ದಾವಣಗೆರೆ: ಪ್ರಸ್ತಕ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿವರಗಳನ್ನು ರೈತರೇ ಸ್ವತಃ ತಮ್ಮ ಮೊಬೈಲ್ ಮೂಲಕ ದಾಖಲಿಸಲು ಅನುಕೂಲವಾಗುವಂತೆ ಇ-ಆಡಳಿತ ಇಲಾಖೆ ಅಭಿವೃದ್ಧಿಪಡಿಸಿರುವ ‘ಬೆಳೆ ಸಮೀಕ್ಷೆ’ (ಕ್ರಾಪ್ ಸರ್ವೇ ಖಾರೀಫ್ 2026) ಆಪ್ ಚಾಲನೆಗೊಂಡಿದ್ದು, ಬೆಳೆ ವಿವರ ಅಪ್ಲೋಡ್ ಮಾಡಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ರೈತರು ಹಾಗೂ ಖಾಸಗಿ ನಿವಾಸಿಗಳು ಗೂಗಲ್ ಪ್ಲೇಸ್ಟೋರ್ನಿಂದ ‘ಕ್ರಾಪ್ ಸರ್ವೇ ಖಾರೀಫ್ 2026’ ಆಪ್ ಡೌನ್ಲೋಡ್ ಮಾಡಿಕೊಂಡು ತಮ್ಮ ಜಮೀನಿನ ಬೆಳೆ ವಿವರಗಳನ್ನು ನಮೂದಿಸಬಹುದಾಗಿದೆ.
ಬೆಳೆ ಸಮೀಕ್ಷೆಯ ಮಹತ್ವ:
ಬೆಳೆ ಪರಿಹಾರ ವಿತರಣೆ, ಬೆಳೆ ಹಾನಿ ವರದಿ ಸಿದ್ಧಪಡಿಸುವುದು, ಬೆಳೆ ವಿಮಾ ಯೋಜನೆ, ಮತ್ತು ಕನಿಷ್ಠ ಬೆಂಬಲ ಬೆಲೆ ಯೋಜನೆಗಳಿಗೆ ಈ ಮಾಹಿತಿ ಕಡ್ಡಾಯವಾಗಿದೆ.
ಆರ್ಟಿಸಿ ಯಲ್ಲಿ ಬೆಳೆ ವಿವರ ದಾಖಲಿಸಲು ಹಾಗೂ ರಾಷ್ಟ್ರೀಕೃತ ಮತ್ತು ಗ್ರಾಮೀಣ ಬ್ಯಾಂಕ್ಗಳಲ್ಲಿ ಬೆಳೆ ಸಾಲ ಪಡೆಯಲು ಈ ಸಮೀಕ್ಷೆಯ ದತ್ತಾಂಶ ಅತ್ಯಗತ್ಯ. ಬೆಳೆ ಕಟಾವು ಪ್ರಯೋಗಗಳು ಹಾಗೂ ನೈಸರ್ಗಿಕ ವಿಕೋಪ ಸಂದರ್ಭಗಳಲ್ಲಿ ನಿಖರ ಪರಿಹಾರ ಒದಗಿಸಲು ನೆರವಾಗುತ್ತದೆ.
ರೈತರು ತಮ್ಮ ಜಮೀನಿನ ಗಡಿ ರೇಖೆಯೊಳಗೆ ತೆರಳಿ, ಜಿಪಿಎಸ್ ನಿಖರತೆಯೊಂದಿಗೆ ಬೆಳೆಗಳ ಭಾವಚಿತ್ರ ತೆಗೆದು ಸಮೀಕ್ಷೆ ಪೂರ್ಣಗೊಳಿಸಬೇಕು.ಹೆಚ್ಚಿನ ವಿವರ ಹಾಗೂ ತಾಂತ್ರಿಕ ಮಾರ್ಗದರ್ಶನಕ್ಕಾಗಿ ಸಮೀಪದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.





Leave a comment