ಲಖನೌ: ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ರೂಢಾ ಧಮ್ರುವಾ ಗ್ರಾಮದಲ್ಲಿ 2016ರ ಬ್ಯಾಚ್ನ ಐಪಿಎಸ್ ಅಧಿಕಾರಿ ಆಶುತೋಷ್ ಮಿಶ್ರಾ ಅವರ 95 ವರ್ಷದ ತಾಯಿ ಇಂದ್ರಾವತಿ ಅವರನ್ನು ನಿಗೂಢವಾಗಿ ಕೊಲೆ ಮಾಡಿ, ಅವರ ಮೈಮೇಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿರುವ ಆಘಾತಕಾರಿ ಘಟನೆ ನಡೆದಿದೆ.
ಇಂದ್ರಾವತಿ ಅವರು ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಭಾನುವಾರ ಬೆಳಿಗ್ಗೆ 9 ಗಂಟೆಗೆ ಕೆಲಸದ ಮಹಿಳೆ ಮನೆಗೆ ಬಂದಾಗ ಇಂದ್ರಾವತಿ ಅವರು ಮಂಚದ ಮೇಲೆ ಮೃತದೇಹವಾಗಿ ಬಿದ್ದಿರುವುದು ಬೆಳಕಿಗೆ ಬಂದಿದೆ. ಸದ್ಯ ಲಖನೌನಲ್ಲಿ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಅಧಿಕಾರಿ ಆಶುತೋಷ್ ಮಿಶ್ರಾ ಅವರು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದು, ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಹಾಗೂ ದರೋಡೆ ದೂರು ದಾಖಲಿಸಿದ್ದಾರೆ.
ಮೃತರ ಮೈಮೇಲಿದ್ದ ಚಿನ್ನದ ಚೈನು, ಮೂಗುತಿ, ಕಿವಿಯೋಲೆ ಹಾಗೂ ಕಾಲುಚainಗಳು ನಾಪತ್ತೆಯಾಗಿವೆ. ಶನಿವಾರ ರಾತ್ರಿ ಕಳ್ಳರು ಮನೆಗೆ ನುಗ್ಗಿ ಕೊಲೆ ನಡೆಸಿ ಕಳವು ಮಾಡಿರಬಹುದು ಎಂದು ಶಂಕಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವಿಶೇಷ ವೈದ್ಯರ ತಂಡದಿಂದ ತನಿಖೆ ನಡೆಸಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, “ಉತ್ತರ ಪ್ರದೇಶದಲ್ಲಿ ಪೊಲೀಸರ ಕುಟುಂಬವೇ ಸುರಕ್ಷಿತವಾಗಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.





Leave a comment