ನವದೆಹಲಿ: ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿರುವ ಪೆಟ್ರೋಲ್ಗೆ ಶೇ. 20 ರಷ್ಟು ಎಥೆನಾಲ್ ಮಿಶ್ರಣ ಮಾಡುವ (E20) ಮಹತ್ವಾಕಾಂಕ್ಷಿ ಯೋಜನೆ ಸದ್ಯಕ್ಕೆ ಕೇವಲ ಒಂದು ‘ಪ್ರಯೋಗ’ (Ongoing Experiment) ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಈ ನೀತಿಯ ನೈಜ ಪರಿಣಾಮ ಮತ್ತು ಸಂಪೂರ್ಣ ಫಲಿತಾಂಶಗಳು ಮುಂದಿನ ವರ್ಷದ ವೇಳೆಗೆ ಲಭ್ಯವಾಗಲಿವೆ ಎಂದು ಸರ್ಕಾರ ಕೋರ್ಟ್ ಮೆಟ್ಟಿಲೇರಿದೆ.
ಏನಿದು ಪ್ರಕರಣ?
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL), 2025-26ರ ಪೂರೈಕೆ ವರ್ಷಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಎಥೆನಾಲ್ ಹಂಚಿಕೆ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ಈ ಪ್ರಮುಖ ಹೇಳಿಕೆಯನ್ನು ನೀಡಿದ್ದಾರೆ.
ರಾಷ್ಟ್ರೀಯ ನೀತಿಗೆ ಧಕ್ಕೆ ಭೀತಿ:
“20 ಪ್ರತಿಶತ ಎಥೆನಾಲ್ ಮಿಶ್ರಣವು ಸರ್ಕಾರ ಸದ್ಯ ಪ್ರಯೋಗಿಸುತ್ತಿರುವ ಪ್ರಕ್ರಿಯೆಯಾಗಿದೆ. ಮುಂದಿನ ವರ್ಷದ ವೇಳೆಗೆ ನಮ್ಮ ಬಳಿ ಇದರ ನಿಖರ ಫಲಿತಾಂಶ ಇರಲಿದೆ. ಈಗಾಗಲೇ ಅಕ್ಟೋಬರ್ 2025 ರಲ್ಲೇ ಎಥೆನಾಲ್ ಪೂರೈಕೆ ಒಪ್ಪಂದಗಳನ್ನು ಅಂತಿಮಗೊಳಿಸಲಾಗಿದೆ. ವಿವಿಧ ಹೈಕೋರ್ಟ್ಗಳಲ್ಲಿ ಇಂತಹ ಪ್ರಕರಣಗಳು ಬಾಕಿ ಇರುವುದರಿಂದ ಇದು ರಾಷ್ಟ್ರೀಯ ಇಂಧನ ನೀತಿಯ ಮೇಲೆ ಪರಿಣಾಮ ಬೀರಬಹುದು,” ಎಂದು ಅಟಾರ್ನಿ ಜನರಲ್ ಕಳವಳ ವ್ಯಕ್ತಪಡಿಸಿದರು.
ಅಲ್ಲದೆ, ಈ ವರ್ಷದ ಅಕ್ಟೋಬರ್ನಲ್ಲಿ ಹೊಸ ಒಪ್ಪಂದಗಳು ನವೀಕರಣಗೊಳ್ಳಲಿದ್ದು, ಅದಕ್ಕೂ ಮುನ್ನವೇ ಈ ಗೊಂದಲ ಬಗೆಹರಿಯಬೇಕಿದೆ. ಹೀಗಾಗಿ ಹೈಕೋರ್ಟ್ ಮೆಟ್ಟಿಲೇರಿ ಸಮಯ ವ್ಯರ್ಥ ಮಾಡುವ ಬದಲು, ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ಗೆ ವರ್ಗಾಯಿಸಲು (Transfer Petition) ಅನುಮತಿ ನೀಡಬೇಕೆಂದು ಅವರು ಕೋರಿದರು.
ಸುಪ್ರೀಂ ಕೋರ್ಟ್ ನಡೆ:
ಕೇಂದ್ರ ಸರ್ಕಾರ ಮತ್ತು ಬಿಪಿಸಿಎಲ್ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್, ಈ ವಿಷಯದ ಕುರಿತು ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ನ್ಯಾಯಾಲಯದ ರಜಾಕಾಲದ ನಂತರ ಮುಂದಿನ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.
ರೈತರ ಆದಾಯ ವೃದ್ಧಿ, ಪರಿಸರ ಸಂರಕ್ಷಣೆ ಮತ್ತು ದೇಶದ ಇಂಧನ ಭದ್ರತೆಯ ದೃಷ್ಟಿಯಿಂದ ಎಥೆನಾಲ್ ಮಿಶ್ರಣ ಅತ್ಯಂತ ಮಹತ್ವದ್ದು ಎಂದು ಸರ್ಕಾರ ಈ ಹಿಂದೆ ಪದೇ ಪದೇ ಸಮರ್ಥಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.





Leave a comment