ದಾವಣಗೆರೆ: ಚುನಾವಣೆ ಸಮಯದಲ್ಲಿ ಬೆಳ್ಳಿ ಇಟ್ಟಿಗೆಗಳನ್ನು ಮೆರವಣಿಗೆ ಮಾಡಿ ಬಿಜೆಪಿ ಮತ್ತು ಆರ್ಎಸ್ಎಸ್ ನಾಯಕರು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ ಹಾಗೂ ಅಯೋಧ್ಯೆ ರಾಮಮಂದಿರದ ಹುಂಡಿ ಹಣವನ್ನು ಕದ್ದಿದ್ದಾರೆ ಎಂದು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ (ಧೂಡಾ) ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೂಡಾ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಮತ್ತು ಅವರ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಳ್ಳಿ ಇಟ್ಟಿಗೆ ಅವ್ಯವಹಾರ:
ಕಳೆದ 15 ರಿಂದ 20 ವರ್ಷಗಳಿಂದ ಬೆಳ್ಳಿ ಇಟ್ಟಿಗೆಗಳನ್ನು ಮೆರವಣಿಗೆ ಮಾಡಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಾಗಿದೆ. ಇವುಗಳನ್ನು ಮಾರಿಕೊಂಡ ಯಶವಂತರಾವ್ ಜಾಧವ್ ತಂಡಕ್ಕೆ ಲೆಕ್ಕ ಮತ್ತು ದಾಖಲೆ ನೀಡುವಂತೆ ಕೇಳಿದರೂ ನೀಡಿಲ್ಲ. ಯಶವಂತರಾವ್ ದಾವಣಗೆರೆಯ ‘ಚಂಪತ್ ರಾಯ್’ ಇದ್ದಂತೆ ಎಂದು ವ್ಯಂಗ್ಯವಾಡಿದರು.
ಹುಂಡಿ ಹಣ & ಆಸ್ತಿ ಕಬಳಿಕೆ:
15-20 ವರ್ಷಗಳಿಂದ ಹುಂಡಿ ಹಣ, ಚಿನ್ನ-ಬೆಳ್ಳಿ ಕಳ್ಳತನವಾಗಿದೆ. ಬಿಜೆಪಿ ಹಾಗೂ ಆರ್ಎಸ್ಎಸ್ ಕಾರ್ಯಕರ್ತರು ಕೇವಲ ₹2 ಲಕ್ಷಕ್ಕೆ ಜಮೀನು ಖರೀದಿಸಿ, ಅದನ್ನು ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಿ ಲಾಭ ಮಾಡಿಕೊಂಡಿದ್ದಾರೆ. ರಾಮನ ಹೆಸರಿನಲ್ಲಿ ಬಡವರು ಹಾಗೂ ಅಹಿಂದ ವರ್ಗದ ಯುವಕರನ್ನು ಪ್ರಚೋದಿಸಿ ರಾಜಕೀಯ ಮಾಡಲಾಗುತ್ತಿದೆ ಎಂದು ಶೆಟ್ಟಿ ಆಕ್ರೋಶ ಹೊರಹಾಕಿದರು.
ನಾಳೆ ಬೃಹತ್ ಪ್ರತಿಭಟನೆ:
ಅಯೋಧ್ಯೆಯ ರಾಮಮಂದಿರ ಹುಂಡಿ ಕಳ್ಳತನ ಮತ್ತು ದಾವಣಗೆರೆಯ ಬೆಳ್ಳಿ ಇಟ್ಟಿಗೆ ಕಳವು ಪ್ರಕರಣ ವಿರೋಧಿಸಿ ಜುಲೈ 25ರ ಸಂಜೆ ಆರು ಗಂಟೆಗೆ ನಗರದಲ್ಲಿ ಬೃಹತ್ ಪಂಜಿನ ಮೆರವಣಿಗೆ ಆಯೋಜಿಸಲಾಗಿದೆ. ರಾಮ್ ಅಂಡ್ ಕೋ ಸರ್ಕಲ್ನಿಂದ ಆರಂಭವಾಗುವ ಪ್ರತಿಭಟನಾ ಮೆರವಣಿಗೆ ಅರುಣಾ ಸರ್ಕಲ್, ಪೂಜಾ ಹೊಟೇಲ್ ಮಾರ್ಗವಾಗಿ ರಾಮದೇವರು ದೇವಸ್ಥಾನದ ಬಳಿ ತಲುಪಿ, ಹನುಮಾನ್ ಚಾಲೀಸಾ ಪಠಣದೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ನಾಗರಾಜ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಜರಿದ್ದರು.





Leave a comment