ದಾವಣಗೆರೆ: ಆಗಸ್ಟ್ 16ರ ಭಾನುವಾರದಂದು ರೈತರ ಸಭೆ ಕರೆದು ಭದ್ರಾ ಡ್ಯಾಂ ನೀರು ಹರಿಸುವ ಬಗ್ಗೆ ಸಮಾಲೋಚನೆ ನಡೆಸಬೇಕು ಎಂದು ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ ಮತ್ತು ಕೆ ಎಸ್ ಬಸವಂತಪ್ಪ ಅವರಿಗೆ ಒಕ್ಕೂರಲವಾಗಿ ಒತ್ತಾಯಿಸಲಾಯಿತು.
ತಾಲ್ಲೂಕಿನ ಬಿ.ಕಲ್ಪನಹಳ್ಳಿ ಗ್ರಾಮದ ಶ್ರೀ ಶರಣ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಕೊನೆ ಭಾಗದ ರೈತರು ಸಭೆ ಸೇರಿ ಮುಂದಿನ ಬೇಸಿಗೆ ಹಂಗಾಮಿನಲ್ಲಿ 35 ಟಿಎಂಸಿ ನೀರು ಸಂಗ್ರಹ ಇಟ್ಟುಕೊಳ್ಳಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹಾಬಲೇಶ್ವರಗೌಡ್ರು ಮಾತನಾಡಿ ಈ ಹಿಂದೆ 2023 ರಲ್ಲಿ ಮುಂದಾಲೋಚನೆ ಇಲ್ಲದೇ ನೀರು ಹರಿಸಿದ್ದರಿಂದ ಬಹಳಷ್ಟು ಹಣ ಸುರಿದು ಟ್ಯಾಂಕರ್ ನಲ್ಲಿ ನೀರುಣಿಸಿ ತೋಟದ ಬೆಳೆಗಳನ್ನು ಉಳಿಸಿಕೊಂಡಿದ್ದೇವೆ. ಮಳೆ ಕೊರತೆಯಿಂದ ಡ್ಯಾಂ ತುಂಬಿಲ್ಲ. ಇರುವ ನೀರನ್ನು ವೈಜ್ಞಾನಿಕವಾಗಿ ಬಳಸಿಕೊಳ್ಳಬೇಕು. ನಾನು ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತ. ಬೇಸಿಗೆಯಲ್ಲಿ ನೀರು ಕೊನೆ ಭಾಗಕ್ಕೆ ತಲುಪುವುದಿಲ್ಲ. ಈಗ ಕೊಡಿ ಎಂದು ಕೇಳುವುದರಲ್ಲಿ ಹುರುಳಿಲ್ಲ ಎಂದು ಹೇಳಿದರು.
ಬಿಜೆಪಿ ಮುಖಂಡ ಬೇತೂರು ಸಂಗಣ್ಣಗೌಡ್ರು ಮಾತನಾಡಿ, ಎಲ್ ನೀನೋ ಎಫೆಕ್ಟ್ ನಿಂದ ಈ ಬಾರಿ ಸೈಕ್ಲೋನ್ ಬರುವುದು ಅನುಮಾನ. ರೈತರ ಭರವಸೆಯ ಪುಷ್ಯೆ ಮತ್ತು ಆಶ್ಲೇಷ ಮಳೆ ಕೈ ಹಿಡಿಯಲಿಲ್ಲ. ಇರುವ ನೀರನ್ನು ಮುಂದಾಲೋಚನೆ ಇಲ್ಲದೇ ಬಿಡುವುದು ಸರಿಯಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತರ ಒಕ್ಕೂಟದ ಅಧ್ಯಕ್ಷ ಕೋಳೆನಹಳ್ಳಿ ಬಿ ಎಂ ಸತೀಶ್ ರವರು ಮಾತನಾಡಿ ಪ್ರಸ್ತುತ ಭದ್ರಾ ಡ್ಯಾಂಗೆ 4403 ಕ್ಯೂಸೆಕ್ ಒಳಹರಿವು ಇದ್ದು, ನೀರಿನ ಮಟ್ಟ 172 ಅಡಿ 1 ಇಂಚು ನೀರು ಇದೆ. 55.13 ಟಿಎಂಸಿ ನೀರು ಸಂಗ್ರಹ ಇದೆ.
