Home ದಾವಣಗೆರೆ West Bengal Budget: ಮಮತಾ ಸರ್ಕಾರ ಮುಸ್ಲಿಂರಿಗೆ ನೀಡಿದ್ದ ₹5,713 ಕೋಟಿ ಅನುದಾನ ₹2,165 ಕೋಟಿಗೆ ಇಳಿಸಿದ ಬಿಜೆಪಿ ಸರ್ಕಾರ!
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

West Bengal Budget: ಮಮತಾ ಸರ್ಕಾರ ಮುಸ್ಲಿಂರಿಗೆ ನೀಡಿದ್ದ ₹5,713 ಕೋಟಿ ಅನುದಾನ ₹2,165 ಕೋಟಿಗೆ ಇಳಿಸಿದ ಬಿಜೆಪಿ ಸರ್ಕಾರ!

Share
ಸರ್ಕಾರ
Share

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದಿರುವ ಮೊದಲ ಬಿಜೆಪಿ ನೇತೃತ್ವದ ಸರ್ಕಾರವು ತನ್ನ ಚೊಚ್ಚಲ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ವ್ಯವಹಾರಗಳು ಮತ್ತು ಮದರಸಾ ಶಿಕ್ಷಣ ಇಲಾಖೆಯ ಅನುದಾನದಲ್ಲಿ ಭಾರಿ ಕಡಿತವನ್ನು ಪ್ರಸ್ತಾಪಿಸಿದೆ. ಈ ಕ್ರಮವು ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಹಾಗೂ ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.

2026-27ನೇ ಸಾಲಿನ ಬಜೆಟ್ ಮಂಡಿಸಿದ ಹಣಕಾಸು ಸಚಿವ ಸ್ವಪನ್ ದಾಸ್‌ಗುಪ್ತಾ ಅವರು ಅಲ್ಪಸಂಖ್ಯಾತರ ಇಲಾಖೆಗೆ ₹2,165.42 ಕೋಟಿ ಹಂಚಿಕೆ ಮಾಡುವುದಾಗಿ ಘೋಷಿಸಿದ್ದಾರೆ. ಇದು ಈ ಹಿಂದೆ ಅಧಿಕಾರದಲ್ಲಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರವು ಫೆಬ್ರವರಿಯಲ್ಲಿ ಮಂಡಿಸಿದ್ದ ಮಧ್ಯಂತರ ಬಜೆಟ್‌ನಲ್ಲಿ (ವೋಟ್-ಆನ್-ಅಕೌಂಟ್) ನಿಗದಿಪಡಿಸಿದ್ದ ₹5,713 ಕೋಟಿಗೆ ಹೋಲಿಸಿದರೆ ಅರ್ಧಕ್ಕಿಂತಲೂ ಕಡಿಮೆಯಾಗಿದೆ.

ತುಷ್ಟೀಕರಣ ರಾಜಕಾರಣಕ್ಕೆ ಬ್ರೇಕ್?

ಹಿಂದಿನ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ಅಲ್ಪಸಂಖ್ಯಾತರ ಇಲಾಖೆಗೆ ಭಾರಿ ಪ್ರಮಾಣದ ಹಣವನ್ನು ನೀಡುತ್ತಿರುವುದನ್ನು ಬಿಜೆಪಿ ನಿರಂತರವಾಗಿ ಟೀಕಿಸುತ್ತಾ ಬಂದಿತ್ತು. ಇದನ್ನು ‘ತುಷ್ಟೀಕರಣದ ರಾಜಕಾರಣ’ ಎಂದು ಕರೆದಿದ್ದ ಬಿಜೆಪಿ, ಇದೀಗ ತನ್ನ ಮೊದಲ ಬಜೆಟ್‌ನಲ್ಲೇ ಅನುದಾನವನ್ನು ಕಡಿತಗೊಳಿಸುವ ಮೂಲಕ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಬಜೆಟ್ ಘೋಷಣೆಯ ಬೆನ್ನಲ್ಲೇ ರಾಜ್ಯಾದ್ಯಂತ ಮದರಸಾಗಳ ಮೂಲಸೌಕರ್ಯ ಮತ್ತು ಕಾರ್ಯವೈಖರಿಯನ್ನು ಪರಿಶೀಲಿಸಲು ಸರ್ಕಾರವು ಸಮೀಕ್ಷೆಯೊಂದನ್ನು ಪ್ರಾರಂಭಿಸಿದ್ದು, ಜುಲೈ 5ರೊಳಗೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.

ವಿರೋಧ ಪಕ್ಷಗಳ ತೀವ್ರ ಆಕ್ಷೇಪ:

ಸರ್ಕಾರದ ಈ ಕ್ರಮದ ವಿರುದ್ಧ ಧ್ವನಿ ಎತ್ತಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಿತಬ್ರತಾ ಬ್ಯಾನರ್ಜಿ, “ಹಿಂದಿನ ಸರ್ಕಾರಗಳ ಅವಧಿಯಲ್ಲಿ ಈ ಇಲಾಖೆಯ ಬಜೆಟ್ ₹5,000 ಕೋಟಿಯಿಂದ ₹5,600 ಕೋಟಿ ಆಸುಪಾಸಿನಲ್ಲಿ ಇರುತ್ತಿತ್ತು. ಆದರೆ ಪ್ರಸಕ್ತ ಬಜೆಟ್‌ನಲ್ಲಿ ಇದನ್ನು ಅರ್ಧಕ್ಕಿಂತ ಹೆಚ್ಚು ಕಡಿತಗೊಳಿಸಿರುವುದು ಅತ್ಯಂತ ದುರದೃಷ್ಟಕರ. ಪ್ರಧಾನಿ ಹಾಗೂ ಮುಖ್ಯಮಂತ್ರಿಗಳ ‘ಸಬ್ ಕಾ ಸಾತ್, ಸಬ್ ಕಾ ವಿಕಾಸ್’ ಘೋಷಣೆ ಬಜೆಟ್‌ನಲ್ಲಿ ಎಲ್ಲಿಯೂ ಕಾಣಿಸುತ್ತಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಟಿಎಂಸಿ ಶಾಸಕ ಕುನಾಲ್ ಘೋಷ್ ಅವರು ಪ್ರತಿಕ್ರಿಯಿಸಿ, “ನಮ್ಮ ಮಮತಾ ದೀದಿ ಸರ್ಕಾರ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಿದೆ. ಆದಾಗ್ಯೂ, ಇದು ಹೊಸ ಸರ್ಕಾರವಾಗಿರುವುದರಿಂದ ಅವರಿಗೆ ಸ್ವಲ್ಪ ಕಾಲಾವಕಾಶ ನೀಡಬೇಕಿದೆ. ನಾವು ರಚನಾತ್ಮಕ ವಿರೋಧ ಪಕ್ಷದ ಪಾತ್ರವನ್ನು ವಹಿಸಲಿದ್ದೇವೆ,” ಎಂದು ಮೃದು ಧೋರಣೆ ತಳೆದಿದ್ದಾರೆ. ಎಜೆಯುಪಿ ಮುಖ್ಯಸ್ಥ ಹುಮಾಯೂನ್ ಕಬೀರ್ ಅವರು ಮಾತನಾಡಿ, ಅಲ್ಪಸಂಖ್ಯಾತರನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ದೂಡುವ ಸರ್ಕಾರದ ಪ್ರಯತ್ನಗಳ ವಿರುದ್ಧ ಅಸೆಂಬ್ಲಿ ಒಳಗೂ ಮತ್ತು ಹೊರಗೂ ಧ್ವನಿ ಎತ್ತುವುದಾಗಿ ಎಚ್ಚರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles