ಜೈಪುರ: ಹೊಸದಾಗಿ ಕಂಪನಿಗೆ ಸೇರ್ಪಡೆಯಾದ ಉದ್ಯೋಗಿಯೊಬ್ಬರು ಕೆಲಸಕ್ಕೆ ಸೇರಿದ ಒಂದೇ ದಿನದಲ್ಲಿ ರಾಜೀನಾಮೆ ನೀಡಿ, ನೀಡಿದ್ದ ಆಫೀಸ್ ಲ್ಯಾಪ್ಟಾಪ್ ಅನ್ನು ‘ನಿಮ್ಮವರನ್ನೇ ಕಳುಹಿಸಿ ವಾಪಸ್ ಒಯ್ಯಿರಿ’ ಎಂದು ಹೇಳಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಜೈಪುರ ಮೂಲದ ‘ವಂಶೀವ್ ಟೆಕ್ನಾಲಜೀಸ್’ (Vanshiv Technologies) ಸಂಸ್ಥೆಯ ಸಿಇಒ ಗೌರವ್ ಖೇತರ್ಪಾಲ್ ಅವರು ತಮಗಾದ ಈ ವಿಚಿತ್ರ ಅನುಭವವನ್ನು ‘ಎಕ್ಸ್’ (X) ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
ಘಟನೆಯ ವಿವರ:
ಸಂಸ್ಥೆಯು ದಿವ್ಯಾ ಎಂಬ ಮಹಿಳಾ ಅಭ್ಯರ್ಥಿಯನ್ನು ವಾರ್ಷಿಕ ₹15 ಲಕ್ಷದ ಪ್ಯಾಕೇಜ್ಗೆ ಆಯ್ಕೆ ಮಾಡಿತ್ತು. ಆಕೆಯ ಹಳೆಯ ಕಂಪನಿಯ 3 ತಿಂಗಳ ನೋಟಿಸ್ ಪೀರಿಯಡ್ ಮುಗಿಯುವವರೆಗೆ ಕಂಪನಿ ಕಾದಿತ್ತು. ಆದರೆ, ಜಾಯಿನ್ ಆಗಲು ಮೂರು ದಿನ ಬಾಕಿ ಇರುವಾಗ, ಆಕೆ ಹೆಚ್ಚುವರಿಯಾಗಿ ₹50,000 ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದರು. ಕೆಲಸದ ಪ್ರಕ್ರಿಯೆ ತಡವಾಗಬಾರದು ಎಂದು ಕಂಪನಿಯು ಅದಕ್ಕೂ ಒಪ್ಪಿಕೊಂಡಿತ್ತು.
ಆದರೆ ಕೆಲಸಕ್ಕೆ ಸೇರಿದ ಮೊದಲ ದಿನವೇ ಆನ್ ಬೋರ್ಡಿಂಗ್ ಪ್ರಕ್ರಿಯೆ ಮುಗಿಸಿ, ಕಂಪನಿಯ ಲ್ಯಾಪ್ಟಾಪ್ ಪಡೆದ ನಂತರ ವೈಯಕ್ತಿಕ ಕಾರಣ ನೀಡಿ ‘ವರ್ಕ್ ಫ್ರಮ್ ಹೋಮ್’ (WFH) ಕೋರಿದ್ದರು. ಮಾರನೇ ದಿನದಿಂದಲೇ ಆಕೆ ಕಂಪನಿಯ ಫೋನ್ ಕರೆ, ಇಮೇಲ್ ಹಾಗೂ ಮೆಸೇಜ್ಗಳಿಗೆ ಸ್ಪಂದಿಸದೆ ನಾಪತ್ತೆಯಾಗಿದ್ದರು.
ಕಾನೂನು ಕ್ರಮದ ಎಚ್ಚರಿಕೆ:
ನಂತರ ಕಂಪನಿಯು ಆಕೆಯನ್ನು ಸಂಪರ್ಕಿಸಿದಾಗ, ‘ವೈಯಕ್ತಿಕ ಕಾರಣಗಳಿಂದ ಮುಂದುವರಿಯಲು ಸಾಧ್ಯವಿಲ್ಲ, ಮನೆಗೆ ಬಂದು ಲ್ಯಾಪ್ಟಾಪ್ ಒಯ್ಯಿರಿ’ ಎಂದು ಬೇಜವಾಬ್ದಾರಿಯ ಉತ್ತರ ನೀಡಿದ್ದಾರೆ. ಇದರಿಂದ ಕೆರಳಿದ ಸಿಇಒ Gaurav Kheterpal ಅವರು ಸಂಜೆ 8 ಗಂಟೆಯೊಳಗೆ ಲ್ಯಾಪ್ಟಾಪ್ ಮತ್ತು ಕಂಪನಿ ಆಸ್ತಿಯನ್ನು ವಾಪಸ್ ತಲುಪಿಸದಿದ್ದರೆ ಕ್ರಿಮಿನಲ್ ಮತ್ತು ಕಾನೂನು ಕ್ರಮ ಜರುಗಿಸುವುದಾಗಿ ಇಮೇಲ್ ಹೆದರಿಕೆ ಹಾಕಿದ್ದರು. ಈ ಎಚ್ಚರಿಕೆಯ ನಂತರ ಆಕೆ ಲ್ಯಾಪ್ಟಾಪ್ ವಾಪಸ್ ನೀಡಿದ್ದಾರೆ.
ತನಿಖೆಯಲ್ಲಿ ಆಕೆ ಕೇವಲ ₹25,000 ಹೆಚ್ಚಿನ ಸಂಬಳ ಸಿಕ್ಕಿದ್ದಕ್ಕೆ ಮತ್ತೊಂದು ಕಂಪನಿಗೆ ಸೇರ್ಪಡೆಯಾಗಿರುವುದು ತಿಳಿದುಬಂದಿದೆ. “ಕೇವಲ ₹25 ಸಾವಿರಕ್ಕಾಗಿ 3 ತಿಂಗಳ ನಿರೀಕ್ಷೆಯನ್ನು ಹುಸಿಗೊಳಿಸಿ, ವೃತ್ತಿಪರತೆಯನ್ನು ಮರೆತಿದ್ದಾರೆ” ಎಂದು ಸಿಇಒ ಬೇಸರ ವ್ಯಕ್ತಪಡಿಸಿದ್ದಾರೆ.





Leave a comment