲಿ ಹುಟ್ಟಿ ಬೆಳೆಯುವ ಮಕ್ಕಳಿಗೆ ಕನ್ನಡ ಕಲಿಸುವುದು ಕೇವಲ ಭಾಷಾ ಶಿಕ್ಷಣವಲ್ಲ; ಅವರನ್ನು ತಮ್ಮ ಬೇರು, ಪರಂಪರೆ ಮತ್ತು ಪೂರ್ವಜರ ಸಾಂಸ್ಕೃತಿಕ ಸ್ಮೃತಿಯೊಂದಿಗೆ ಅನುಸಂಧಾನಗೊಳಿಸುವ ಕಾರ್ಯ. ಅದೇ ಸಂದರ್ಭದಲ್ಲಿ ಕನ್ನಡವು ಭೂತಕಾಲದ ನೆನಪಾಗಿ ಉಳಿಯದೆ, ಜ್ಞಾನ, ವಿಜ್ಞಾನ, ತಂತ್ರಜ್ಞಾನ ಮತ್ತು ಸೃಜನಶೀಲತೆಯ ಸಮರ್ಥ ಭಾಷೆಯಾಗಬೇಕು.

ಅಕ್ಕಾ ಕನ್ನಡಿಗರನ್ನು ಒಗ್ಗೂಡಿಸುವ ಸಂಸ್ಥೆಯಷ್ಟೇ ಅಲ್ಲ; ತಾಯ್ನುಡಿಯಿಂದ ತಾಯ್ನಾಡಿಗೆ, ಪರಂಪರೆಯಿಂದ ಮುಂದಿನ ಪೀಳಿಗೆಗೆ, ಕನ್ನಡದಿಂದ ವಿಶ್ವಮಾನವೀಯತೆಗೆ ಸೇತುವೆ ನಿರ್ಮಿಸುವ ಸಾಂಸ್ಕೃತಿಕ ಚಳವಳಿ.

ವಿಶ್ವದ ಕನ್ನಡಿಗರ ಹೃದಯಗಳಲ್ಲಿ ಕನ್ನಡದ ಅಖಂಡ ದೀಪ ನಿರಂತರವಾಗಿ ಬೆಳಗಲಿ.

ಅಕ್ಕಾ–೨೦೨೬ ರಜತ ಮಹೋತ್ಸವದ ಹಾರ್ದಿಕ ಶುಭಾಶಂಸನೆಗಳು!

– ಶ್ರೀ ತರಳಬಾಳು ಜಗದ್ಗುರು
ಶ್ರೀ ೧೧೦೮ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles