ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ದೊಣೆಹಳ್ಳಿ ಹೊಸೂರು ಗ್ರಾಮದಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂಬ ಕಾರಣಕ್ಕೆ ಗಂಡನನ್ನೇ ಪ್ರಿಯಕರನೊಂದಿಗೆ ಸೇರಿ ಸುಪಾರಿ ನೀಡಿ ಹತ್ಯೆ ಮಾಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಹಾಗೂ ಪ್ರಿಯಕರ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
ದಾಬಸವರಾಜ್ (37) ಕೊಲೆಯಾದ ದುರ್ದೈವಿ. ಪತ್ನಿ ಸುನೀತಾ ಹಾಗೂ ಆಕೆಯ ಪ್ರಿಯಕರ ಬೆಣ್ಣೆಹಳ್ಳಿ ತಿಪ್ಪೇಸ್ವಾಮಿ ಕೃತ್ಯದ ಪ್ರಮುಖ ಆರೋಪಿಗಳು.
ಪ್ರಕರಣದ ಹಿನ್ನೆಲೆ:
ಪತ್ನಿ ಸುನೀತಾ ಮತ್ತು ಬೆಣ್ಣೆಹಳ್ಳಿ ತಿಪ್ಪೇಸ್ವಾಮಿ ನಡುವಿನ ವಿವಾಹೇತರ ಸಂಬಂಧದ ವಿಚಾರ ಪತಿ ಬಸವರಾಜ್ಗೆ ತಿಳಿದು ಮನೆಯಲ್ಲಿ ಜಗಳವಾಡಿದ್ದನು. ಇದರಿಂದ ಕಂಗೆಟ್ಟ ಪ್ರೇಮಿಗಳು ಬಸವರಾಜನನ್ನು ಮುಗಿಸಲು 2 ಲಕ್ಷ ರೂಪಾಯಿಗೆ ಸುಪಾರಿ ನೀಡಿ ಸ್ಕೆಚ್ ಹಾಕಿದ್ದರು. ಸಾಲ ಕೊಡಿಸುವುದಾಗಿ ನಂಬಿಸಿ ದೊಣೆಹಳ್ಳಿ ಕ್ರಾಸ್ನಿಂದ ಕಾರಿನಲ್ಲಿ ಕರೆದೊಯ್ದು, ಮತ್ತೊಬ್ಬ ಆರೋಪಿ ಓಂಕಾರಪ್ಪನ ಸಹಾಯದಿಂದ ಮದ್ಯ ಕುಡಿಸಿ ಕತ್ತು ಹಿಸುಕಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆಗೈದಿದ್ದಾರೆ. ಬಳಿಕ ತುಮಕೂರು ಜಿಲ್ಲೆಯ ಹುಳಿಯಾರ್ ಬಳಿಯ ಕುದುರೆ ಕಣಿವೆ ಅರಣ್ಯ ಪ್ರದೇಶದಲ್ಲಿ ಮೃತದೇಹ ಎಸೆದಿದ್ದರು.
ಸಿಕ್ಕಿಬಿದ್ದಿದ್ದು ಹೇಗೆ?
ಜೂನ್ ತಿಂಗಳಲ್ಲಿ ಕೊಲೆ ನಡೆದಿದ್ದರೂ, ಜುಲೈ ತಿಂಗಳಲ್ಲಿ ಜಗಳೂರು ಪೊಲೀಸ್ ಠಾಣೆಗೆ ಬಂದು ತನ್ನ ಗಂಡ ಕಾಣೆಯಾಗಿದ್ದಾನೆಂದು ಪತ್ನಿ ಸುನೀತಾ ನಾಪತ್ತೆ ದೂರು ದಾಖಲಿಸಿದ್ದಳು. ಬರೋಬ್ಬರಿ ಒಂದು ತಿಂಗಳ ನಂತರ
ಮಿಸ್ಸಿಂಗ್ ದೂರು ದಾಖಲಿಸಿದ್ದರಿಂದ ಅನುಮಾನಗೊಂಡ ಜಗಳೂರು ಠಾಣೆಯ ಪಿಐ ಸಿದ್ದರಾಮಯ್ಯ ನೇತೃತ್ವದ ಪೊಲೀಸರು ತಾಂತ್ರಿಕ ಮಾಹಿತಿ ಆಧರಿಸಿ ತನಿಖೆ ನಡೆಸಿದಾಗ ಕರಾಳ ಸತ್ಯ ಬಯಲಾಗಿದೆ. ಸದ್ಯ ಮೂವರನ್ನು ಬಂಧಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.





Leave a comment