ಬೆಂಗಳೂರು: ಕಾಂಗ್ರೆಸ್ ಪಕ್ಷವೇ ಒಂದು ಬಣ. ನನಗೆ, ಸಿದ್ದರಾಮಯ್ಯ ಅವರಿಗೆ ಯಾವುದೇ ಬಣ ಇಲ್ಲ. ನಾವು ಒಗ್ಗಟ್ಟಾಗಿದ್ದೇವೆ. ಸಿದ್ದರಾಮಯ್ಯ ಅವರೂ ಸೇರಿ ನನ್ನ ಸಂಖ್ಯೆ 138 ಎಂದು ಸದನದಲ್ಲಿ ಹೇಳಿದ್ದೆ. ಬಣಗಳು ಬಿಜೆಪಿಯಲ್ಲಿ ನಡೆಯಬಹುದು, ಕಾಂಗ್ರೆಸ್ ಪಕ್ಷದಲ್ಲಿ ನಡೆಯುವುದಿಲ್ಲ. ನಾವು ಪಕ್ಷದ ಸೇನಾನಿಯಾಗಿ ಕೆಲಸ ಮಾಡುತ್ತೇವೆ ಎಂದು ಸಿಎಂ ಡಿ. ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು,ಸಿಎಂ ಆದ ಬಳಿಕ ಮಾಜಿ ಸಿಎಂಗಳ ಭೇಟಿ ಮಾಡಿದ್ದೇನೆ. ನಾನು ಕಾಂಗ್ರೆಸ್ ಪಕ್ಷದಿಂದ ಬಂದಿದ್ದರೂ ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ. ನಾವು ಈ ಸ್ಥಾನದಲ್ಲಿ ಕೂತಾಗ ಸಮಾಜದ ಎಲ್ಲಾ ವರ್ಗದವರನ್ನು
ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಅದನ್ನೇ ಪ್ರಮಾಣ ವಚನ ತೆಗೆದುಕೊಂಡಿದ್ದೇವೆ. ನಾನು ತಾರತಮ್ಯ ಮಾಡಲು ಸಾಧ್ಯವೇ? ಅಸ್ಸಾಂ ನಲ್ಲಿ ಸರ್ಕಾರದ ಯೋಜನೆಗಳನ್ನು ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ನೀಡುತ್ತಾರೆ. ಆದರೆ ನಾವು ಎಲ್ಲಾ ವರ್ಗದ ಜನರಿಗೂ ನೀಡುತ್ತೇವೆ. ನ್ಯಾಯದ ಪೀಠದಲ್ಲಿ ಕೂತು ಅನ್ಯಾಯ ಮಾಡಬಾರದು. ನಾನು ಈ ಸ್ಥಾನದಲ್ಲಿ ಕೂತಾಗ ಎಲ್ಲರನ್ನು ಒಂದೇ ರೀತಿ ಕಾಣಬೇಕು ಎಂದರು.
ಆಡಳಿತ ವಿಚಾರದಲ್ಲಿ ನಾವು ಎಲ್ಲರನ್ನೂ ಸಮಾನರಾನ್ನಾಗಿ ನೋಡಬೇಕು. ಕೇಂದ್ರ ಸರ್ಕಾರ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ. ಇದೇ ಕಾರಣಕ್ಕೆ ಮೈಸೂರು ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಹೇಳಿಕೆ ಪ್ರಸ್ತಾಪಿಸಿ, ಕರ್ನಾಟಕಕ್ಕೆ ಹೃದಯ ಶ್ರೀಮಂತಿಕೆಯಿಂದ ನೆರವು ನೀಡಿ ಎಂದು ಪ್ರಧಾನಿಗಳನ್ನು ಕೇಳಿದೆ. ಕರ್ನಾಟಕವು ದೇಶದ ಜಿಡಿಪಿ, ತೆರಿಗೆ ವಿಚಾರದಲ್ಲಿ ಹೆಚ್ಚಿನ ಕೊಡುಗೆ ನೀಡುತ್ತಿದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದು, ಸಂವಿಧಾನ ಹೊಂದಿದ್ದೇವೆ. ಮಹಾರಾಷ್ಟ್ರ, ಗುಜರಾತಿಗೆ ಹೋಲಿಕೆ ಮಾಡಿದರೆ ಕರ್ನಾಟಕ ಸೇರಿ ದಕ್ಷಿಣ ಭಾರತದ ರಾಜ್ಯಗಳಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.





Leave a comment