ಇದರಲ್ಲಿ 13.8 ಟಿಎಂಸಿ ನೀರು ಡೆಡ್ ಸ್ಟೋರೇಜ್, ಕುಡಿಯುವ ನೀರಿಗೆ 8.5 ಟಿಎಂಸಿ ಜೊತೆಗೆ ಕೇಂದ್ರ ಸರ್ಕಾರ ದೇಶದ ಎಲ್ಲಾ ಡ್ಯಾಂ ಅಥಾರಿಟಿಯವರಿಗೆ ಪತ್ರ ಬರೆದು ಎಲ್ ನೀನೋ ಎಫೆಕ್ಟ್ ಪರಿಣಾಮ ಎದುರಿಸಲು, 2 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಕುಡಿಯುವ ನೀರಿಗೆ ಮೀಸಲಿಡಬೇಕು ಎಂದು ಆದೇಶಿಸಿದೆ ಎಂದರು.
ಆವಿಯಾಗುವುದು, ಸೋರಿಕೆ ಎಂದು 6 ಟಿಎಂಸಿ ಇಂಜಿನಿಯರ್ ಗಳು ಅಂದಾಜಿಸಿದ್ದಾರೆ. ಒಟ್ಟಾರೆಯಾಗಿ 30 ಟಿಎಂಸಿ ನೀರು ಕಳೆದರೆ ಉಳಿಯುವುದು 25 ಟಿಎಂಸಿ ಮಾತ್ರ ಬಳಕೆಗೆ ಇದೆ. 120 ದಿನ ಸತತವಾಗಿ ಹರಿಸಲು ಮಳೆಗಾಲದ ಹಂಗಾಮಿನಲ್ಲಿ 32 ಟಿಎಂಸಿ ಮತ್ತು ಬೇಸಿಗೆ ಹಂಗಾಮಿನಲ್ಲಿ
35 ಟಿಎಂಸಿ ನೀರು ಬೇಕಾಗುತ್ತದೆ. ಆದ್ದರಿಂದ ಬೇಸಿಗೆ ಹಂಗಾಮಿನಲ್ಲಿ ಜನವರಿ 10ನೇ ತಾರೀಖಿನಿಂದ ಮೇ ತಿಂಗಳ ಅಂತ್ಯದವರೆಗೆ ಒಟ್ಟು 130 ದಿನ ಸತತವಾಗಿ ಹರಿಸಿದ್ರೆ ತೋಟಗಳು ಉಳಿಯುತ್ತವೆ, ಭತ್ತದ ಬೆಳೆಯು ಬರುತ್ತದೆ. ಅಂತರ್ಜಲ ಮಟ್ಟ ಕುಸಿಯುವುದಿಲ್ಲ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಹಿರಿಯ ರೈತ ಮುಖಂಡ ಕಲ್ಪನಹಳ್ಳಿ ಕೆ.ಜಿ.ಶೇಖರಪ್ಪ ವಹಿಸಿದ್ದರು. ರೈತ ಮುಖಂಡ ಬಲ್ಲೂರು ರವಿಕುಮಾರ್, ಕಲ್ಪನಹಳ್ಳಿ ರೇವಣಸಿದ್ದಪ್ಪ, ಸತೀಶ್, ಕೆ.ಎನ್.ಸೋಮಶೇಖರಪ್ಪ, ಕೆ.ಬಿ.ಬಸವಲಿಂಗಪ್ಪ ಮುಂತಾದವರು ಮಾತನಾಡಿದರು. ಬೇತೂರು ನಂದಿಬಸಪ್ಪ, ವಿರೂಪಾಕ್ಷಪ್ಪ, ಮಾಜಿ ಎಪಿಎಂಸಿ ಅಧ್ಯಕ್ಷ ಬಿ.ಪ್ರಭು ಮುಂತಾದವರು ಉಪಸ್ಥಿತರಿದ್ದರು.
- 35 TMC water demand
- 35 ಟಿಎಂಸಿ ನೀರು
- Bhadra Dam water level
- Bhadra reservoir water distribution
- Davanagere farmers protest
- El Nino effect Bhadra Dam
- Kalpanahalli farmers meeting
- Karnataka irrigation news
- KS Basavantappa
- SS Mallikarjun
- ಎಲ್ ನಿನೋ ಎಫೆಕ್ಟ್
- ಎಸ್. ಎಸ್. ಮಲ್ಲಿಕಾರ್ಜುನ್
- ಕೆ ಎಸ್ ಬಸವಂತಪ್ಪ
- ಕೊನೆ ಭಾಗದ ರೈತರು
- ಕೋಳೆನಹಳ್ಳಿ ಬಿ ಎಂ ಸತೀಶ್
- ದಾವಣಗೆರೆ ರೈತರ ಸಭೆ
- ಬಿ ಕಲ್ಪನಹಳ್ಳಿ
- ಭದ್ರಾ ಜಲಾಶಯ
- ಭದ್ರಾ ನೀರು ಹಂಚಿಕೆ





Leave a comment